ಜೀವನದಲ್ಲಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವವರು ನಿಜವಾದ ಸಾಧಕರು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಣಿಬೆನ್ನೂರು: ಜೀವನದಲ್ಲಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವವರು ನಿಜವಾದ ಸಾಧಕರು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಹಳೇ ಪಿ.ಬಿ. ರಸ್ತೆ ಬಳಿಯ ರೋಟರಿ ಪಿಯು ಕಾಲೇಜಿನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸ್ಥಳೀಯ ಟ್ಯಾಗೋರ್ ಏಜುಕೇಶನ್ ಸೊಸೈಟಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯನಿಗೆ ಚಾರಿತ್ರ್ಯ ಬಹಳ ಮುಖ್ಯವಾಗಿದ್ದು, ಅದು ಶಾಲೆ ಮತ್ತು ತಾಯಿಯಿಂದ ದೊರಕುತ್ತದೆ. ಶಿಕ್ಷಕರ ಸಾಮರ್ಥ್ಯವು ವಿದ್ಯಾರ್ಥಿಗಳ ಸಾಧನೆ ಮೇಲೆ ಅವಲಂಬಿಸಿದೆ. ಪೋಷಕರು ಮಕ್ಕಳಲ್ಲಿ ಪ್ರಶ್ನಾ ಮನೋಭಾವ ಮತ್ತು ತರ್ಕಬದ್ಧ ಚಿಂತನೆಯನ್ನು ಬೆಳೆಸಬೇಕು. ಪ್ರಾಮಾಣಿಕತೆ ಹಾಗೂ ಶ್ರಮದಿಂದ ಇಂತಹ ಸಂಸ್ಥೆ ಕಟ್ಟಲು ಸಾಧ್ಯ. ಸಂಸ್ಥೆಯು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಒಂದು ಅಮೃತಗಳಿಗೆಯಾಗಿದೆ. ಹುಬ್ಬಳ್ಳಿಯಲ್ಲಿ 1960ರಲ್ಲಿ ರೋಟರಿ ಶಾಲೆ ಪ್ರಾರಂಭವಾಗಿದ್ದು ನಾನು ಕೂಡ ರೋಟರಿ ವಿದ್ಯಾರ್ಥಿ. ನಾವು ಚಿಕ್ಕವರಾದಾಗ ಮಾಡಿದ ನೆನಪು ಕೊನೆಯವರೆಗೂ ಇರುತ್ತದೆ. ಚಿಕ್ಕಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚಿರುತ್ತದೆ. ಅವರಿಗೆ ಕಲಿಕೆ ಜೊತೆ ಸಂಸ್ಕಾರ, ಸಂಸ್ಕೃತಿ ಕಲಿಸಿದಾಗ ಉತ್ತಮ ನಾಗರೀಕರಾಗುತ್ತಾರೆ. ಶ್ರೇಷ್ಠ ಭಾರತ ಕಟ್ಟಲು ನಾವು ಇಂದಿನ ಮಕ್ಕಳನ್ನು ತಯಾರ ಮಾಡಬೇಕು ಎಂದರು. ಸಮಾರಂಭ ಉದ್ಘಾಟಿಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪಠ್ಯದೊಂದಿಗೆ ಕೌಶಲ್ಯಯುತ ಶಿಕ್ಷಣ ಅಗತ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿಗಿಂತ ಕೌಶಲ್ಯಕ್ಕೆ ಹೆಚ್ಚಿನ ಬೆಲೆಯಿದೆ. ಇಂದಿನ ಯುವ ಜನಾಂಗ ಕೇವಲ ಎಂಜಿನಿಯರ್, ಡಾಕ್ಟರ್, ಚಾರ್ಟರ್ಡ್ ಅಕೌಂಟಂಟ್ನಂತಹ ವೃತ್ತಿಗಳಿಗೆ ಜೋತು ಬೀಳದೇ ಮತ್ತಷ್ಟು ವೈವಿಧ್ಯಮಯ ವೃತ್ತಿಗಳತ್ತ ಗಮನಹರಿಸಬೇಕು. ಮೊಬೈಲ್ನ್ನು ಸೆಲ್ಫಿ ಖಯಾಲಿಗೆ ಬಳಸುವ ಬದಲು ಭವಿಷ್ಯದ ಶಿಕ್ಷಣದ ಅನ್ವೇಷಣೆಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ರೋಟರಿ ಜಿಲ್ಲೆ 3170ರ ನಿಕಟಪೂರ್ವ ಗರ್ವನರ್ ಶರತ್ ಪೈ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ವಿ.ಪಿ.ಲಿಂಗನಗೌಡ್ರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ಯಾಗೋರ್ ಏಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಬಸವರಾಜ ಕೇಲಗಾರ ಅಧ್ಯಕ್ಷತೆ ವಹಿಸಿದ್ದರು. ಟ್ಯಾಗೋರ್ ಏಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಜೆ. ಹಿರೇಮಠ, ಕಾರ್ಯದರ್ಶಿ ಡಾ.ನಾರಾಯಣ ಪವಾರ, ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಡಾ. ದೀಪಾಲಿ ಪುನೀತ್, ವೀರೇಶ ಮೋಟಗಿ, ಗದಿಗೆಪ್ಪ ಹೊಟ್ಟಿಗೌಡ್ರ, ಅರವಿಂದಕುಮಾರ ಜೈನ್, ವಿ.ಸಿ. ಪೊಲೀಸಗೌಡ್ರ, ಶಂಕರಗೌಡ ಮಾಳಗಿ, ಎಫ್.ಬಿ. ಹೊನ್ನಾಳಿ, ಉಮೇಶ ಹೊನ್ನಾಳಿ, ಸುಧೀರ ಕುರವತ್ತಿ, ಎಂ.ಆರ್.ಪಾಟೀಲ, ಡಾ.ಬಿ.ಎಸ್. ಕರ್ಜಗಿ, ಡಾ.ಎಂ.ಎಂ.ಅನಂತರೆಡ್ಡಿ, ವಾಸುದೇವ ಗುಪ್ತಾ ಮತ್ತಿತರರಿದ್ದರು.