ಸಾರಾಂಶ
ಹಾನಗಲ್ಲ: ಜಮೀನಿನ ಆರ್ಟಿಸಿ ದುರಸ್ತಿಗೆ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಹಾನಗಲ್ಲ ಕಂದಾಯ ಇಲಾಖೆ ಶಿರಸ್ತೇದಾರ ಹಾಗೂ ಕೇಸ್ ವರ್ಕರ ಸೇರಿದಂತೆ ಮೂವರು ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮೂವರನ್ನು ಬಂಧಿಸಲಾಗಿದೆ.ಶನಿವಾರ ಹಾನಗಲ್ಲ ತಹಸೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಇಬ್ಬರು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ತಂಡ ಲಂಚ ಸ್ವೀಕರಿಸುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೊಮ್ಮನಹಳ್ಳಿಯ ನವೀನ ಬಸನಗೌಡ ಪಾಟೀಲ ಎಂಬುವವರು ತಮ್ಮ ಪರಿಚಯಸ್ಥರಾದ ಹಾನಗಲ್ಲ ತಾಲೂಕು ರಾಮತೀರ್ಥ ಹೊಸಕೊಪ್ಪದ ಶಂಕ್ರಪ್ಪ ಈರಪ್ಪ ಗುಮಗಂಡಿ ಅವರ ಜಮೀನನ್ನು ಕೆಡಿಟಿ ಪ್ರಕಾರ ದುರಸ್ತಿ ಮಡಲು ಹಾನಗಲ್ಲ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ತಮ್ಮಣ್ಣ ಕಾಂಬಳೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಗೂಳಪ್ಪ ಮನಗೂಳಿ ಅವರು 20 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಶನಿವಾರ ಫಿರ್ಯಾದಿದಾರರಿಂದ 12 ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ತಮ್ಮಣ್ಣ ಕಾಂಬಳೆ, ಗೂಳಪ್ಪ ಮನಗೂಳಿ ಹಾಗೂ ಇದಕ್ಕೆ ಸಹಕರಿಸಿದ ದ್ವಿತೀಯ ದರ್ಜೆ ಸಹಾಯಕ ಶಿವಾನಂದ ಬಡಿಗೇರ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಸದರಿ ಪ್ರಕರಣದ ತನಿಖೆಯನ್ನು ಕರ್ನಾಟಕ ಲೋಕಾಯುಕ್ತ ದಾವಣಗೆರೆ ಎಸ್ಪಿ ಎಂ.ಎಸ್. ಕೌಲಾಪುರೆ, ಡಿವೈಎಸ್ಪಿ ಮಧುಸೂದನ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರಾದ ಕೆ.ಎಚ್. ದಾದಾವಲಿ, ವಿಶ್ವನಾಥ ಕಬ್ಬೂರಿ, ಪಿ.ವಿ. ಸಾಲಿಮಠ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರನ್ನು ಹಾನಗಲ್ಲ ತಹಸೀಲ್ದಾರ್ ಕಚೇರಿಯಲ್ಲಿ ದಸ್ತಗಿರಿ ಮಾಡಲಾಗಿದ್ದು ತನಿಖೆ ಮುಂದುವರೆದಿದೆ.