ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ದೇವನಹಳ್ಳಿಯಲ್ಲಿ ರೈತರ ಜಮೀನನ್ನು ಕಬಳಿಸುವ ರಾಜ್ಯ ಸರ್ಕಾರದ ಹುನ್ನಾರವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಜು.೨೫ ರಂದು ರಾಜ್ಯಾದ್ಯಂತ ಎಲ್ಲ ರೈತರು ಭಾಗವಹಿಸಲಿದ್ದು ಚಾಮರಾಜನಗರ ಜಿಲ್ಲೆಯಿಂದಲೂ ಸಹಸ್ರಾರು ಸಂಖ್ಯೆಯ ರೈತರು ಭಾಗವಹಿಸಬೇಕು ಎಂದು ರೈತ ಸಂಘದ ರಾಜ್ಯ ರಾಜಕೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಕರೆ ನೀಡಿದರು.ಮಂಗಳವಾರ ತಾಲೂಕಿನ ಹೊನ್ನೂರು ಗ್ರಾಮದ ಮಠದ ಮುಂಭಾಗ ನಡೆದ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೊನ್ನೂರು ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅಧೀನ ಸಂಸ್ಥೆ ಕೆಐಡಿಬಿ ರೈತರ ೧೭೭೦ ಎಕರೆ ಜಮೀನನ್ನು ವಶಪಡಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಇದಕ್ಕೆ ರೈತರ ವಿರೋಧವಿದ್ದು ಯಾವುದೇ ಕಾರಣಕ್ಕೂ ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಹಾಗಾಗಿ ರೈತರ ಬೆಂಬಲಕ್ಕೆ ನಾವು ನಿಲ್ಲಬೇಕಿದೆ. ಈ ಉದ್ದೇಶದಿಂದ ಜೂ.೨೫ ರಂದು ರಾಜ್ಯಾದ್ಯಂತ ರೈತರು ಬೆಂಗಳೂರಿನ ದೇವನಹಳ್ಳಿಯಲ್ಲಿ ಜಮಾವಣೆಗೊಳ್ಳುತ್ತಿದ್ದು ಇಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ನಿರ್ಧಸಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ರೈತರು ವಾಹನಗಳನ್ನು ಮಾಡಿಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ನಮ್ಮ ದೇಶದಲ್ಲಿ ಶೇ.೬೭ ರಷ್ಟು ಯುವಕರು ಇದ್ದಾರೆ. ಗ್ರಾಮೀಣ ಭಾಗದಲ್ಲಿ ಯುವ ರೈತರು ಹೆಚ್ಚಾಗಿದ್ದಾರೆ. ನಾವು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ರೈತರ ಸಮಸ್ಯೆಗಳನ್ನು ಅರಿತು ಇದನ್ನು ನಿವಾರಿಸುವ ಕ್ರಮ ವಹಿಸಬೇಕು. ನಮ್ಮನ್ನಾಳುವ ಸರ್ಕಾರಗಳು ರೈತರಿಗೆ ಮೋಸ ಮಾಡುತ್ತಲೇ ಬರುತ್ತಿವೆ. ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಪ್ರತಿಭಟಿಸಬೇಕು, ರೈತರಿಗೆ ಮಾರಕವಾಗುವ ಕಾನೂನುಗಳನ್ನು ರೂಪಿಸಿದ್ದಲ್ಲಿ ಇದನ್ನು ವಿರೋಧಿಸಬೇಕು. ಎಂದು ಕಿವಿ ಮಾತು ಹೇಳಿದರು.ಸಾಹುಕಾರ್ ಎಚ್.ಎಸ್. ಮಹೇಂದ್ರ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಂಜುಕಿರಣ್ ಮಾತನಾಡಿದರು. ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಸನ್ನ, ಸಿದ್ದಲಿಂಗಸ್ವಾಮಿ, ಅಂಬಳೆ ಶಿವಕುಮಾರ್, ಮಾಡ್ರಳ್ಳಿ ಪಾಪಣ್ಣ, ನಟರಾಜು, ಈಶ್ವರಪ್ರಭು, ಕರಿಯಪ್ಪ, ಮಹೇಶ್, ಎ.ಎನ್. ಶಿವಪ್ರಸಾದ್, ಮಹದೇವಸ್ವಾಮಿ, ಶಾಂತಪ್ಪ ಸೇರಿದಂತೆ ನೂರಾರು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.