ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಆಸ್ತಿ ನೋಂದಣಿಯಾಗದ ೪೮೦ ಸರ್ಕಾರಿ ಆಸ್ತಿಗಳ ನೋಂದಣಿ ಮಾಡಲು ರಾಜ್ಯ ರೈತಸಂಘ ಮೂರು ತಿಂಗಳ ಗಡುವು ನೀಡಿದೆ. ನಿಗದಿತ ಅವಧಿಯೊಳಗೆ ಆಸ್ತಿ ನೋಂದಣಿ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತಸಂಘದ ಕಾರ್ಯದರ್ಶಿ ಸಂತೋಷ್ ಅವರು ಎಚ್ಚರಿಸಿದರು.ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ ಅಧಿನಿಯಮ ೨೦೨೬ರಂತೆ ರಾಜ್ಯ ಸರ್ಕಾರ ಸರ್ಕಾರಿ ಶಾಲಾ- ಕಾಲೇಜುಗಳು ಕನಿಷ್ಠ ೧೨ ವರ್ಷಗಳಿಂದ ನಿರಂತರವಾಗಿ ಬಳಸುತ್ತಿರುವ ಭೂಮಿಯು ಎಲ್ಲಾ ಹಕ್ಕು ದಾವೆಗಳು ಮತ್ತು ಬಾಧ್ಯತೆಗಳಿಂದ ಮುಕ್ತಗೊಂಡು ಅದು ಆಯಾಯ ಸರ್ಕಾರಿ ಶಾಲೆಯ ಆಸ್ತಿಯಾಗಿರುತ್ತದೆ ಎಂದಿದೆ. ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿಗೆ ಸರ್ಕಾರದಿಂದ ಸೂಚನೆ ಬಂದು ಒಂದು ತಿಂಗಳು ಕಳೆದರೂ ಜಿಲ್ಲಾಡಳಿತ ಕಾಲಹರಣ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಸಂಬಂಧ ಹೋರಾಟ ರೂಪಿಸಲು ಜೂ.೨೮ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ಸಭೆ ಕರೆಯಲಾಗಿದೆ. ಶಾಲೆಯ ಎಸ್ಡಿಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಹಾಗೂ ಯುವಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.ಸರ್ಕಾರಿ ಶಾಲೆಗಳ ಉಳಿವಿಗಾಗಿ ರಾಜ್ಯ ರೈತಸಂಘದ ಕಾರ್ಯಕರ್ತರು ಜಿಲ್ಲೆಯಲ್ಲಿ ನಡೆಸಿದ ೫೫ ದಿನಗಳ ಸುದೀರ್ಘ ಪಾದಯಾತ್ರೆ ಸಮಯದಲ್ಲಿ ಆನ್ಲೈನ್ ಮೂಲಕ ₹೧,೨೫,೫೦೦ ಹಾಗೂ ಪಾದಯಾತ್ರೆ ಸಮಯದಲ್ಲಿ ₹೨,೪೪,೫೦೦ ಹಣ ಸಂಗ್ರಹಿಸಲಾಗಿದೆ. ಕರಪತ್ರ, ಪ್ರಚಾರ ವಾಹನ, ಪಂಜಿನ ಮೆರವಣಿಗೆಗೆ ಸುಮಾರು ₹೨,೨೨,೫೦೦ ರು. ಖರ್ಚಾಗಿದೆ. ಉಳಿದ ₹೨೨ ಸಾವಿರ ಹಣವನ್ನು ಆರ್ಥಿಕ ಸಂಕಷ್ಟದಲ್ಲಿದ್ದ ಹುಬ್ಬಳ್ಳಿ ರವಿ ಅವರಿಗೆ ನೀಡಲಾಗಿದೆ. ಇದರ ಜೊತೆ ಸುಮಾರು ₹೩೦ ಸಾವಿರ ಮೌಲ್ಯದ ಪುಂಗಳು ಬಳಕೆಯಾಗದಂತೆ ಉಳಿದಿವೆ ಎಂದು ವಿವರಿಸಿದರು.ನಾಳೆ ವಿಶ್ವ ಸಂಗೀತ ದಿನಾಚರಣೆ
ಮಂಡ್ಯ: ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ವಿಶ್ವ ಸಂಗೀತ ದಿನಾಚರಣೆ ಹಾಗೂ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಅಂಗವಾಗಿ ಜೂ.೨೭ರ ಶನಿವಾರ ಸಂಜೆ ೫ ಗಂಟೆಗೆ ನಗರದ ಶಿವನಂಜಪ್ಪ ಪಾರ್ಕ್ (ದೇವರಕಾಡು)ನಲ್ಲಿ ಗೀತ ಸಂಗೀತ ಎಸ್ಪಿಬಿ ಸ್ವರ ಸಂಚಾರ ಕಾರ್ಯಕ್ರಮ ನಡೆಯಲಿದೆ. ಖ್ಯಾತ ವೈದ್ಯ, ಸಾಹಿತಿ ಡಾ.ಕೆ. ಚಂದ್ರಶೇಖರ್ ಸಮಾರಂಭ ಉದ್ಘಾಟಿಸುವರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಡಾ. ನಾಗರಾಜ್ ವಿ. ಭೈರಿ, ಪ್ರಸಿದ್ದ ಹಿನ್ನೆಲೆ ಗಾಯಕಿ ಜೋಗಿ ಸುನೀತ ಅವರಿಗೆ ವಿಶ್ವ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕನ್ನಡ ಪರಿಚಾರಕ ಕೆ.ಟಿ. ಹನುಮಂತು ಅವರು ಸಮಾರಂಭದಲ್ಲಿ ಭಾಗವಹಿಸುವರು. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಡೇವಿಡ್ ಪ್ರತಿಭಾಂಜಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡುವರು.