Tight police security for the festival, measures for smooth traffic
* ಪರ್ಯಾಯ ಮಾರ್ಗ ವ್ಯವಸ್ಥೆ
- ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ಕನ್ನಡಪ್ರಭ ವಾರ್ತೆ ರಾಯಚೂರುಮೂರು ದಿನಗಳ ಕಾಲ ಜರುಗಲಿರುವ ಜಿಲ್ಲಾ ಉತ್ಸವದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಸಂಚಾರಕ್ಕೆ ಸಮಸ್ಯೆಯಾಗದಂತೆ ಹಾಗೂ ಶಾಂತಿಯುತವಾಗಿ ಕಾರ್ಯಕ್ರಮಗಳ ನಡೆಯಲು ಅಗತ್ಯವಾದ ಬಿಗಿಪೊಲೀಸ್ ಭದ್ರತೆಯ ಜೊತೆಗೆ ಸುಗಮ ಸಂಚಾರಕ್ಕೆ, ಪರ್ಯಾಯ ಮಾರ್ಗದ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.
ಸ್ಥಳೀಯ ಎಸ್ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ 3 ಡಿವೈಎಸ್ಪಿ, 8 ಇನ್ಸ್ಪೆಕ್ಟರ್ಸ್ 16 ಸಬ್ ಇನ್ಸ್ಪೆಕ್ಟರ್ಸ್, 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 3 ಕೆಎಸ್ಆರ್ಪಿ ತುಕಡಿ, 3 ಡಿಎಆರ್ ತುಕಡಿ ಸೇರಿ ಸ್ಥಳೀಯ ಹಾಗೂ ಯಾದಗಿರಿ ಜಿಲ್ಲೆಯಿಂದ 200ಕ್ಕು ಹೆಚ್ಚು ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಮೂರು ದಿನಗಳ ಉತ್ಸವದಲ್ಲಿ ಸಂಜೆ 40 ರಿಂದ 50 ಸಾವಿರ ಜನ ಸೇರಿ ಒಟ್ಟಾರೆ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದೆ, ಇಷ್ಟೇ ಅಲ್ಲದೇ ಸುಮಾರು 2 ರಿಂದ 3 ಸಾವಿರ ನಾಲ್ಕು ಚಕ್ರ ಹಾಗೂ 4 ಸಾವಿರ ದ್ವಿಚಕ್ರ ವಾಹನಗಳು ಬರುವ ಅಂದಾಜು ಮಾಡಲಾಗಿದೆ ಇದರೊಟ್ಟಿಗೆ ಸಾರಿಗೆ ಸಂಸ್ಥೆಯ ಬಸ್, ಖಾಸಗಿ ವಾಹನಗಳು ಸಹ ಬರುತ್ತಿರುವುದರಿಂದ ಎಲ್ಲ ವಾಹನಗಳಿಗೆ ಅಚ್ಚುಕಟ್ಟಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಲ್ಳಲಾಗಿದೆ. ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಭದ್ರತಾ ದೃಷ್ಟಿಯಿಂದ ಮಹಾನಗರ ಪಾಲಿಕೆಯಿಂದ 150 ಸಿಸಿ ಕ್ಯಾಮೆರಾಗಳನ್ನು ವಿವಿಧ ಕಾರ್ಯಕ್ರಮ ಸ್ಥಳಗಳಲ್ಲಿ ಅಳವಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿಗಳೂ ಕೂಡ ನಿರಂತರ ನಿಗಾ ವಹಿಸಲಿದ್ದಾರೆ. ಯಾವುದೇ ‘ಲಾಸ್ಟ್ ಅಂಡ್ ಫೌಂಡ್’ ಪ್ರಕರಣಗಳಿಗೆ ಪೊಲೀಸ್ ಸಹಾಯ ಕೇಂದ್ರದಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.
