ಒಳ್ಳೆಯ ವಿಷಯದ ಸಾಹಿತ್ಯ ಓದುವವರು ಇದ್ದೇ ಇರುತ್ತಾರೆ

| Published : Jul 26 2025, 12:00 AM IST

ಸಾರಾಂಶ

ಗ್ರಾಮ, ವೃತ್ತ, ರಸ್ತೆ, ಗಲ್ಲಿಗಳಿಗೆ ಒಂದೊಂದು ಇತಿಹಾಸವಿರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಒಳ್ಳೆಯ ವಿಷಯದ ಸಾಹಿತ್ಯಕ್ಕೆ ಓದುವವರು ಇದ್ದೇ ಇರುತ್ತಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಮೈಸೂರು ಕಲ್ಚರಲ್ ಅಸೋಸಿಯೇಷನ್, ವಿಸ್ಮಯ ಪ್ರಕಾಶನವು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಸಿಂದೂರ, ಮೈಸೂರು ಗಲ್ಲಿ ಕಥೆ ಮತ್ತು ಮೈಸೂರು ವೃತ್ತಗಳ ವೃತ್ತಾಂತ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೂರು ಕೃತಿಗಳ ವಿಷಯ ಆಯ್ಕೆ ವಿಭಿನ್ನವಾಗಿದೆ. ಗ್ರಾಮ, ವೃತ್ತ, ರಸ್ತೆ, ಗಲ್ಲಿಗಳಿಗೆ ಒಂದೊಂದು ಇತಿಹಾಸವಿರುತ್ತದೆ. ಈ ವಿಶೇಷತೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪುಸ್ತಕ ರಚನೆ ಮಹತ್ವದ್ದಾಗಿದೆ. ಗಲ್ಲಿ, ರಸ್ತೆಗಳ ಮಹತ್ವದ ಕುರಿತು ಬರೆಯುವುದು ಉತ್ತಮ ಪ್ರಯೋಗವಾಗಿದೆ. ಸಿಂದೂರ ಪುಸ್ತಕದಲ್ಲಿರುವ ವೀರ ಯೋಧರ ಯಶೋಗಾಥೆಗಳು ಯುವ ಜನತೆಗೆ ಪ್ರೇರಣೆಯಾಗಿವೆ ಎಂದು ಅವರು ಹೇಳಿದರು.

ಮೈಸೂರು ವೃತ್ತಗಳ ವೃತ್ತಾಂತ ಕೃತಿ ಬಿಡುಗಡೆಗೊಳಿಸಿದ ಕರ್ನಾಟಕ ಪೊಲೀಸ್ ಅಕಾಡೆಮಿಯ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್ ಮಾತನಾಡಿ, ಯುವಜನರು ಓದಿನಿಂದ ವಿಮುಖರಾಗುತ್ತಿರುವ ಇಂದಿನ ಹೊತ್ತಿನಲ್ಲಿ ಈ ಪುಸ್ತಕ ರಚನೆ ಔಚಿತ್ಯಪೂರ್ಣವಾಗಿದೆ. ಎಲ್ಲರೂ ಈ ಪುಸ್ತಕ ಹೃದಯಕ್ಕೆ ತೆಗೆದುಕೊಳ್ಳಬೇಕು. ಅಲ್ಲದೇ ಮುಂದಿನ ಪೀಳಿಗೆಗೆ ಇದನ್ನು ಕಾಪಿಡಬೇಕು ಎಂದರು.

ಸಿಂದೂರ ಕೃತಿ ಬಿಡುಗಡೆಗೊಳಿಸಿದ ಮಹಾವೀರ ಚಕ್ರ ಪುರಸ್ಕೃತ ವೀರ ಸೇನಾನಿ ಪಿ.ಎಸ್. ಗಣಪತಿ ಮಾತನಾಡಿ, ಈ ಕೃತಿ ಇಂದಿನವರಿಗೆ ಮಾತ್ರವಲ್ಲದೇ ಭವಿಷ್ಯದ ಪೀಳಿಗೆಗೂ ಮಾದರಿ. ಮೊಬೈಲ್, ವಾಟ್ಸಾಪ್ ಸೆಳೆತವಿರುವ ಕಾಲಘಟ್ಟದಲ್ಲಿ ಯುವಕರನ್ನು ಸಾಹಿತ್ಯದತ್ತ ಸೆಳೆಯುವ ಸಾಹಿತ್ಯ ರಚನೆ ಇದಾಗಿದೆ ಎಂದು ತಿಳಿಸಿದರು.

ಮೈಸೂರು ಗಲ್ಲಿ ಕಥೆ ಕೃತಿ ಬಿಡುಗಡೆಗೊಳಿಸಿದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಮೈಸೂರಿನ ವೃತ್ತ, ಗಲ್ಲಿಗಳ ಬಗ್ಗೆ ಬರೆದಿರುವುದು ಶ್ಲಾಘನಿಯ. ನಮ್ಮ ನಾಡಿನ ಸಂಸ್ಕೃತಿ, ಆಚಾರ- ವಿಚಾರ, ಇತಿಹಾಸ ಉಳಿಸುವ ಕೆಲಸವಾಗಿದೆ ಎಂದು ಹೇಳಿದರರು.

ಕಾರ್ಯಕ್ರಮವನ್ನು ಸಂಗೀತ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಉದ್ಘಾಟಿಸಿದರು. ಕೃತಿಗಳ ಕರ್ತೃ ಐತಿಚಂಡ ರಮೇಶ್ ಉತ್ತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿವಿ ಪರೀಕ್ಷಾಂಗ ಕುಲಸಚಿವ ಡಾ. ಮಂಜುನಾಥ್, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್, ವಿಸ್ಮಯ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಇದ್ದರು.

----

ಕೋಟ್...

ಮುದ್ರಣ ಮಾಧ್ಯಮ ಹಾಗೂ ಪೊಲೀಸರ ಸಮಾಗಮದಿಂದ ಒಳ್ಳೆಯ ವಿಚಾರಗಳು ಹೊರ ಬರುತ್ತವೆ. ಇದನ್ನು ಈ ಎರಡೂ ಕ್ಷೇತ್ರದ ಎಲ್ಲರೂ ಮಾದರಿಯಾಗಿ ಸ್ವೀಕರಿಸಬೇಕು. ಇದರಿಂದ ಹಲವು ಗೊಂದಲಗಲಗಳಿಗೆ ಪರಿಹಾರ ಕಂಡುಕೊಳ್ಳಬಹುದು.

- ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಕುಲಪತಿ, ಸಂಗೀತ ವಿವಿ