ಕನ್ನಡಪ್ರಭ ವಾರ್ತೆ ಬೆಂಗಳೂರು

ನೀರಿನ ಸಂಪು ಸ್ವಚ್ಛ ಮಾಡುವ ಸಲುವಾಗಿ ಸಿಂಪಡಿಸಿದ ರಾಸಾಯನಿಕದಿಂದ ಉಸಿರುಗಟ್ಟಿ ಮೂವರು ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೆ ಮಾಲೀಕ ಮುನಿಶ್ಯಾಮಪ್ಪ(67), ಪ್ಲಂಬರ್‌ ರುದ್ರಕುಮಾರ್(40), ಡೆಲಿವರಿ ಬಾಯ್‌ ವಿಶ್ವನಾಥ್ ಆಚಾರ್(24) ಮೃತಪಟ್ಟವರು. ಮನೆ ಮಾಲೀಕರಾದ ಮುನಿ ಶ್ಯಾಮಪ್ಪ ಅವರ ಮನೆಯಲ್ಲಿ ಶನಿವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಮನೆ ಮಾಲೀಕರಾದ ಮುನಿ ಶ್ಯಾಮಪ್ಪ ಅವರು, ಪ್ಲಂಬರ್‌ ರುದ್ರಕುಮಾರ್ ಸಹಾಯದೊಂದಿಗೆ ಸಂಪು ಸ್ವಚ್ಛತೆಗೆ ಇಳಿದಿದ್ದರು. ಆದರೆ ಇವರಿಬ್ಬರೂ ಎಷ್ಟೊತ್ತಾದರೂ ಮೇಲೆ ಬರದೇ ಇದ್ದಾಗ ಪಕ್ಕದ ಮನೆಯ ವಿಶ್ವನಾಥ್‌ ನೆರವಿಗೆ ಧಾವಿಸಿದ್ದಾರೆ. ಆದರೆ ವಿಶ್ವನಾಥ್‌ ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಘಟನೆ ವಿವರ: ಸಂಪು ಸ್ವಚ್ಛಗೊಳಿಸುವ ಸಲುವಾಗಿ ಸಂಪಿನ ಒಳಗಡೆ ಇಳಿದು ರಾಸಾಯನಿಕಗಳನ್ನು ಮುನಿಶ್ಯಾಮಪ್ಪ ಸಿಂಪಡಿಸಿದ್ದರು. ರಾಸಾಯನಿಕದ ಗಾಳಿಯನ್ನು ಸೇವಿಸಿ ಮುನಿಶ್ಯಾಮಪ್ಪ, ಪ್ಲಂಬರ್‌ ರುದ್ರಕುಮಾರ್‌ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇವರನ್ನು ರಕ್ಷಿಸಲು ಡೆಲಿವರಿ ಬಾಯ್‌ ವಿಶ್ವನಾಥ್ ಆಚಾರ್ ಕೂಡ ಸಂಪಿಗೆ ಇಳಿದಾಗ ಆತನೂ ಪಜ್ಞೆ ತಪ್ಪಿಬಿದ್ದಿದ್ದಾನೆ. ಇದನ್ನು ಕಂಡ ಮುನಿಶ್ಯಾಮಪ್ಪ ಅವರ ಪತ್ನಿ ಜೋರಾಗಿ ಕೂಗಿ ಕೊಂಡಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೂವರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ದೃಢಪಡಿಸಿದ್ದಾರೆ. ಕಳೆದ 10 ವರ್ಷಗಳಿಂದ ಸಂಪ್‌ ಅನ್ನು ಸ್ವಚ್ಛಗೊಳಿಸಿರಲಿಲ್ಲ. ಜತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.