ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ದೇಶದ ಗಮನ ಸೆಳೆದ ಕುಕ್ಕರ್ ಬಾಂಬ್ ಹಾಗೂ ರಾಮೇಶ್ವರಂ ಕೆಫೆಯ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಇಸ್ಲಾಮಿಕ್ ಮಾನಸಿಕತೆ ವ್ಯಕ್ತಿಗಳಿಂದಾಗಿ ತೀರ್ಥಹಳ್ಳಿ ಎರಡನೇ ಭಟ್ಕಳವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಶ್ರೀ ರಾಮಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದರು.ಆತಂಕ ಸೃಷ್ಟಿಸಿದ ಭಯೋತ್ಪಾದಕ ಘಟನೆಗಳಾದ ಕುಕ್ಕರ್ ಬಾಂಬ್ ಮತ್ತು ರಾಮೇಶ್ವರಂ ಕೆಫೆ ಬ್ಲಾಸ್ಟ್ ರೂವಾರಿ ಶಾರಿಕ್ ಮತ್ತು ಮತೀನ್ ಇಲ್ಲಿಯವರಾಗಿದ್ದಾರೆ. ಅಷ್ಟೇ ಅಲ್ಲದೇ ನಂದಿತಾ ಕೊಲೆ ಪ್ರಕರಣದ ಹಿಂದೆಯೂ ಭಯೋತ್ಪಾದಕರಿದ್ದರು. ಆದರೆ, ಆ ಬಗ್ಗೆ ಸರಿಯಾದ ತನಿಖೆ ನಡೆದಿರಲಿಲ್ಲ. ಸರಿಯಾದ ತನಿಖೆ ನಡೆದಿದ್ದರೆ ಇಸ್ಲಾಮಿಕ್ ಮಾನಸಿಕತೆಯ ದೊಡ್ಡ ವ್ಯಕ್ತಿಗಳೂ ಬಯಲಿಗೆ ಬರುತ್ತಿದ್ದರು ಎಂದು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ವಕ್ಫ್ ಬೋರ್ಡ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ದೇಶದ್ರೋಹಿ ಚಟುವಟಿಕೆಗೆ ಪೂರಕವಾಗಿರುವ ಈ ಕಾಯ್ದೆಗೆ ಕಾಂಗ್ರೆಸ್ ವಿಶೇಷ ಅಧಿಕಾರ ನೀಡಿದ್ದು, ಮುಸ್ಲೀಮರ ತುಷ್ಠೀಕರಣದ ಸಲುವಾಗಿಯೇ ಈ ಕಾಯ್ದೆ ಸೃಷ್ಠಿ ಮಾಡಲಾಗಿದೆ. ರೈತರ ಜಮೀನು ವಕ್ಫ್ ಖಾತೆಗೆ ಸೇರಿದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ರೈತ ಭುಗಿಲೆದ್ದಿದ್ದಾನೆ. ದಲಿತರ ಭೂಮಿ, ದೇವಸ್ಥಾನ, ಗರಡಿಮನೆ ಸರ್ಕಾರಿ ಭೂಮಿಯನ್ನೂ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.ರಾಯಚೂರು ಜಿಲ್ಲೆ ಸಿಂಧನೂರು ಶಾಸಕರ 12 ಎಕರೆ ಜಮೀನು ವಕ್ಫ್ ಆಸ್ತಿ ಎಂದೂ ಹೇಳಲಾಗಿದೆ. 9.40 ಲಕ್ಷ ಎಕರೆ ಭೂಮಿಯನ್ನು ವಕ್ಫ್ ಬೋರ್ಡ್ಗೆ ದಾನ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರಲ್ಲದೇ, ಯಾವುದೇ ಇಸ್ಲಾಂ ರಾಷ್ಟ್ರದಲ್ಲೂ ಇಷ್ಟರ ಮಟ್ಟಿನ ಅಧಿಕಾರ ನೀಡಿದ ಒಂದು ಉದಾಹರಣೆಯೂ ಇಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಕಾಯ್ದೆ ವಾಪಾಸು ತೆಗೆದುಕೊಳ್ಳಲು ಹೇಳಿದ್ದರೂ ನೋಟಿಸ್ ಕಳುಹಿಸಲಾಗುತ್ತಿದೆ. ಹಾಗಾದರೆ ಮುಖ್ಯಮಂತ್ರಿಗಳ ಆದೇಶಕ್ಕೂ ಬೆಲೆ ಇಲ್ಲವೇ ಎಂದು ಎಂದರು.ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಷೇಕ್ ಹಸೀನಾ ಅಧಿಕಾರದಿಂದ ಇಳಿಯುತ್ತಿದ್ದಂತೆ ಪಾಕ್ ಪ್ರೇರಣೆಯಿಂದ ಬಾಂಗ್ಲಾದಲ್ಲಿರುವ ಹಿಂದೂ ದೇವಾಲಯಗಳು ಮತ್ತು ಭಾರತದ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ. ಆ ದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳೂ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಉಪಕಾರ ಸ್ಮರಣೆ ಇಲ್ಲದೇ ಜನ್ಮ ಕೊಟ್ಟ ದೇಶದ ಜನತೆಗೆ ಮಾಡುತ್ತಿರುವ ದ್ರೋಹ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮಸೇನೆ ಕಾರ್ಯಕರ್ತರಿದ್ದರು.