ಇಂದು ಮಾಜಿ ಸಿಎಂ ಎಸ್.ಎಂ.ಕೃಷ್ಣರ 11ನೇ ದಿನದ ವೈಕುಂಠ ಸಮಾರಾಧನೆ

| Published : Dec 21 2024, 01:18 AM IST

ಸಾರಾಂಶ

ಒಕ್ಕಲಿಗ ಸಂಪ್ರದಾಯದಂತೆ ನಡೆಯುವ ದಿನದ ವಿಧಿ ವಿಧಾನಗಳ ವೇಳೆ ಗೀತ ನಮನ, ಗಣ್ಯರಿಂದ ಪುಷ್ಪನಮನ, ಮತ್ತಿತರ ಕಾರ್ಯಕ್ರಮಗಳು ನಿಯೋಜನೆಗೊಂಡಿದೆ. ಗಮಿಸುವ ಗಣ್ಯರು ಮತ್ತು ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶಾಲ ಬಯಲಿನಲ್ಲಿ ಜರ್ಮನ್ ಟೆಂಟ್ ಅಳವಡಿಸಿ ಊಟದ ವ್ಯವಸ್ಥೆಗೆ ಪ್ರತ್ಯೇಕ ಸ್ಥಳ ನಿಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಸೋಮನಹಳ್ಳಿಯಲ್ಲಿ ಡಿ.21ರಂದು ನಡೆಯಲಿರುವ ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ 11ನೇ ದಿನದ ವೈಕುಂಠ ಸಮಾರಾಧನೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಕೆ.ಎಂ. ಉದಯ್ ಪೂರ್ವ ಸಿದ್ಧತೆ ಕುರಿತು ಕಾಫಿ ಡೇ ಸಮೀಪದ ಕೃಷ್ಣರ ಸಮಾಧಿ ಬಳಿಗೆ ಪರಿಶೀಲಿಸಿದರು.

ಶನಿವಾರ ಮಧ್ಯಾಹ್ನ 11 ಗಂಟೆಗೆ ಆಯೋಜಿಸಿರುವ ಒಕ್ಕಲಿಗರ ಸಂಪ್ರದಾಯದಂತೆ 11ನೇ ದಿನದ ಭೂಶಾಂತಿ ಉತ್ತರ ಕ್ರಿಯಾದಿ ಕಾರ್ಯವನ್ನು ಕುಟುಂಬ ಸದಸ್ಯರು, ಗಣ್ಯರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ನಡೆಯಲಿದೆ.

ರಾಜ್ಯ ಸರ್ಕಾರದ ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಶಾಸಕರು ಹಾಗೂ ಕುಟುಂಬ ಸದಸ್ಯರೊಟ್ಟಿಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳಲಿದ್ದು, ಅಗತ್ಯ ಬಂದೋಬಸ್ತ್ ಸೇರಿದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.

ಒಕ್ಕಲಿಗ ಸಂಪ್ರದಾಯದಂತೆ ನಡೆಯುವ ದಿನದ ವಿಧಿ ವಿಧಾನಗಳ ವೇಳೆ ಗೀತ ನಮನ, ಗಣ್ಯರಿಂದ ಪುಷ್ಪನಮನ, ಮತ್ತಿತರ ಕಾರ್ಯಕ್ರಮಗಳು ನಿಯೋಜನೆಗೊಂಡಿದೆ. ಗಮಿಸುವ ಗಣ್ಯರು ಮತ್ತು ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶಾಲ ಬಯಲಿನಲ್ಲಿ ಜರ್ಮನ್ ಟೆಂಟ್ ಅಳವಡಿಸಿ ಊಟದ ವ್ಯವಸ್ಥೆಗೆ ಪ್ರತ್ಯೇಕ ಸ್ಥಳ ನಿಯೋಜಿಸಲಾಗಿದೆ.

ಈ ವೇಳೆ ಶಾಸಕರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಮಾಜಿ ಶಾಸಕ ಮರಿತಿಬ್ಬೇಗೌಡ, ಸ್ಟಾರ್ ಚಂದ್ರು, ಎಡಿಜಿಪಿ ರವಿಕಾಂತೇಗೌಡ, ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ, ಕಾಂಗ್ರೆಸ್ ಮುಖಂಡರಾದ ಊತಗೆರೆ ಪ್ರಸನ್ನ, ಕುದರಗುಂಡಿ ನಾಗೇಶ್, ಪುರಸಭಾ ಸದಸ್ಯ ಸಚಿನ್ ಮತ್ತಿತರರು ಇದ್ದರು.