ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಲೋಕಸಭೆ ಚುನಾವಣೆಗೆ ಮೂರು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಲು ಟಿಕೆಟ್ ಕೇಳಲಾಗದೆ ಎಂದು ವಸತಿ ಸಚಿವ ಜಮೀರ ಅಹಮ್ಮದ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಲೋಕಸಭೆಗೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಕೇಂದ್ರದ ದುರಾಡಳಿತದಿಂದ ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಜನರಿಗೆ ಬದಲಾವಣೆ ಬೇಕಿದೆ. ಜನ ಈಗ ತೀರ್ಮಾನ ತೆಗೆದುಕೊಂಡಾಗಿದೆ. ಕನಿಷ್ಠ ನಾವು ರಾಜ್ಯದಲ್ಲಿ 25 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ರಾಜ್ಯದ ಪೈಕಿ ಬೆಂಗಳೂರು ಸೆಂಟ್ರಲ್, ಹಾವೇರಿ, ಬೀದರ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಕೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಂತಸ್ ಭವನದಲ್ಲಿ ಹೊಗೆ ಬಾಂಬ್ ಪ್ರಕರಣದಲ್ಲಿ ಕಾಂಗ್ರೆಸ್ ಕುತಂತ್ರ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತದೆ? ದುಷ್ಕರ್ಮಿಗಳಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ಭದ್ರತಾ ವೈಫಲ್ಯ ಆಗಿದೆ. ಆತ ಪ್ರೇಕ್ಷಕರ ಗ್ಯಾಲರಿ ಮೇಲಿಂದ ಜಿಗಿದು ಬಂದಿದ್ದಾನೆ. ಇದು ಪಕ್ಕಾ ಭದ್ರತಾ ವೈಫಲ್ಯ ಎಂದ ಅವರು, ಸಂಸತ್ ಒಳಗೆ ಹೋಗಲು ಹತ್ತಾರು ಪ್ರಕ್ರಿಯೆ ಇದೆ. ಆ ಕಠಿಣ ಪಕ್ರಿಯೆಗಳನ್ನು ದಾಟಿ ಆತ ಹೇಗೆ ಹೋದ? ನಾನು ಸಚಿವನಾಗಿ ಇನ್ನೂ ಲೋಕಸಭೆಗೆ ಹೋಗಲಾಗಿಲ್ಲ. ಹಾಗಾದರೆ, ಇವನು ಹೇಗೆ ಹೋದ ಎಂಬುದನ್ನು ಗಮನಿಸಬೇಕಿದೆ ಎಂದರು.ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ವಿಚಾರವಾಗಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ ಮೇಲಿನ ಅಭಿಮಾನದಿಂದ ಶಾಸಕ ಅಬ್ಬಯ್ಯ ಪ್ರಸಾದ ಪ್ರಸ್ತಾಪಿಸಿದ್ದಾರೆ. ಅವರ ಅಭಿಪ್ರಾಯ ಪ್ರಸ್ತುತ ಪಡಿಸುವುದರಲ್ಲಿ ತಪ್ಪೇನಿದೆ ಎಂದರು.
ಜೆಡಿಕೆ ಅಂತಾಗಲಿಜೆಡಿಎಸ್ ಸೆಕ್ಯೂಲರ್ ಪಕ್ಷವಾಗಿ ಉಳಿದಿಲ್ಲ. ಅದು ಕೋಮುವಾದಿಯಾಗಿದೆ. ಜೆಡಿಎಸ್ ಈಗ ಜೆಡಿಕೆ ಆಗಿದೆ ಎಂದು ವಸತಿ ಸಚಿವ ಜಮೀರ ಅಹಮ್ಮದ ಹೇಳಿದರು.
ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಜೊತೆಗೆ ಎಚ್.ಡಿ. ಕುಮಾರಸ್ವಾಮಿ ವೇದಿಕೆ ಹಂಚಿಕೊಂಡಿರುವ ಕುರಿತು ಮಾತನಾಡಿದ ಅವರು, ಜನತಾ ದಳ ಈಗ ಜಾತ್ಯಾತೀತವಾಗಿ ಉಳಿದಿಲ್ಲ. ಬಿಜೆಪಿ ಜೊತೆ ಕೈ ಜೋಡಿಸಿದ ಮೇಲೆ ಅದು ಹೋಯ್ತು. ಜೆಡಿಎಸ್ ಪೈಕಿ ಎಸ್ ತೆಗೆದು ಜೆಡಿಕೆ ಮಾಡಲಿ. ಕೆ ಅಂದ್ರೆ ಕೋಮುವಾದಿ ಆದರೂ ಆಗಬಹುದು ಅಥವಾ ಕುಮಾರಸ್ವಾಮಿ ಅಂತಾದರೂ ಆಗಬಹುದು ಎಂದು ಲೇವಡಿ ಮಾಡಿದರು.