ಬಾವುಟ ಹಿಡಿದ ಕಾರ್ಯಕರ್ತರಿಗೆ ಟಿಕೆಟ್‌ ಪ್ರಾಶಸ್ತ್ಯ

| Published : Oct 10 2023, 01:01 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದಲೋ ಬಂದ ಕಾಳಪ್ಪ, ಬೋಳಪ್ಪ, ಮಲ್ಲಪ್ಪರಿಗೆಲ್ಲ ಟಿಕೆಟ್‌ ಇಲ್ಲ: ಸಚಿವ ಎಸ್ಸೆಸ್ಸೆಂ ಪರೋಕ್ಷ ವಾಗ್ದಾಳಿ

ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದಲೋ ಬಂದ ಕಾಳಪ್ಪ, ಬೋಳಪ್ಪ, ಮಲ್ಲಪ್ಪರಿಗೆಲ್ಲ ಟಿಕೆಟ್‌ ಇಲ್ಲ: ಸಚಿವ ಎಸ್ಸೆಸ್ಸೆಂ ಪರೋಕ್ಷ ವಾಗ್ದಾಳಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ಪಕ್ಷದ ಪೋಸ್ಟರ್ ಅಂಟಿಸಿ, ಬಾವುಟ ಹಿಡಿದ ಕಾರ್ಯಕರ್ತರಿಗೆ ಮೊದಲ ಆದ್ಯತೆ. ಎಲ್ಲೋ ಇದ್ದುಕೊಂಡು, ಈಗ ಬಂದರೆ ಏನೂ ನಡೆಯಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಲೋಕಸಭೆ ಚುನಾವಣೆಗೆ ಕೆಲವರು ತಾವು ಆಕಾಂಕ್ಷಿಗಳೆಂದು ಹೇಳಿಕೊಳ್ಳುತ್ತಿರುವ ವಿಚಾರದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದ್ದು ನಿಜವಿದೆ. ಕಾಂಗ್ರೆಸ್ಸಿನಲ್ಲಿ ಬಾವುಟ ಹಿಡಿದು, ಪೋಸ್ಟರ್ ಅಂಟಿಸಿ, ಚುನಾವಣೆ ಕೆಲಸ ಮಾಡಿದವರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇವೆ ಎಂದರು.

ಚನ್ನಗಿರಿ ಶಾಸಕ ಹೇಳಿದ್ದನ್ನು ನೋಡಿದ್ದೇನೆ, ಎಲ್ಲರೂ ಕಾರ್ಯಕರ್ತರೇ. ಮೊದಲು ಕಾರ್ಯಕರ್ತರ ಗುರುತಿಸಬೇಕು. ಕಾಳಪ್ಪ , ಬೋಳಪ್ಪ, ಮಲ್ಲಪ್ಪ, ಸಿದ್ದಪ್ಪರಿಗೆ ಲೋಕಸಭೆ ಟಿಕೆಟ್‌ ಇಲ್ಲ. ಯಾರು ಏನು ಅಂತಾ ಮೊದಲು ಗೊತ್ತಾಗಬೇಕಲ್ಲವೇ? ಎಲ್ಲಿಂದಲೋ ಬಂದು, ನಿಂತುಕೊಂಡಲ್ಲ. ಕಾರ್ಯಕರ್ತರನ್ನು ಗುರುತಿಸಬೇಕು. ಜಿಲ್ಲಾ, ಬ್ಲಾಕ್ ಅಧ್ಯಕ್ಷರ ಕಂಡು ಭೇಟಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಎಲ್ಲೋ ಇದ್ದು ಬಂದರೆ ಆಗಲ್ಲ:

