ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ, ಸಮಯಪಾಲನೆ, ಆತ್ಮವಿಶ್ವಾಸ ಮತ್ತು ಸೂಕ್ತ ಮಾರ್ಗದರ್ಶನ ಅತ್ಯಂತ ಅವಶ್ಯಕ.

ಕನ್ನಡಪ್ರಭ ವಾರ್ತೆ ಕೋಲಾರ

ಬೆಂಗಳೂರು ಉತ್ತರ ವಿವಿ ಪಿಎಂ-ಉಷಾ ಘಟಕ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮೂರು ದಿನಗಳ ಕಾರ್ಯಾಗಾರ ಆ.೩೧ ರಿಂದ ಸೆ.೨ ರವರೆಗೆ ಆಯೋಜಿಸಲಾಗಿದ್ದು, ಸೋಮವಾರ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಶ್ರೀನಿವಾಸಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ, ಸಮಯಪಾಲನೆ, ಆತ್ಮವಿಶ್ವಾಸ ಮತ್ತು ಸೂಕ್ತ ಮಾರ್ಗದರ್ಶನ ಅತ್ಯಂತ ಅವಶ್ಯಕ ಎಂದು ತಿಳಿಸಿದರು.

ಬೆಳಗಿನ ಅವಧಿಯಲ್ಲಿ ಇಂಡಿಯಾ ೪ ಐಎಎಸ್ ಸಂಸ್ಥೆಯ ನಿರ್ದೇಶಕ ಹಾಗೂ ಸಹ ಸಂಸ್ಥಾಪಕ ಬಾಬು ಸಂದೀಪ್ ಕುಮಾರ್ ಎಸ್.ಎಂ. ಮತ್ತು ಯುಪಿಎಸ್‌ಸಿ ಅಧ್ಯಾಪಕ ಹಾಗೂ ಆಪ್ಟಿಟ್ಯೂಡ್ ತರಬೇತುದಾರ ಪ್ರವೀಣ್ ಕುಮಾರ್.ಎನ್ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ, ಪೂರ್ವಸಿದ್ಧತೆ, ಸಮಯ ನಿರ್ವಹಣೆ, ಆಪ್ಟಿಟ್ಯೂಡ್ ಕೌಶಲ್ಯ ಮತ್ತು ಪರಿಣಾಮಕಾರಿ ಅಧ್ಯಯನ ವಿಧಾನಗಳ ಕುರಿತು ಮಾರ್ಗದರ್ಶನ ನೀಡಿದರು.

ಬೆಂಗಳೂರಿನ ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಯುಪಿಎಸ್‌ಸಿ ಅಧ್ಯಾಪಕ ಡಾ.ರಾಜಣ್ಣ ಯುಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಪ್ರಚಲಿತ ವಿದ್ಯಾಮಾನಗಳ ಅಧ್ಯಯನ, ವಿಷಯಾಧಾರಿತ ಅರಿವು ಮತ್ತು ನಿಯಮಿತ ಅಭ್ಯಾಸದ ಮಹತ್ವ ವಿವರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಡಾ.ಮುರಳೀಧರ್, ಸಿಬ್ಬಂದಿ ಕಾರ್ಯದರ್ಶಿ ಡಾ.ಎಂ.ಜಿ.ಶ್ರೀನಿವಾಸ್, ಸಂಯೋಜಕ ಡಾ.ಬಿ.ವಿಶ್ವಲಿಂಗ ಪ್ರಸಾದ್, ಕನ್ನಡ ವಿಭಾಗದ ರಾಮಾಂಜಿನಿ, ಇಂಗ್ಲಿಷ್ ವಿಭಾಗದ ಡಾ.ರಯೀಸುಲ್ ಹಸನ್ ಇದ್ದರು.