ಇ-ಖಾತೆ ಪಡೆಯಲು ಮೂರು ತಿಂಗಳ ಗಡವು

| Published : Feb 23 2025, 12:33 AM IST

ಇ-ಖಾತೆ ಪಡೆಯಲು ಮೂರು ತಿಂಗಳ ಗಡವು
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇ ಖಾತೆ ಪಡೆಯುವ ಸಂಬಂಧ ಸರ್ಕಾರ ಕೈಗೊಂಡಿರುವ ತೀರ್ಮಾನವ ಜಾರಿಗೊಳಿಸಲು ಜಿಲ್ಲಾಡಳಿತ ಖಡಕ್ ತೀರ್ಮಾನ ಕೈಗೊಂಡಿದ್ದು ಈ ಸಂಬಂಧ ಮೂರು ತಿಂಗಳ ಗಡವು ನೀಡಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇ ಖಾತೆ ಪಡೆಯುವ ಸಂಬಂಧ ಸರ್ಕಾರ ಕೈಗೊಂಡಿರುವ ತೀರ್ಮಾನವ ಜಾರಿಗೊಳಿಸಲು ಜಿಲ್ಲಾಡಳಿತ ಖಡಕ್ ತೀರ್ಮಾನ ಕೈಗೊಂಡಿದ್ದು ಈ ಸಂಬಂಧ ಮೂರು ತಿಂಗಳ ಗಡವು ನೀಡಿದೆ. ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಇದುವರೆಗೂ ಇ-ಖಾತಾ ಪಡೆಯದೇ ಇರುವ ಕಟ್ಟಡಗಳ ಮತ್ತು ನಿವೇಶನಗಳ ಮಾಲೀಕರು ಮೂರು ತಿಂಗಳ ಒಳಗಾಗಿ ಅಂದರೆ 2025ರ ಮೇ 10ರೊಳಗೆ ಬಿ ರಿಜಿಸ್ಟರ್‍ನಲ್ಲಿ ನಮೂದಿಸಿಕೊಂಡು ಇ-ಖಾತಾ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕರೆ ನೀಡಿದ್ದಾರೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 110 ರ ಅನ್ವಯ ಎ ರಿಜಿಸ್ಟರ್ ನಲ್ಲಿ ಅಂದರೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲಾದ ಬಡಾವಣೆಯಲ್ಲಿನ ಸ್ವತ್ತುಗಳಿಗೆ ಇ-ಖಾತಾ ನೀಡಲಾಗುತ್ತದೆ. ಆದರೆ, ಭೂ ಪರಿವರ್ತನೆ ಆಗದೇ ಉಪ-ವಿಭಜನೆ ಮಾಡಿ ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳು ಮತ್ತು ಭೂ ಪರಿವರ್ತನೆಯಾಗಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನ ಅಥವಾ ಕಟ್ಟಡಗಳಿಗೆ ಬಿ ರಿಜಿಸ್ಟರ್ ನಲ್ಲಿ ನಮೂದಿಸಿಕೊಂಡು ಇ-ಖಾತಾ ನೀಡಲಾಗುತ್ತದೆ. ಈ ಅವಕಾಶವನ್ನು ಒಮ್ಮೆ ಮಾತ್ರ ನೀಡಲಾಗುತ್ತಿದ್ದು, ಕಟ್ಟಡ, ನಿವೇಶನಗಳ ಮಾಲೀಕರು ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ. ಬಿ ರಿಜಿಸ್ಟರ್ ನಲ್ಲ ದಾಖಲಿಸುವ ಆಸ್ತಿಗಳಿಗೆ 2024-25ನೇ ಸಾಲಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ 2 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ತದನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುತ್ತದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ 106 ಕ್ಕೆ ತಿದ್ದುಪಡಿ ತರಲಾದಂತೆ 10.09.2024 ರಿಂದ ಜಾರಿಗೆ ಬಂದಂತೆ ಈ ತೆರಿಗೆಯನ್ನು ವಿಧಿಸಲಾಗುತ್ತದೆ. ಬಿ ರಿಜಿಸ್ಟರ್‍ ನಲ್ಲಿ ಸರ್ಕಾರಿ ಜಾಗದಲ್ಲಿರುವ ಸ್ವತ್ತುಗಳು, ಸರ್ಕಾರದ ನಿಗಮ ಮಂಡಳಿಗಳ ಜಾಗಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಜಾಗಗಳು ಹೊರತುಪಡಿಸಲಾಗಿದೆ. 10.09.2024 ರ ಪೂರ್ವಕ್ಕೆ ನೋಂದಾಯಿತವಾದ ಭೂ ಪರಿವರ್ತನೆ ಆಗದೇ ಉಪ ವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳು ಮತ್ತು ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡಗಳಿಗೆ ಬಿ ರಿಜಿಸ್ಟರ್‍ನಲ್ಲಿ ನಮೂದಿಸಿಕೊಂಡು ಇ-ಖಾತಾ ನೀಡಲಾಗುತ್ತದೆ. ಇದುವರೆಗೆ ಇ-ಖಾತಾ ಪಡೆಯದ ಎಲ್ಲಾ ಸ್ವತ್ತುಗಳ ಮಾಲೀಕರು ಕೂಡಲೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಛೇರಿಗಳಿಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಪರ್ಕಿಸಬೇಕು. ಜಿಲ್ಲಾಧಿಕಾರಿ ಕಚೇರಿಯಿಂದ ಏರ್ಪಡಿಸಲಾಗುವ ವಾರ್ಡ್‍ವಾರು ಕ್ಯಾಂಪ್‍ಗಳಿಗೆ ಭೇಟಿ ನೀಡಿ ‘ಬಿ’ ರಿಜಿಸ್ಟರ್‍ ನಲ್ಲಿ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿ, ಸರ್ಕಾರ ನೀಡಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ಡಿಸಿ ವೆಂಕಟೇಶ್ ಮನವಿ ಮಾಡಿದ್ದಾರೆ.

ಇ-ಖಾತಾಗೆ ಸಂಬಂಧಿಸಿದಂತೆ ಸಹಾಯವಾಣಿ: ಚಿತ್ರದುರ್ಗ ನಗರಸಭೆ-08194-222401, ಕೆ.ಕಿರಣ್ ಕುಮಾರ್-9606281164, ಚಳ್ಳಕೆರೆ ನಗರಸಭೆ-08195-200093, ಎಸ್.ವೀರಭದ್ರಪ್ಪ-8050551355.ಹಿರಿಯೂರು ನಗರಸಭೆ-08193-296220, ಮಲ್ಲಿಕಾರ್ಜುನ ಸ್ವಾಮಿ-9620287514.ಹೊಸದುರ್ಗ ಪುರಸಭೆ- 08199-295095, ಎನ್.ವಿನಯ್-9353833372.ಹೊಳಲ್ಕೆರೆ ಪುರಸಭೆ-08191-275861, ಎಂ.ದೇವರಾಜ್-9845912244.ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ-08198-229044, ಎಲ್.ಎಚ್.ತಿಪ್ಪೇಸ್ವಾಮಿ-9845174196.ನಾಯಕನಹಟ್ಟಿ ಪಟ್ಟಣ ಪಂಚಾಯಿತಿ-08190-200232, ಆರ್.ಸಂದೀಪ್-9606307100