ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಶಾಲಾ ಮಕ್ಕಳಿಗೆ ಆರೋಗ್ಯವರ್ಧಕವಾಗಿರುವ ಒಣದ್ರಾಕ್ಷಿ ವಿತರಣೆ ಕುರಿತು ವಿಜಯಪುರದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ಮಹಾರಾಷ್ಟ್ರದ ಪುಣೆಯ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳ, ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ವಿತರಣೆ ಜೊತೆಗೆ ಒಣದ್ರಾಕ್ಷಿ ವಿತರಣೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸುವೆ. ವಿಜಯಪುರದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಸಿಎಂ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಭಾರತದಲ್ಲೇ ಹಸಿದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಗೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯನ್ನು ಒಣದ್ರಾಕ್ಷಿ ಹಬ್ ಮಾಡಿ, ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ವಿಷಯವಾಗಿ ಸಂಶೋಧನೆ ನಡೆಸಲು ಮುಂದಾದಲ್ಲಿ ವಿಜಯಪುರದಲ್ಲಿ ಎಪಿಎಂಸಿ ಮೂಲಕ 20 ಎಕರೆ ಜಮೀನು ನೀಡುವುದಾಗಿ ಘೋಷಿಸಿದರು. ಜಿಲ್ಲೆಯಲ್ಲಿ ವೈನ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ 141 ಎಕರೆ ಜಮೀನು ನೀಡಿದ್ದು, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ 35 ಕೋಲ್ಡ್ ಸ್ಟೋರೆಜ್ಗಳನ್ನೂ ನಿರ್ಮಿಸಲಾಗುತ್ತಿದೆ. ದ್ರಾಕ್ಷಿಯಲ್ಲಿ ಬಹುತೇಕ ಒಣದ್ರಾಕ್ಷಿ ಉತ್ಪಾದಿಸುತ್ತಿದ್ದು, ವಿಷಮುಕ್ತ ಒಣದ್ರಾಕ್ಷಿ ಉತ್ಪಾದನೆಗೆ ಆದ್ಯತೆ ನೀಡುವ ಸಂಶೋಧನೆ ನಡೆಯಬೇಕಿದೆ ಎಂದು ಹೇಳಿದರು.
ವಿಶಿಷ್ಟ ಸ್ವಾದದ ಉತ್ಕೃಷ್ಟ ದರ್ಜೆಯ ಒಣದ್ರಾಕ್ಷಿ ಉತ್ಪಾದಿಸುವ ವಿಜಯಪುರದ ಹಸಿರು ದ್ರಾಕ್ಷಿಗೆ ವಿಜಯಪುರ ಗ್ರೀನ್ ಕ್ರಿಸ್ಮಿಸ್ ಹೆಸರಿನಲ್ಲಿ ಜಿಐ (ಭೌಗೋಳಿಕ ಸೂಚ್ಯಂಕ) ಟ್ಯಾಗ್ ಪಡೆಯಲು ಸಿದ್ಧತೆ ನಡೆದಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ಡಾ.ಫಕೃದ್ಧಿನ ಅಧ್ಯಕ್ಷತೆಯಲ್ಲಿ ಸಮಿತಿ ಅಗತ್ಯ ದಾಖಲೆ ಹಾಗೂ ಪೂರಕ ಮಾಹಿತಿ ಸಂಗ್ರಹದಲ್ಲಿ ತೊಡಗಿದೆ. ಶೀಘ್ರವೇ ವಿಜಯಪುರ ಹಸಿರು ಒಣದ್ರಾಕ್ಷಿಗೆ ಜಿಐ ಟ್ಯಾಗ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ಯಪಡಿಸಿದರು.ಬಾಕ್ಸ್ಶೇ.3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದ್ರಾಕ್ಷಿ ಬೆಳೆಗಾರರಿಗೆ ಒಣ ದ್ರಾಕ್ಷಿ ಘಟಕ ನಿರ್ಮಾಣ ಸೇರಿ ದ್ರಾಕ್ಷಿ ಕೃಷಿ ಅಭಿವೃದ್ಧಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ರೈತರ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಬೃಹತ್ ಸಭಾಭವನ ನಿರ್ಮಿಸಲಿದೆ. ಭವಿಷ್ಯದಲ್ಲಿ ಅದೇ ಸಭಾಭವನದಲ್ಲಿ ರಾಷ್ಟ್ರಮಟ್ಟದ ದ್ರಾಕ್ಷಿ ಬೆಳೆಗಾರರ ಸಮಾವೇಶ-ವಿಚಾರ ಸಂಕಿರಣದ ಮೂಲಕವೇ ಲೋಕಾರ್ಪಣೆಗೊಳ್ಳಲಿ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಇದೇ ವೇಳೆ ದ್ರಾಕ್ಷಿ ಬೆಳೆಯುವಲ್ಲಿ ಸಾಧನೆ ಮಾಡಿರುವ ಕರ್ನಾಟಕದ ವಿ.ಡಿ.ಪಾಟೀಲ, ಮಹಾರಾಷ್ಟ್ರದ ಸೋಲಾಪುರದ ಮಹಾದೇವ ಚಾಕೋಟೆ, ನಾಸಿಕ್ನ ಅಶೋಕ ಗಾಯಕವಾಡ, ಪುಣೆಯ ಅನಿಲ ಮೆಹರೆ, ಸಾಂಗಲಿಯ ಜಗನ್ನಾಥ ಮಸ್ಕೆ, ತಮಿಳುನಾಡಿನ ಸೆಂಥಿಲಕುಮಾರ, ಆಂಧ್ರದ ವೆಂಟಕರೆಡ್ಡಿ ಕನಕರೆಡ್ಡಿ ಇವರಿಗೆ ಸಚಿವ ಶಿವಾನಂದ ಪಾಟೀಲ ದ್ರಾಕ್ಷಿ ಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರು ಒಣದ್ರಾಕ್ಷಿ ಹಾರಹಾಕಿ ವಿಶಿಷ್ಟವಾಗಿ ಸನ್ಮಾನಿಸಿದರು.
ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಫನ್ ಕಾಂಚನ್, ಉಪಾಧ್ಯಕ್ಷ ಬಿ.ಎಂ.ಕೋಕರೆ, ಕೈಲಾಸ್ ಭೋಸಲೆ, ಎಸ್.ಡಿ.ಸಾವಂತ, ಮಾರುತಿ ಚವ್ಹಾಣ, ಎಸ್.ಡಿ.ಶಿಖಾಮಣಿ, ಪ್ರಕಾಶ ಗಣಿ, ಕೌಶಿಕ್ ಬ್ಯಾನರ್ಜಿ, ಬಾಗಲಕೋಟೆ ತೋಟಗಾರಿಕೆ ವಿವಿಯ ಕುಲಪತಿ ಡಾ.ವಿಷ್ಣುವರ್ಧನ ಸೇರಿ ಇತರರು ಉಪಸ್ಥಿತರಿದ್ದರು.