ಕಾಂಗ್ರೆಸ್ ಕಾರ್ಯಕರ್ತರನ್ನು ಮೊದಲು ಗುರುತಿಸಿ, ಭೇಟಿ ಮಾಡಬೇಕು. ಪಕ್ಷದ ಪದಾಧಿಕಾರಿಗಳು, ಮುಖಂಡರ ಭೇಟಿ ಮಾಡಬೇಕು. ಹಾಗೆ ಮಾಡದೇ, ಎಲ್ಲೋ ಇದ್ದುಕೊಂಡು ಬಂದು, ಬಂದರೆ ಇಲ್ಲಿ ಏನೂ ನಡೆಯುವುದೂ ಇಲ್ಲ. ಪಕ್ಷದ ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೋ, ಅಂತಹವರು ಚುನಾವಣೆಗೆ ನಿಲ್ಲಲಿ ಎಂದು ಶಾಸಕ ಶಿವಗಂಗಾ ವಿ.ಬಸವರಾಜ, ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ..ಬಿ.ವಿನಯಕುಮಾರ ಹೆಸರು ಪ್ರಸ್ತಾಪಿಸದೇ ಎಸ್ಸೆಸ್ ಮಲ್ಲಿಕಾರ್ಜುನ ಮಾತಿನ ಚಾಟಿ ಬೀಸಿದರು. ನ್ಯಾಯಕ್ಕೆ ಬೆಲೆ ಇದೆ, ನ್ಯಾಯಕ್ಕೆ ಬೆಲೆ ಉಂಟು...

ವನ್ಯಜೀವಿ ಪ್ರಕರಣ ವಜಾ ಹಿನ್ನೆಲೆ: ಆದೇಶ ಕೈಸೇರಿದ ನಂತರ ಮಾತಾಡ್ತೀನಿ: ಎಸ್ಸೆಸ್ ಮಲ್ಲಿಕಾರ್ಜುನ

ದಾವಣಗೆರೆ: ನ್ಯಾಯಕ್ಕೆ ಬೆಲೆ ಇದೆ, ನ್ಯಾಯಕ್ಕೆ ಬೆಲೆ ಉಂಟು ಆ ದೃಷ್ಟಿಕೋನದಲ್ಲಿ ನಾವು ಹೋಗುತ್ತಿದ್ದೇವೆ. ನ್ಯಾಯಾಲಯದಿಂದ ಲಿಖಿತ ಆದೇಶ ಕೈತಲುಪಿದ ನಂತರ ಯಾರು ಯಾರವು, ಎಲ್ಲೆಲ್ಲಿ ಏನೇನಿವೆ ಅಂತಾನೂ ಹೇಳುತ್ತೇನೆ. ಕಾದು ನೋಡಿ, ರಿಪೋರ್ಟ್‌ ಆದರೂ ನನ್ನ ಕೈಗೆ ಬರಲಿ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವನ್ಯಜೀವಿ ಪ್ರಕರಣಕ್ಕೆ ಸಂಬಂಧಿಸಿ ತಮಗೆ ಕೋರ್ಟ್‌ ನಲ್ಲಿ ನ್ಯಾಯ ಸಿಕ್ಕಿರುವ, ತಮ್ಮ ವಿರುದ್ಧದ ಪ್ರಕರಣ ವಜಾ ಆದ ಬಗ್ಗೆ ಮೌಖಿಕ ಮಾಹಿತಿ ಇದೆಯಷ್ಟೇ. ಇನ್ನೂ ಲಿಖಿತ ರೂಪದಲ್ಲಿ ಅದು ನನ್ನ ಕೈಗೆ ಸಿಕ್ಕಿಲ್ಲ. ರಿಪೋರ್ಟ್ ಕೈ ಸೇರಿದ ನಂತರ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಈ ವಿಚಾರದಲ್ಲಿ ನನ್ನ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಿತ್ತು. ರಿಪೋರ್ಟ್ ನನ್ನ ಕೈಸೇರಿದ ನಂತರ ಯಾರು ಯಾರವು ಎಲ್ಲಿ ಏನೇನಿದೆ ಅಂತಾ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.