ಸಾರಾಂಶ
- ಖಾಲಿ ನಿವೇಶನಗಳ ಸ್ವಚ್ಛತೆಗೊಳಿಸಲು ಪುರಸಭೆ ಅಧಿಕಾರಿಗಳ ಮನವಿ
- - -ಚನ್ನಗಿರಿ: ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-13ಕ್ಕೆ ಹೊಂದಿಕೊಂಡ ಖಾಸಗಿ ನಿವೇಶನಗಳಲ್ಲಿ ಪಟ್ಟಣದ ಬೀದಿಬದಿಯ ವ್ಯಾಪಾರಸ್ಥರು ಅಂಗಡಿಗಳ ತ್ಯಾಜ್ಯವಸ್ತು ತಂದು ರಾಶಿ ಹಾಕುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಓಡಾಡುವ ಜನರಿಗೆ ದುರ್ನಾತ ಬೀರುತ್ತಿತ್ತು. ಈ ಬಗ್ಗೆ ಪುರಸಭೆಗೆ ಹಲವಾರು ಬಾರಿ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆ ಸೋಮವಾರ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಮತ್ತು ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ನೇತೃತ್ವದಲ್ಲಿ ಖಾಸಗಿ ನಿವೇಶನದ ಮಾಲೀಕರಿಗೆ ದಂಡ ಹಾಕಿ, ಖಾಲಿ ನಿವೇಶನಕ್ಕೆ ಯಾರು ತ್ಯಾಜ್ಯ ಎಸೆಯದಂತೆ ಬೇಲಿ ಹಾಕಿಸಲಾಯಿತು.
ಅಧಿಕಾರಿಗಳು ಮಾತನಾಡಿ, ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಖಾಸಗಿ ನಿವೇಶನಗಳಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ಪುರಸಭೆಗೆ ದೂರುಗಳು ಬಂದಿವೆ. ಈ ಹಿನ್ನೆಲೆ ಸಂಬಂಧಿಸಿದ ನಿವೇಶನಗಳ ಮಾಲೀಕರಿಗೆ ಸಾಕಷ್ಟು ಬಾರಿ ನಿವೇಶನದಲ್ಲಿ ಸ್ವಚ್ಛತೆ ಕಾಪಾಡುವಂತೆ ನೋಟಿಸ್ ನೀಡಿದ್ದೆವು. ಆದರೂ, ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆ ಈ ದಿನ ಖಾಸಗಿ ನಿವೇಶನಗಳ ಮಾಲೀಕರಿಗೆ ದಂಡ ವಿಧಿಸಿದ್ದೇವೆ. ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಅವರ ಸೂಚನೆಯಂತೆ ಖಾಲಿ ನಿವೇಶಕ್ಕೆ ಯಾರು ಹೋಗದಂತೆ ತಡಗಿನ ಬೇಲಿಯನ್ನು ಸಹ ಹಾಕಿಸಲಾಗಿದೆ ಎಂದರು.ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಮಾತನಾಡಿ, ಪುರಸಭೆ ವತಿಯಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಸದ ಗಾಡಿಗಳನ್ನು ಅಂಗಡಿ-ಮನೆಗಳ ಬಳಿಗೆ ಕಳಿಸಲಾಗುತ್ತಿದೆ. ಪಟ್ಟಣದ ನಾಗರೀಕರು ಮತ್ತು ವ್ಯಾಪಾರಸ್ಥರು ಕಸಗಳ ಬೇರ್ಪಡಿಸಿ, ಸಂಗ್ರಹಿಸಿದ್ದನ್ನು ಕಸದ ಗಾಡಿಗೆ ತಪ್ಪದೇ ನೀಡಿ ಪಟ್ಟಣದ ಸ್ವಚ್ಚತೆಗೆ ಸಹಕರಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದರು.
ಈ ಸಂದರ್ಭ ಕಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್, ಕಚೇರಿ ಸಿಬ್ಬಂದಿ ಹಾಜರಿದ್ದರು.- - -
-28ಕೆಸಿಎನ್ಜಿ3:ಚನ್ನಗಿರಿ ಪಟ್ಟಣದ ಬಸ್ ನಿಲ್ದಾಣ ಬಳಿಯ ಖಾಸಗಿ ಖಾಲಿ ನಿವೇಶನದಲ್ಲಿ ತ್ಯಾಜ್ಯದ ರಾಶಿಗೆ ಮುಕ್ತಿ ನೀಡಲು ತಗಡಿನ ತಡೆಬೇಲಿ ಹಾಕಿಸುವ ಕಾಮಗಾರಿಯನ್ನು ಪುರಸಭೆ ಅಧಿಕಾರಿಗಳು ಪರಿಶೀಲಿಸಿದರು.