ಸಾರಾಂಶ
ಮಂಚಳ್ಳಿ ಮತ್ತು ಕುರ್ಚಿ ಗ್ರಾಮದ ಅಂಚಿನಲ್ಲಿ ಹುಲಿಯಿಂದ ಹಸುಗಳ ಮೇಲೆ ದಾಳಿಯಾಗಿರುವ ಹಿನ್ನೆಲೆ ಹಾಗೂ ಕಳೆದ ಎರಡು ದಿನಗಳಿಂದ ರಾತ್ರಿ ಹುಲಿಯ ಘರ್ಜನೆ ಗ್ರಾಮಸ್ಥರು ಕೇಳುತ್ತಿರುವ ಬೆನ್ನಲ್ಲೇ ವಿಶೇಷ ತಂಡದಿಂದ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಪೊನ್ನಂಪೇಟೆ ತಾಲೂಕು ಮಂಚಳ್ಳಿ ಮತ್ತು ಕುರ್ಚಿ ಗ್ರಾಮದ ಅಂಚಿನಲ್ಲಿ ಹುಲಿಯಿಂದ ಹಸುಗಳ ಮೇಲೆ ದಾಳಿಯಾಗಿರುವ ಹಿನ್ನೆಲೆ ಹಾಗೂ ಕಳೆದ ಎರಡು ದಿನಗಳಿಂದ ರಾತ್ರಿ ಹುಲಿಯ ಘರ್ಜನೆ ಗ್ರಾಮಸ್ಥರು ಕೇಳುತ್ತಿರುವ ಬೆನ್ನಲ್ಲೇ ಶ್ರೀಮಂಗಲ ವನ್ಯಜೀವಿ ವಲಯದ ವಿಶೇಷ ತಂಡದಿಂದ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ, ಅವರು ಶುಕ್ರವಾರ ಪರಿಶೀಲನೆ ನಡೆಸಿದರು.
ಈ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿರುವ ಪ್ರಕರಣ ಹಿನ್ನಲೆ ಹುಲಿಯ ಚಲನವಲನ ತಿಳಿಯಲು ಬ್ರಹ್ಮಗಿರಿ ಅರಣ್ಯದಂಚಿನ ಗ್ರಾಮಗಳಲ್ಲಿ ಹಲವು ಕ್ಯಾಮರಗಳನ್ನು ಅಳವಡಿಸಲಾಗಿದ್ದು ಇದರಲ್ಲಿ ಸೆರೆಯಾಗಿರುವ ಹಿನ್ನೆಲೆ ಬೋನ್ ಇಟ್ಟು ಹುಲಿಯನ್ನು ಸೆರೆ ಹಿಡಿಯುವ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಕುರ್ಚಿ ಗ್ರಾಮದ ಕುಂಬಾರ ಮೊಟ್ಟೆಯಲ್ಲಿ ಹುಲಿಯನ್ನು ಸೆರೆಹಿಡಿಯಲು ಆಡು ಇಟ್ಟು ಹುಲಿಯನ್ನು ಆಕರ್ಷಿಸಿ ಬೋನಿಗೆ ಬೀಳಿಸುವ ಪ್ರಯತ್ನದಲ್ಲಿ ಬೋನನ್ನು ಅಳವಡಿಸಲಾಗಿದೆ. ಬೋನು ಅಳವಡಿಸಿರುವ ಸಮೀಪದಲ್ಲೇ ಮರಕ್ಕೆ ಮಚ್ಚಾನ್ ಕಟ್ಟಿ ಅರವಳಿಕೆ ‘ದಾಟ್’ ಮಾಡಿ ಹುಲಿ ಸೆರೆ ಹಿಡಿಯಲು ಎರಡನೆಯ ಹಂತದ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು ಸಮೀಪದ ಮರದಲ್ಲಿ ಅಟ್ಟಣಿಗೆಯನ್ನು ಕಟ್ಟಲಾಗಿದೆ.ಈ ಸಂದರ್ಭ ಮಾತನಾಡಿದ ಸಂಕೇತ್ ಅವರು ಈ ವ್ಯಾಪ್ತಿಯಲ್ಲಿ ಹುಲಿಯ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಕ್ಯಾಮೆರವನ್ನು ಅಳವಡಿಸಲಾಗಿತ್ತು. ಕ್ಯಾಮೆರಕ್ಕೆ ಹುಲಿ ಚಿತ್ರ ಸೆರೆಯಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಎ ಎಸ್ ಪೊನ್ನಣ್ಣ ಅವರು ಈ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಎರಡು ಹುಲಿಗಳನ್ನು ಸೆರೆ ಹಿಡಿಯಲು ಸರ್ಕಾರದಿಂದ ಅನುಮತಿಯನ್ನು ಮಂಜೂರು ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಮೇಕೆ ಬಳಸಿ ಹುಲಿ ಸೆರೆಗೆ ಬೋನು ಇರಿಸಲಾಗಿದೆ. ಹಾಗೆಯೇ ಮಚ್ಚಾನ್ (ಅಟ್ಟಣಿಗೆ) ನಿರ್ಮಿಸಿ ಎರಡನೇ ಹಂತದ ಹುಲಿ ಸೆರೆಗೆ ಕಾರ್ಯಚರಣೆ ಕೈಗೊಳ್ಳಲಾಗುವುದು. ಬದ್ಧತೆ ಇರುವ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಹುಲಿ ಸೆರೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀಮಂಗಲ ವನ್ಯಜೀವಿ ವಲಯ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ವನ್ಯಪ್ರಾಣಿ ಮಾನವ ಸಂಘರ್ಷ ಸಮಸ್ಯೆಗೆ ಮುಕ್ತಿ ನೀಡಲು ಸಾಧ್ಯವಿದೆ ಅತ್ಯಂತ ವೈಜ್ಞಾನಿಕವಾಗಿ ಹಾಗೂ ಪ್ರಾಮಾಣಿಕವಾಗಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ಸಾರ್ವಜನಿಕರು, ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಹಾಗೂ ಸರ್ಕಾರ ಒಂದಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಒಂದಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭ ಶ್ರೀಮಂಗಲ ವನ್ಯಜೀವಿ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.