ಡಿವೈಎಸ್ಪಿ ಶಾಂತವೀರಯ್ಯ ಮಾತನಾಡಿ, ಉತ್ಸವಕ್ಕೆ ಬರುವ ವಾಹನಗಳಿಗೆ ಆಯ್ದ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ರಾಯಚೂರು ನಗರದಿಂದ ಬರುವವರಿಗೆ ವಿವಿ ಪಕ್ಕದಲ್ಲಿ 7-8 ಎಕರೆ ವಿಶಾಲ ಪ್ರದೇಶದಲ್ಲಿ ನಾಲ್ಕು ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಇನ್ನು ಸಿಂಧನೂರು, ಲಿಂಗಸೂರು ಮಾರ್ಗದಿಂದ ಬರುವ ವಾಹನಗಳಿಗೆ ಗ್ರೀನ್ ಪ್ಯಾಲೆಸ್, ಪೆಟ್ರೋಲ್ ಬಂಕ್ ಹಾಗೂ ವಿವಿಧ ಖಾಲಿ ಜಾಗಗಳಲ್ಲಿ ಸುಮಾರು 2 ಸಾವಿರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ಮಾಧ್ಯಮ ಹಾಗೂ ಅಧಿಕಾರಿಗಳ ವಾಹನಗಳಿಗೆ ಕೃಷಿ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್ ರಸ್ತೆಯ ಸಮೀಪ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಕಲಾವಿದರ ವಾಹನಗಳಿಗೆ ಮುಖ್ಯ ವೇದಿಕೆಯ ಹಿಂಭಾಗದಲ್ಲಿ 50- 60 ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಗಾಂಧಿ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ರೈಡ್ಗೆ ಆಗಮಿಸುವವರಿಗೆ ಸ್ಟೇಡಿಯಂ ಹಿಂಭಾಗದಲ್ಲಿ 150–200 ವಾಹನ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗಿದ್ದು,ಅದೇ ರೀತಿ ವಾಲ್ಕಟ್ ಮೈದಾನಕ್ಕೆ ಬರುವವರಿಗೆ ರಿಲಯನ್ಸ್ ಮಾರ್ಟ್ ಆವರಣದಲ್ಲಿ, ರಂಗಮಂದಿರಕ್ಕೆ ಬರುವವರಿಗೆ ಸಮೀಪದ ಸರ್ಕಾರಿ ಶಾಲೆ ಹಾಗೂ ಹಿಂಭಾಗದ ಖಾಲಿ ಜಾಗದಲ್ಲಿ, ಮಹಿಳಾ ಸಮಾಜ ಕಾರ್ಯಕ್ರಮಕ್ಕೆ ಮುಂಭಾಗದ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಪರ್ಯಾಯ ಮಾರ್ಗವನ್ನು ರೂಪಿಸಲಾಗಿದೆ. ಹೊರಗಡೆಯಿಂದ ನಗರಕ್ಕೆ ಬರುವ ವಾಹನಗಳನ್ನು ಬೈಪಾಸ್ ಮುಖಾಂತರ ರಿಮ್ಸ್ ಮಾರ್ಗವಾಗಿ, ಬಜಾರ್ ಸರ್ಕಲ್, ಮೈಕ್ರೋ ಟವರ್ ಬೈಪಾಸ್, ಗದ್ದಲ್ ರಸ್ತೆ, ಎಂಆರ್ಎಸ್ ಬೈಪಾಸ್ ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಿಎಸ್ಐಗಳಾದ ಸಣ್ಣ ಈರೇಶ, ಮಹೇಶ ಪಾಟೀಲ್ ಸೇರಿ ಅಧಿಕಾರಿ, ಸಿಬ್ಬಂದಿ ಇದ್ದರು.---
04ಕೆಪಿಆರ್ಸಿಆರ್ 03: ರಾಯಚೂರಿನ ಎಸ್ಪಿ ಅರುಣಾಂಗ್ಷು ಗಿರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.