ತಿಪಟೂರು: ಜನರು ನೀರಿಗಾಗಿ ಪರದಾಟ

| Published : Feb 12 2024, 01:34 AM IST

ಸಾರಾಂಶ

ತಿಪಟೂರು ನಗರದಲ್ಲಿ ನೀರಿನ ಸಮಸ್ಯೆ

ಕನ್ನಡಪ್ರಭ ವಾರ್ತೆ ತಿಪಟೂರು

ಬೇಸಿಗೆ ಕಾಲ ಪ್ರಾರಂಭಕ್ಕೂ ಮುನ್ನವೇ ನಗರದಲ್ಲಿ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದ್ದು, ನೀರಿಗಾಗಿ ಮಹಿಳೆಯರು, ಮಕ್ಕಳು ಇಡೀ ದಿನವನ್ನೆ ವ್ಯಯಿಸಬೇಕಾದ ಸ್ಥಿತಿ ಉಂಟಾಗಿದೆ. ಕೆಲವರಂತೂ ಹಣಕೊಟ್ಟು ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುತ್ತಿದ್ದು ನಗರಾಡಳಿತ ಕೂಡಲೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ನಗರದ ನಾಗರಿಕರು ಒತ್ತಾಯಿಸಿದ್ದಾರೆ.

ನಗರಕ್ಕೆ ನೀರು ಸರಬರಾಜು ಮಾಡುವ ಈಚನೂರು ಕೆರೆಯಲ್ಲಿ ನೀರು ಇಲ್ಲದಂತಾಗಿದ್ದು, ಇತ್ತ ನಗರಸಭೆ ಅಧಿಕಾರಿಗಳು ಟ್ಯಾಂಕರ್‌ ಮೂಲಕವೂ ನೀರು ಸರಬರಜು ಮಾಡುತ್ತಿಲ್ಲ. ಇದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆಯೇ ವಿನಹ ಕಡಿಮೆಯಾಗುತ್ತಿಲ್ಲ. ನಗರದ ಕೆ.ಆರ್‌.ಬಡಾವಣೆ, ಶಾರದಾನಗರ, ವಿದ್ಯಾನಗರ, ಗೋವಿನಪುರ, ಕಂಚಾಘಟ್ಟ, ಗಾಂಧಿನಗರ ಸೇರಿದಂತೆ ೩೧ವಾರ್ಡ್‌ಗಳಲ್ಲೂ ನೀರಿಗೆ ಹಾಹಾಕಾರ ಉಂಟಾಗಿದ್ದು, ನಗರಸಭೆ ಕೂಡಲೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವಂತೆ ನಗರವಾಸಿಗಳ ಒತ್ತಾಯವಾಗಿದೆ.

ಬಹುತೇಕರು ಹೆಚ್ಚಿನ ಹಣ ನೀಡಿ ಟ್ಯಾಂಕರ್‌ಗಳಿಂದ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಕೋಟ್ಯಾಂತರ ರೂ ವೆಚ್ಚದ ೨೪*೭ ನೀರಿನ ವ್ಯವಸ್ಥೆ ಜಾರಿಗೆ ಬಂದು ಹಲವಾರು ವರ್ಷಗಳಾದರೂ ನೀರಿಗೆ ಸಮಸ್ಯೆ ತಪ್ಪಿಲ್ಲ. ಉಳ್ಳವರು ಹಣ ಕೊಟ್ಟು ನೀರು ಹಾಕಿಸಿಕೊಳ್ಳುತ್ತಾರೆ ಆದರೆ ಕೂಲಿ ಮಾಡಿ ಜೀವನ ನಡೆಸುವ ಜನರು, ಮಧ್ಯಮ ವರ್ಗದವರು ನೀರಿಗಾಗಿ ಪರದಾಡುವಂತಾಗಿದೆ. ಕೆಲ ಬಡಾವಣೆಗಳಲ್ಲಿ ಬೋರ್‌ವೆಲ್‌ಗಳೇ ಇಲ್ಲವಾಗಿದ್ದು, ನೀರಿಗಾಗಿ ಬೀದಿ ಬೀದಿ ಅಲೆಯುವಂತಾಗಿದೆ. ನೀರಿಗೆ ತೆರಿಗೆ ಕಟ್ಟುವ ಜನರಿಗೆ ಮತ್ತಷ್ಟು ಹೊರೆ ಹೊರಿಸುವ ಕೆಲಸವನ್ನ ಇಲ್ಲಿನ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಮಾಡುತ್ತಿರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ತೊಂದರೆ ಅನುಭವಿಸುವಂತಾಗಿದ್ದು, ಟ್ಯಾಂಕರ್‌ಗಳಿಂದ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ನೀರಿಗೆ ಹೆಚ್ಚು ಡಿಮ್ಯಾಂಡ್ ಇರುವುದರಿಂದ ಟ್ಯಾಂಕರ್‌ನವರು ಮನಸೋ ಇಚ್ಚೆ ಹಣ ಕೇಳುತ್ತಿದ್ದು, ನೀರಿಗೆ ತೆರಿಗೆ ಕಟ್ಟಿಯೂ ಮತ್ತಷ್ಟು ಹೊರೆ ಹೊರಿಸುವ ಕೆಲಸವನ್ನ ನಗರಸಭೆ ಅಧಿಕಾರಿಗಳು ಮಾಡುತ್ತಿದ್ದು ಶೀಘ್ರ ನಗರದ ಜನತೆಗೆ ನೀರು ನೀಡುವ ಕೆಲಸ ಮಾಡಬೇಕೆಂದು ಸಾರ್ವಜನಿಕರು ಹಾಗೂ ಕೆಲ ನಗರಸಭಾ ಸದಸ್ಯರು ಒತ್ತಾಯಿಸಿದ್ದಾರೆ.