ಹಾವೇರಿ: ತಂಬಾಕು ಮತ್ತು ಅದರ ಉತ್ಪನ್ನಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಸೇವನೆಯಿಂದ ದುರಂತ ಘಟನೆಗಳು ಸಮಾಜದಲ್ಲಿ ಸಂಭವಿಸುತ್ತವೆ. ತಂಬಾಕು ಎಂಬ ಹೆಮ್ಮಾರಿ ವಿಶ್ವ ವ್ಯಾಪಿಯಾಗಿದ್ದು, ಆರೋಗ್ಯವಂತ ನಾಗರಿಕ ಸಮಾಜಕ್ಕೆ ಕಂಟಕ ಪ್ರಾಯವಾಗಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.

ತಾಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.ಸಿಗರೇಟ್, ಬೀಡಿ, ಗುಟ್ಕಾ ಮುಂತಾದ ತಂಬಾಕಿನ ಉತ್ಪನ್ನಗಳನ್ನು ನಾವು ಸೇದುವ ಅಥವಾ ಸೇವಿಸುವ ಮೂಲಕ ನಮಗರಿವಿಲ್ಲದಂತೆ ನಾವೇ ಹಚ್ಚಿ ಸುಟ್ಟ ಬೆಂಕಿಯ ಹೊಗೆಯಲ್ಲಿ ನಿಕೋಟಿನ್ ಒಳಗೊಂಡಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಅಪಾಯಕಾರಿ ಪದಾರ್ಥಗಳನ್ನು ನಮ್ಮ ಶ್ವಾಸನಾಳಗಳು ಹೀರಿ ದೇಹದೊಳಕ್ಕೆ ಬಿಟ್ಟುಕೊಳ್ಳುತ್ತದೆ. ಇವೆಲ್ಲವೂ ಕ್ಯಾನ್ಸರ್, ಹೃದಯಘಾತಉಂಟು ಮಾಡುವ ತನ್ಮೂಲಕ ಜೀವ ತೆಗೆಯುವ ವಿಷಯಕಾರಕ ವಿಚ್ಛಿದ್ರ ಶಕ್ತಿಗಳಾಗಿವೆ. ಆದ್ದರಿಂದ ತಂಬಾಕು ಸೇವನೆಯೆ ಬಾಯಿ ಕ್ಯಾನ್ಸರ್‌ಗೆ ಕಾರಣವಾಗಿದೆ. ನಮಗೆ ನಾವೇ ಸಾವಿಗೆ ಆಹ್ವಾನ ಕೊಟ್ಟಂತೆ, ಪ್ರತಿ ಶೇ.೧೦೦ ಕ್ಯಾನ್ಸರ್ ಪ್ರಕರಣಗಳಲ್ಲಿ ೪೦ ತಂಬಾಕು ಸೇವನೆಗೆ ಸಂಬಂಧಿಸಿದಾಗಿರುತ್ತವೆ. ಶೇ.೯೫ ತಂಬಾಕು ಸೇವನೆ ಬಾಯಿ ಕ್ಯಾನ್ಸರ್‌ಗೆ ಕಾರಣವಾಗಿದೆ. ಗರ್ಭಿಣಿಯರು ಬೇರೆಯವರು ಬಿಟ್ಟ ಹೊಗೆ ಸೇವಿಸಿದರೆ ಗರ್ಭಸ್ಥ ಶಿಶುವಿಗೆ ಕ್ಯಾನ್ಸರ್ ತಗಲುವುದು ಎಂದು ಹನುಮಂತ್ ಗೌಡ ಉದಾಹರಣೆ ಮೂಲಕ ತಿಳಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ತಂಬಾಕು ಅನೇಕ ಕಾಯಿಲೆಗಳ ಮೂಲ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣವು ಸರ್ಕಾರದ್ದು ಮಾತ್ರವಲ್ಲ, ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಇಚ್ಛಾಶಕ್ತಿ ತೋರಬೇಕು. ದುಶ್ಚಟಗಳಿಂದ ಅನೇಕ ಕುಟುಂಬಗಳು ಹಾಳಾಗಿವೆ. ಧರ್ಮಸ್ಥಳ ಸಂಸ್ಥೆಯ ೧೦ ಹಲವಾರು ರಚನಾತ್ಮಕ ಜನಪರ ಯೋಜನೆಗಳು ಒಂದು ವರವಾಗಿವೆ ಎಂದರು.ಕೃಷಿ ಮೇಲ್ವಿಚಾರಕ ರವಿಚಂದ್ರ ಮಡಿವಾಳರ ಮಾತನಾಡಿ, ಚಟಗಳನ್ನು ಬೆಳೆಸಿಕೊಳ್ಳಬಾರದು, ಅದು ವ್ಯಸನವಾಗಿ ಪರಿವರ್ತನೆ ಹೊಂದಿದರೆ ಬದುಕು ಸರ್ವನಾಶದ ಅಂಚಿಗೆ ಬಂದು ತಲುಪುವುದು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವಿದೆ, ಸಂಸ್ಥೆಯ ಅನೇಕ ಸಮಾಜಮುಖಿ ಯೋಜನೆಗಳು ಗ್ರಾಮೀಣ ಜನರ ಬದುಕಲ್ಲಿ ಬೆಳಕು, ಸ್ವಾವಲಂಬನೆ ಮೂಡಿಸಿವೆ ಎಂದರು.ಒಕ್ಕೂಟದ ಅಧ್ಯಕ್ಷೆ ನಾಗಮ್ಮ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಂಕ್ರಮ್ಮ ಹಿರೇಮಠ, ಶೈಲಜಾ ಹಿರೇಮಠ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ಲಲಿತ ಬೆಳವಿಗಿ ಸ್ವಾಗತಿಸಿದರು. ಮೇಲ್ವಿಚಾರಕ ರವಿ ಕವಟಕೊಪ್ಪ ನಿರೂಪಿಸಿದರು. ಸೇವಾ ಪ್ರತಿನಿಧಿ ನಿಂಗಪ್ಪ ಕಮಾಟರ ವಂದಿಸಿದರು.