ಜಿಲ್ಲೆಯಲ್ಲಿ ಒಟ್ಟು 1325 ಕೋಟಿ ರು. ಮೊತ್ತದ ಮೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ತಡಸ ಹಾಗೂ ಆಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಫೇಸ್-1 ಮತ್ತು ಫೇಸ್-2 ಕಾಮಗಾರಿಗಳನ್ನು ಕ್ರಮವಾಗಿ ಜೂನ್ ಮೊದಲ ವಾರ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ನೂತನ ಸಿಇಒ ದಲ್ಜೀತ್ ಕುಮಾರ ಹೇಳಿದರು.
ಹಾವೇರಿ: ಜಿಲ್ಲೆಯಲ್ಲಿ ಒಟ್ಟು 1325 ಕೋಟಿ ರು. ಮೊತ್ತದ ಮೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ತಡಸ ಹಾಗೂ ಆಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಫೇಸ್-1 ಮತ್ತು ಫೇಸ್-2 ಕಾಮಗಾರಿಗಳನ್ನು ಕ್ರಮವಾಗಿ ಜೂನ್ ಮೊದಲ ವಾರ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ನೂತನ ಸಿಇಒ ದಲ್ಜೀತ್ ಕುಮಾರ ಹೇಳಿದರು. ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಸಬಾವಿ ಭಾಗದ ಯೋಜನೆಗೆ ಅರಣ್ಯ ಭೂಮಿ ಸಂಬಂಧಿತ ಸಮಸ್ಯೆ ಇದ್ದು, ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ತಡಸ ಮತ್ತು ಆಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸ್ಥಳೀಯ ಮಟ್ಟದಲ್ಲಿ ರಸ್ತೆ, ಖಾಸಗಿ ಜಾಗ ಹಾಗೂ ಪೈಪ್ಲೈನ್ ಅಳವಡಿಕೆ ಸಂಬಂಧಿತ ಹಲವು ಸಮಸ್ಯೆಗಳು ಎದುರಾದ ಕಾರಣ ಪ್ರಾರಂಭ ವಿಳಂಬವಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಈಗಾಗಲೇ ಸಭೆ ನಡೆಸಲಾಗಿದೆ. 65 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟು 77 ಖಾಸಗಿ ಬೋರವೆಲ್ಗಳನ್ನು ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಇಲ್ಲ. ಜಿಲ್ಲೆಯ 600 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 163 ಘಟಕಗಳನ್ನು ದುರಸ್ತಿ ಮಾಡಲಾಗಿದೆ. ಕೆಲವು ಘಟಕಗಳು ಹಳೆಯದಾಗಿದ್ದು, ಅವುಗಳ ದುರಸ್ತಿಗೆ ಅನುದಾನದ ಕೊರತೆ ಇದೆ ಎಂದು ಹೇಳಿದರು.ನರೇಗಾ ಯೋಜನೆಯಡಿ ಕಾರ್ಮಿಕರ ಬಾಕಿ ಇರುವ ಸುಮಾರು 6 ಕೋಟಿ ರು. ವೇತನವನ್ನು ಬಿಡುಗಡೆ ಮಾಡಲಾಗಿದೆ. ಆದರೆ, 78 ಕೋಟಿ ರು. ಮೌಲ್ಯದ ಸಾಮಗ್ರಿಗಳ ಬಿಲ್ಗಳು ಇನ್ನೂ ಬಾಕಿ ಇವೆ. ನರೇಗಾ ಅಡಿ 9,192 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇ 51.43ರಷ್ಟು ಮಹಿಳೆಯರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ತಿಳಿಸಿದರು. ಜುಲೈ 1ರಿಂದ ವಿಬಿಜಿ ಮತ್ತು ರಾಮ್ಜಿ ಯೋಜನೆಗಳನ್ನು ಆರಂಭಿಸಲಾಗುವುದು ಎಂದರು.ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಗುರುವಾರ ನಡೆದ ಹಂದಿಗನೂರು ಗ್ರಾಪಂ ಪಿಡಿಒ ಆತ್ಮಹತ್ಯೆ ಪ್ರಕರಣ ದುರದೃಷ್ಟಕರ ಸಂಗತಿಯಾಗಿದೆ. ಕೆಲಸದ ಒತ್ತಡ ಆತ್ಮಹತ್ಯೆಗೆ ಕಾರಣವೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.ಜಿಲ್ಲೆಯ 8 ತಾಲೂಕಿನ ವ್ಯಾಪ್ತಿಯಲ್ಲಿ 191 ಬ್ರಾಂಚ ಲೈಬ್ರರಿಗಳು ಮಂಜೂರಾಗಿದ್ದು, ಇವುಗಳಿಗಾಗಿ ಪುಸ್ತಕ ಪಿಠೋಪಕರಣಗಳನ್ನು ಒದಗಿಸಲಾಗಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸದ್ಯ ಸ್ಥಗಿತಗೊಳಿಸಲಾಗಿದೆ ಎಂದರು. ಜಿಪಂ ಉಪಕಾರ್ಯದರ್ಶಿ ಡಾ. ಪುನಿತ್ ಇದ್ದರು. ವಸತಿ ಯೋಜನೆಯಡಿ ಸಮೀಕ್ಷಾ ಪಟ್ಟಿಯನ್ನು ಪರಿಷ್ಕರಿಸಲು ಮತ್ತು ಅರ್ಹ ಕುಟುಂಬಗಳನ್ನು ಪಟ್ಟಿಗೆ ಸೇರಿಸಲು ಮೇ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಹ ಫಲಾನುಭವಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಹೆಸರು ಸೇರ್ಪಡೆಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ಕೊಡಲೇ ಸಂಪರ್ಕಿಸಬಹುದಾಗಿದೆ ಎಂದು ಜಿಪಂ ಸಿಇಒ ದಲ್ಜೀತಕುಮಾರ ಹೇಳಿದರು.