ರಾಜಕೀಯ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ: ಯು.ಟಿ.ಖಾದರ್‌

| Published : Mar 06 2024, 02:21 AM IST / Updated: Mar 06 2024, 01:05 PM IST

ರಾಜಕೀಯ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ: ಯು.ಟಿ.ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ಸುಧಾರಣೆ ಮಾಡುವ ಉತ್ತಮ ರಾಜಕಾರಣಿಯನ್ನು ಆಯ್ಕೆ ಮಾಡುವ ಮೌಲ್ಯವು ಮತದಾನಕ್ಕೆ ಇದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರತಿ ಕ್ಷೇತ್ರಗಳಿಗೂ ಅಧ್ಯಯನ ನಡೆಸಲು ಕಾಲೇಜು, ವಿಶ್ವವಿದ್ಯಾಲಯಗಳಿರುವಂತೆ ಉತ್ತಮ ರಾಜಕಾರಣಿಯಾಗಲು ಮುಂದಿನ ದಿನದಲ್ಲಿ ರಾಜಕೀಯ ತರಬೇತಿ ಕೇಂದ್ರವನ್ನು ಆರಂಭಿಸುವ ಚಿಂತನೆ ಇದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಕೀಲರಿಗೆ, ವೈದ್ಯರಿಗೆ, ಪತ್ರಕರ್ತರು ಸೇರಿದಂತೆ ಇತರೆ ಹಲವು ಕ್ಷೇತ್ರಗಳಿಗೆ ಕಾಲೇಜು, ವಿಶ್ವವಿದ್ಯಾಲಯಗಳಿವೆ. 

ಆದರೆ, ಉತ್ತಮ ರಾಜಕಾರಣಿಯಾಗಲು ಯಾವುದೇ ಸಂಸ್ಥೆಗಳಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ದಿನದಲ್ಲಿ ರಾಜಕೀಯ ತರಬೇತಿ ಕೇಂದ್ರವನ್ನು ಪ್ರಾರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಸಮಾಜ ಸುಧಾರಣೆ ಮಾಡುವ ಉತ್ತಮ ರಾಜಕಾರಣಿಯನ್ನು ಆಯ್ಕೆ ಮಾಡುವ ಮೌಲ್ಯವು ಮತದಾನಕ್ಕೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮತದಾನದ ಮಹತ್ವವನ್ನು ತಿಳಿದುಕೊಳ್ಳಬೇಕು. 

ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರಿಗೂ ಒಂದೇ ಮತದಾನದ ಹಕ್ಕನ್ನು ಸಂವಿಧಾನ ನೀಡಲಾಗಿದೆ. ಆದರೆ, ಶ್ರೀಮಂತರಿಗಿಂತ ಹೆಚ್ಚಾಗಿ ಬಡವರೇ ಮತದಾನ ಮಾಡುತ್ತಾರೆ. 

ಶಿಕ್ಷಣ ಪಡೆದವರು ಮತ ಹಾಕುವುದಿಲ್ಲ ಎನ್ನುವುದೇ ದುರದುಷ್ಟಕರ. ಯುವಜನಾಂಗವು ಮತದಾನ ಮೌಲ್ಯವನ್ನು ಅರಿತು ತಮ್ಮ ಹಕ್ಕ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಇತರರು ಉಪಸ್ಥಿತರಿದ್ದರು.

ತಿಂಡಿ, ಊಟದ ಜತೆಗೆ ಹಾಸಿಗೆ: ಖಾದರ್‌ ಚಟಾಕಿ

ಸದನದೊಳಗೆ ಹಾಜರಾತಿ ಸಂಖ್ಯೆ ಹೆಚ್ಚಿಸಲು ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟದ ಜತೆಗೆ ಸ್ವಲ್ಪ ಹೊತ್ತು ನಿದ್ದೆ ಮಾಡಲು ಹಾಸಿಗೆ ವ್ಯವಸ್ಥೆ ಮಾಡಬೇಕಿದೆ ಎಂದು ಸಭಾಧ್ಯಕ್ಷ ಖಾದರ್‌ ಚಟಾಕಿ ಹಾರಿಸಿದರು.

ಒಂದು ದಿನ ಶಾಸಕರಾದ ವಿದ್ಯಾರ್ಥಿಗಳಿಗೆ ಇಷ್ಟೊಂದು ಖುಷಿ ಇರುವಾಗ, ಐದು ವರ್ಷ ಶಾಸಕರಾಗುವವರಿಗೆ ಎಷ್ಟು ಖುಷಿ ಇರುತ್ತದೆ. ಆದರೆ, ಆ ಖುಷಿ ಸದನದೊಳಗೆ ಬರಲು ಇರಲ್ಲ. ಹೀಗಾಗಿ ಹಾಜರಾತಿ ಹೆಚ್ಚಿಸಲು ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. 

ಕೆಲವರು ಊಟದ ನಂತರ ಅರ್ಧಗಂಟೆ ನಿದ್ದೆ ಬೇಕು ಎಂದು ಕೇಳಿದ್ದಾರೆ. ಸದನದ ಕೋರಂ ಆಗಲು 25 ಶಾಸಕರ ಅಗತ್ಯ ಇದೆ. ಹೀಗಾಗಿ ಅಷ್ಟು ಪ್ರಮಾಣದಲ್ಲಿ ಹಾಸಿಗೆ ವ್ಯವಸ್ಥೆ ಮಾಡಬೇಕಾಗಿದೆ ಎಂದರು.