ಸಾರಾಂಶ
ಕೊಪ್ಪಳ:
ರಥೋತ್ಸವಕ್ಕೆ ಬಂದ ಜನ ನೋಡಿದರೇ ನಿಮ್ಮ ಜಾತ್ರೆ ದೊಡ್ಡದು, ನಮ್ಮದೇ ಸಣ್ಣದು ಅನಿಸುತ್ತೆ. ಇಲ್ಲಿಯ ಜನರ ಭಕ್ತಿ, ಶ್ರದ್ಧೆ ಮತ್ತು ಉತ್ಸಾಹ ಯಾವ ಮಟ್ಟದಲ್ಲಿ ಇರುತ್ತದೆ ಎಂಬುದಕ್ಕೆ ಶಾಂಭವಿ ದೇವಿಯ ಮಹಾರೋತ್ಸವವೇ ಸಾಕ್ಷಿ ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಹಲಗೇರಿ ಗ್ರಾಮದ ಶ್ರೀಶಾಂಭವಿ ದೇವಿ ಮಹಾರಥೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಒಂದು ಊರಿನಲ್ಲಿ ಬಹಳಷ್ಟು ಜನ ಶ್ರೀಮಂತರಿದ್ದಾರೆ ಎಂದರೆ ಅದು ನಿಜವಾದ ವೈಭವವಲ್ಲ. ಯಾವ ಊರಿನಲ್ಲಿ ಜಾತಿ-ಪಕ್ಷ ಮರೆತು ಹಿರಿಯರು-ಯುವಕರು ಊರಿನ ಹಿತಕ್ಕಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಾರೋ ಅವರೇ ನಿಜವಾದ ಶ್ರೀಮಂತರು. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಜಾತ್ರೆ ಯಶಸ್ಸಿಗೆ ದುಡಿಯುತ್ತಿದ್ದಾರೆ. ಹೀಗೆ ಶಾಂಭವಿ ದೇವಿ ಜಾತ್ರೆ ಉತ್ತರೋತ್ತರವಾಗಿ ಬೆಳೆಯಲಿ ಎಂದರು.
ಹಿರೇಸಿಂದೋಗಿಯ ಕಪ್ಪತ್ತೇಶ್ವರ ಮಠದ ಜಗದ್ಗುರು ಚಿದಾನಂದ ಸ್ವಾಮೀಜಿ, ಬಿಕನಳ್ಳಿ-ಮೈನಳ್ಳಿಯ ಉಜ್ಜನಿಯ ಶಾಖಾಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆದವಟ್ಟಿ ಪಟ್ಟಾಧ್ಯಕ್ಷ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಈ ವೇಳೆ ಶಾಂಭವಿ ದೇವಿ ಸೇವಾ ಸಮಿತಿ ಉಪಾಧ್ಯಕ್ಷ ಕುಬೇರಪ್ಪ ಗೊರವರ್, ಬಿಜೆಪಿ ಮುಖಂಡರಾದ ಬಸವರಾಜ ಕ್ಯಾವಟರ್, ಮಹಾಂತೇಶ ಮೈನಳ್ಳಿ, ಸೇವಾ ಸಮಿತಿ ನಿರ್ದೇಶಕ ಗವಿಸಿದ್ದನಗೌಡ ಪಾಟೀಲ್, ಬಸನಗೌಡ ಪಾಟೀಲ್, ಶಂಭುಲಿಂಗನೌಡ ಪಾಟೀಲ್, ಮಂಜುನಾಥ ಮ್ಯಾಗಳಮನಿ, ಶರಣಪ್ಪ ಬಿನ್ನಾಳ, ಹನುಮಂತ ಹಳ್ಳಿಕೇರಿ, ರಾಜುಗೌಡ ಪಾಟೀಲ್, ದೇವೇಂದ್ರಪ್ಪ ಅಬ್ಬಿಗೇರಿ, ದೇವಪ್ಪ ಓಜನಹಳ್ಳಿ, ನಾಗರಾಜ ಪಾಲಂಕರ, ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಹಲಗೇರಿ ಗ್ರಾಪಂ ಪಿಡಿಒ ಅಶೋಕ ರಾಂಪುರ, ದೇವೇಂದ್ರಪ್ಪ ಬಡಿಗೇರ, ಮುಖಂಡರಾದ ವರುಣಕುಮಾರ ನಿಟ್ಟಾಲಿ ಸೇರಿದಂತೆ ಇತರರಿದ್ದರು.