- ಉತ್ತರ ಭಾರತದಿಂದ ಬಂದ ಹೋಲ್ಸೇಲ್ ವ್ಯಾಪಾರಿಗಳಿಂದಾಗಿ ಬದುಕಿಗೆ ಕುತ್ತು: ಆರೋಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಉತ್ತರ ಭಾರತದಿಂದ ಬಂದಿರುವ ಮೊಬೈಲ್ ಹೋಲ್ಸೇಲ್ ವ್ಯಾಪಾರಿಗಳ ಅಸಂಘಟಿತ ನಡೆಯಿಂದಾಗಿ ಸ್ಥಳೀಯ ಮೊಬೈಲ್ ಮೆಕ್ಯಾನಿಕ್ಗಳ ಬದುಕು ದಿನೇದಿನೇ ಕಷ್ಟವಾಗುತ್ತಿದೆ. ಹೋಲ್ ಸೇಲ್ ಅಂಗಡಿಯವರು ಮೊಬೈಲ್ ರಿಪೇರಿ ಮಾಡದೇ ಕೇವಲ ವ್ಯಾಪಾರಕ್ಕೆಷ್ಟೇ ಸೀಮಿತವಾಗಿದ್ದರೆ ಎಲ್ಲರಿಗೂ ಅನುಕೂಲ ಆಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ಮೊಬೈಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಮಂಗಳವಾರ ಮೊಬೈಲ್ ಮೆಕ್ಯಾನಿಕ್ಗಳು ಜಿಲ್ಲಾದ್ಯಂತ ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ನಗರದ ಅಶೋಕ ರಸ್ತೆಯ ಮುಖ್ಯ ರಸ್ತೆಯಲ್ಲಿ ಧರಣಿ ನಡೆಸಿ, ಗಾಂಧಿ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ವಾಹನಗಳಲ್ಲಿ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾನಿರತರು ಮಾತನಾಡಿ, ಹೋಲ್ಸೇಲ್ ವ್ಯಾಪಾರಕ್ಕೆ ಸೀಮಿತವಾಗಿರಬೇಕಾದ ಅಂಗಡಿಯವರು ಇತ್ತೀಚೆಗೆ ನೇರವಾಗಿ ಮೊಬೈಲ್ ರಿಪೇರಿ ಮೆಕ್ಯಾನಿಕ್ ಕೆಲಸಗಳನ್ನೂ ಆರಂಭಿಸಿದ್ದಾರೆ. ಸ್ಥಳೀಯ ಮೆಕ್ಯಾನಿಕ್ಗಳ ಗ್ರಾಹಕರನ್ನು ಕಸಿದುಕೊಳ್ಳುತ್ತಿದ್ದಾರೆ. ದಾವಣಗೆರೆಯಲ್ಲಿ 400 ರಿಂದ 500 ಕುಟುಂಬಗಳು ಹಲವು ವರ್ಷಗಳಿಂದ ಮೊಬೈಲ್ ಮೆಕ್ಯಾನಿಕ್ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿವೆ. ಉತ್ತರ ಭಾರತದ ಕೆಲ ಹೋಲ್ಸೇಲ್ ವ್ಯಾಪಾರಿಗಳು ನಿಯಮ ಮೀರಿ ಚಿಲ್ಲರೆ ಮಾರಾಟ ಹಾಗೂ ರಿಪೇರಿ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ಇದರಿಂದ ನಮ್ಮ ಸಣ್ಣ ಅಂಗಡಿಗಳು ಮುಚ್ಚುವ ಹಂತಕ್ಕೆ ತಲುಪಿವೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸದೇ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಸ್ಥಳೀಯ ಸಣ್ಣ ವ್ಯಾಪಾರಿಗಳು ಮತ್ತು ಮೆಕ್ಯಾನಿಕ್ಗಳ ಹಿತರಕ್ಷಣೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಹೋಲ್ಸೇಲ್ ವ್ಯಾಪಾರಿಗಳಿಗೆ ಗಡಿ ರೇಖೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶೇರ್ ಅಲಿ ಬೇಗ್, ಎಸ್.ಆರ್. ವೀರೇಶ್, ಎಸ್.ಬಿ.ಪುನೀತ್ ಸಿಂಗ್, ಎಂ.ಜಬೀವುಲ್ಲಾ, ನೂರಾರು ಮೆಕ್ಯಾನಿಕ್ಗಳು, ಇತರರು ಭಾಗವಹಿಸಿದ್ದರು.
- - --21ಕೆಡಿವಿಜಿ42: ದಾವಣಗೆರೆಯಲ್ಲಿ ಮೊಬೈಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹೋಲ್ಸೇಲ್ ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು.