ಕನ್ನಡಪ್ರಭ ವಾರ್ತೆಶ್ರೀರಂಗಪಟ್ಟಣ

ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತ ಹಾಗೂ ಶ್ವಾಸಕೋಶದ ಕಾಯಿಲೆಗಳು ಬರುವ ಅಪಾಯವಿದೆ. ಈ ಬಗ್ಗೆ ಅರಿವು ಮೂಡಿಸುವುದು ತೀರಾ ಅಗತ್ಯ ಎಂದು ಐಕ್ಯ ಅಲೈಯನ್ಸ್ ಅಧ್ಯಕ್ಷೆ ಎನ್‍.ಸರಸ್ವತಿ ತಿಳಿಸಿದರು.

ತಾಲೂಕಿನ ಮೇಳಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅಸೋಶಿಯೇಷನ್ ಆಫ್ ಐಕ್ಯಾ ಅಲೈಯನ್ಸ್ ಕ್ಲಬ್, ಅನನ್ಯ ಆರ್ಟ್ ಸಂಸ್ಥೆ, ಕಾಮಧೇನು ಸ್ವಸಹಾಯ ಸಂಘ, ಮಂಡ್ಯ ಜಿಲ್ಲಾ ಜನರಲ್ ಲಿಸ್ಟ್ ಕ್ಲಬ್, ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಗಳ ಸಹಯೋಗದೊಂದಿಗೆ ತಂಬಾಕು ವಿರೋಧಿ ದಿನ ಮತ್ತು ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ದಿನದಲ್ಲಿ ತಂಬಾಕು ಸೇವನೆಯಿಂದಾಗುವ ಪರಿಣಾಮಗಳ ಕುರಿತು ವೈದ್ಯರು ಹೇಳುವ ಮಾಹಿತಿ ತಿಳಿದುಕೊಳ್ಳಬೇಕು. ಸಾರ್ವಜನಿಕವಾಗಿ ಎಚ್ಚರಿಕೆ ವಹಿಸಿ ಸೇವನೆ ಮಾಡುವುದನ್ನು ಬಿಡಬೇಕು. ದೇಶದಲ್ಲಿ ತಂಬಾಕು ಮುಕ್ತವಾಗಿಸಲು ಪಣ ತೊಡಬೇಕು ಎಂದರು.

ಪರಿಸರ ಸಂರಕ್ಷಣೆ ಕುರಿತು ಆಶಾಲತಾ ಪುಟ್ಟೇಗೌಡ ಮಾತನಾಡಿ, ಪರಿಸರ ಸಂರಕ್ಷಿಸಲು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಕೆಲವು ಸರಳ ಹಾಗೂ ಪರಿಣಾಮಕಾರಿ ಕ್ರಮ ಅಳವಡಿಸಿಕೊಳ್ಳುವ ಮೂಲಕ ಮಾಲಿನ್ಯ ನಿಯಂತ್ರಿಸಬೇಕು. ನೈಸರ್ಗಿಕ ಸಮತೋಲನ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.


ಅನನ್ಯ ಆರ್ಟ್ ಸಂಸ್ಥೆ ಅನುಪಮಾ ಮಾತನಾಡಿ, ಮಹಿಳೆಯರು ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲು ಸ್ಯಾನಿಟರಿ ನ್ಯಾಪಕಿನ್ ಬಳಸುವ ಮೂಲಕ ಸ್ವಚ್ಛತೆಗೆ ಮುಂದಾಗಬೇಕು ಎಂದರು.

ಇದಕ್ಕೂ ಮುನ್ನ ಶ್ರೀಹೆಗ್ಗಡೇಶ್ವರ ಪ್ರಸನ್ನ ಪಾರ್ವತಿ ದೇವಾಲಯದ ಆವರಣದಲ್ಲಿ ಸಾಗ್ವಾನಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆ ಆಚರಿಸಿ, ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನು ಉಚಿತವಾಗಿ ವಿತರಿಸಲಾಯಿತು.

ಈ ವೇಳೆ ಪುರಸಭೆ ಮಾಜಿ ಸದಸ್ಯೆ ನಳಿನ, ಪುಷ್ಪ, ಎಚ್.ವಿ.ಪಟ್ಟಸ್ವಾಮಿ, ಬನಶಂಕರಿ, ನಾಗೇಂದ್ರ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ, ವಿರೂಪಾಕ್ಷ, ಶಿವಣ್ಣ, ಸಂಜೀವಿನಿ ಒಕ್ಕೂಟದ ಮ್ಯಾನೇಜರ್ ರಂಜಿತಾ, ಭಾಗ್ಯಮ್ಮ, ಪ್ರಭುಸ್ವಾಮಿ ಸೇರಿದಂತೆ ಇತರರು ಇದ್ದರು.