ಬೇಲೂರು: ಪಟ್ಟಣದ ಕೋಟೆ ಶ್ರೀ ಶೃಂಗೇರಿ ಶಾರದಾ ಶಂಕರ ಮಠದಲ್ಲಿ ಗಾಯತ್ರಿ ಭಜನಾ ಮಂಡಳಿಯಿಂದ ತ್ಯಾಗರಾಜರ ಜಯಂತಿ ಹಾಗೂ ಪುರಂದದಾಸರ ಆರಾಧನೆ ಹಾಗೂ ಕೀರ್ತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗಾಯತ್ರಿ ಭಜನಾ ಮಂಡಳಿ ಅಧ್ಯಕ್ಷ ಶಾರದಮ್ಮ ಮಾತನಾಡಿ ಶ್ರೀ ರಾಮನ ಅನುಗ್ರಹಕ್ಕೆ ತ್ಯಾಗರಾಜರು ಪಾತ್ರರಾಗಿದ್ದರು. ತ್ಯಾಗರಾಜರು ಶ್ರೀರಾಮನನ್ನು ದರ್ಶಿಸಿ ತನ್ನನ್ನು ತಾನು ಸಮರ್ಪಣೆ ಮತ್ತು ತ್ಯಾಗವನ್ನು ಮಾಡಿಕೊಂಡ ಪರಿಣಾಮ ತ್ಯಾಗರಾಜರಿಗೆ ಶ್ರೀ ರಾಮನ ದರ್ಶನವಾಯಿತು. ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾದ ದಾಸ ಶ್ರೇಷ್ಠ ಪುರಂದರದಾಸರು, ಸಂಗೀತಕ್ಕೆ ತಮ್ಮನ್ನು ತಾವು ಸಂಪೂರ್ಣ ಸಮರ್ಪಣೆ ಮಾಡಿಕೊಂಡು ಸಂಗೀತದ ಪಿತಾಮಹ ಎಂದು ಬಿರುದಾಂಕಿತರಾದರು. ಈ ಆರಾಧನೆ ಅವರಿಗೆ ಸಲ್ಲಿಸುವ ಕೃತಜ್ಞತೆ ಅಲ್ಲ. ಇದು ವೇದೋಪಾಸನೆ, ಸಂಸ್ಕಾರ, ಸಂಸ್ಕೃತಿಯ ಉಪಾಸನೆ ಆಗಿದ್ದು ನಮ್ಮ ಭಾರತದ ಭವ್ಯ ಪರಂಪರೆಯಲ್ಲಿ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.ಭಜನಾ ಮಂಡಳಿಯ ವಿನುತ, ರತ್ನಮಾಲ ಮಾತನಾಡಿ ಪುರಂದರ ದಾಸರು ಭಕ್ತಿ ಚಳವಳಿಯ ಗಾಯಕರಾಗಿ ಮತ್ತು ಸಂಗೀತ ವಿದ್ವಾಂಸರಾಗಿ ದಾಸ ಸಾಹಿತ್ಯ ರಚನೆಗೆ ಹೆಸರುವಾಸಿಯಾಗಿದ್ದಾರೆ. ಅವರ ಹೆಚ್ಚಿನ ಕೀರ್ತನೆಗಳು ಸಾಮಾಜಿಕ ಸುಧಾರಣೆಯೊಂದಿಗೆ ವ್ಯವಹರಿಸುತ್ತವೆ ಮತ್ತು ಸಮಾಜದಲ್ಲಿನ ದೋಷಗಳನ್ನು ಗುರುತಿಸುತ್ತವೆ. ಪುರಂದರದಾಸರ ತತ್ವಶಾಸ್ತ್ರವು ಹಿಂದೂ ಧರ್ಮದಲ್ಲಿನ ಭಕ್ತಿಯ ಪರಿಕಲ್ಪನೆಯೊಂದಿಗೆ ಸಾಮರಸ್ಯವನ್ನು ಹೊಂದಿದೆ ಮತ್ತು ಸರಳ ಕನ್ನಡದಲ್ಲಿ ನಿರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಗಾಯತ್ರಿ ಭಜನಾ ಮಂಡಳಿಯ ಸದಸ್ಯರು ತ್ಯಾಗರಾಜರ ಹಾಗೂ ಪುರಂದದಾಸರ ಕೀರ್ತನೆಗಳನ್ನು ಹಾಡಿ ಭಕ್ತಿಭಾವ ಮೆರೆದರು.