ಸಾರಾಂಶ
ಭದ್ರಾವತಿ: ನಮ್ಮ ಮಕ್ಕಳ ಸೃಜನಶೀಲ ಮನಸ್ಸುಗಳನ್ನು ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಭದ್ರಾವತಿ: ನಮ್ಮ ಮಕ್ಕಳ ಸೃಜನಶೀಲ ಮನಸ್ಸುಗಳನ್ನು ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾವ್ಯ, ಕಥೆ ಹಾಗೂ ಪ್ರಬಂಧ ರಚನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದ ಜೊತೆ ಭಾಷೆ, ಸಾಹಿತ್ಯ, ಸೃಜನಶೀಲ ಚಿಂತನೆ ಎಲ್ಲವೂ ಅನುಭವಕ್ಕೆ ಬರಬೇಕು. ಆದರೆ ಅಂಕಗಳ ಹಿಂದೆ ಓಡುವ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ ಕಳಪೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ನಮ್ಮ ಮಕ್ಕಳು ಕವಿಯಾಗಿ, ಕಥೆಗಾರರಾಗಿ, ಪ್ರಬಂಧಕಾರರಾಗಿ ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಕಳೆದ ೧೯ ವರ್ಷಗಳಿಂದ ಜಿಲ್ಲೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಕ್ರಿಯಾಶೀಲ ಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳ ಸಮಯ ಅಮೂಲ್ಯವಾಗಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಲು ಕಮ್ಮಟಗಳು ಉಪಯುಕ್ತವಾಗಿವೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬರೆಯಲು, ಮಾತನಾಡಲು ಸಾಧ್ಯವಾಗದಿದ್ದರೆ ಆಲಿಸುವ, ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಪ್ರಾಥಮಿಕ ಶಿಕ್ಷಣಕ್ಕೆ ಭದ್ರವಾದ ಬುನಾದಿ ಹಾಕಬೇಕು. ಅದು ಕೆಲವೆಡೆ ಆಗುತ್ತಿಲ್ಲ ಎನ್ನುವ ಕೊರಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಎಚ್.ಟಿ.ಕೃಷ್ಣಮೂರ್ತಿ ಅವರು ಕವಿತೆ ನಿಮ್ಮೊಳಗೆ ಹುಟ್ಟುತ್ತೆ. ಅದು ಹೇಗಿರುತ್ತೆ ಎಂದು ವಿವರಿಸಿದರು. ರಂಗಕರ್ಮಿ, ಸಹ ಪ್ರಾಧ್ಯಾಪಕ ಡಾ.ಜಿ.ಆರ್.ಲವ ಅವರು ಕಥೆ ರಚನೆ ಕುರಿತು ಹಾಗೂ ಸಾಹಿತಿ ಅಂಕಣಕಾರ ಬಿ.ಚಂದ್ರೇಗೌಡ ಪ್ರಬಂಧ ಸಾಹಿತ್ಯ ಕುರಿತು ಮಾಹಿತಿ ನೀಡಿದರು.ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.ಉಪ ಪ್ರಾಂಶುಪಾಲ ದಯಾನಂದ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ರವೀಂದ್ರ, ಕಾಂತರಾಜ್, ಕಾರ್ಯದರ್ಶಿ ಉಮಾಪತಿ, ತಾಲೂಕು ಕಸಾಪ ಕಟ್ಟಡ ಸಮಿತಿ ಅಧ್ಯಕ್ಷೆ ಡಾ.ವಿಜಯದೇವಿ, ರಂಗ ಕಲಾವಿದರಾದ ವೈ.ಕೆ ಹನುಮಂತಯ್ಯ, ಕಮಲಾಕರ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.