ಸಾರಾಂಶ
ರಾಜಕಾರಣವನ್ನು ಸರಿದಾರಿಗೆ ತರಲು, ತಪ್ಪು ಮಾಡುವವರ ಕಿವಿ ಹಿಂಡುವ ಕೆಲಸವನ್ನು ಕಾವ್ಯಗಳು ಮಾಡಬೇಕಾಗಿದೆ
ಕನ್ನಡಪ್ರಭ ವಾರ್ತೆ ಹಾಸನಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕಾರಣ ಸೇರಿದಂತೆ ಹಲವು ಕಾರಣಗಳಿಂದ ವ್ಯವಸ್ಥೆ ದಾರಿ ತಪ್ಪಿದ್ದು ಅವುಗಳನ್ನು ಸರಿದಾರಿಗೆ ತರುವ ಕೆಲಸವನ್ನು ಕಾವ್ಯಗಳು ಮಾಡಬೇಕು ಎಂದು ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಪ್ರತಿ ಜಿಲ್ಲೆ ಹೊರನಾಡಿನ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ತಿಂಗಳ ಮೂರನೇ ಭಾನುವಾರ ನಡೆದ ಕವಿಗೋಷ್ಠಿ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕಾರಣ ದಾರಿ ತಪ್ಪಿದ್ದು ಅವುಗಳನ್ನು ಸರಿದಾರಿಗೆ ಕರೆದೊಯ್ಯುವ ಕೆಲಸವನ್ನು ಕಾವ್ಯಗಳು ಮಾಡಬೇಕು ಎಂದು ಸಮಾಜದಲ್ಲಿ ನಿತ್ಯ ನಡೆಯುವ ಅಧ್ವಾನ, ಅನಾಚಾರ, ಭ್ರಷ್ಟಾಚಾರಗಳನ್ನು ಸೂಕ್ಷ್ಮವಾಗಿ ಕುಟುಕುವ ಕೆಲಸವನ್ನು ಕಾವ್ಯ ಮಾಡುತ್ತದೆ. ತಪ್ಪುಗಳನ್ನು ಮೊನಚಾದ ಬರಹಗಳ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸವನ್ನು ಕವಿ ನಿರಂತರವಾಗಿ ಮಾಡುತ್ತಾನೆ. ಕವಿಯು ಅಂತರಂಗದ ಭಾವನೆಯನ್ನು ಬರಹ ರೂಪದಲ್ಲಿ ಪ್ರಕಟಿಸಿದಾಗ ಜೈಲು ಶಿಕ್ಷೆ ಅನುಭವಿಸಿದ ನಿದರ್ಶನಗಳು ಸಾಕಷ್ಟಿವೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕಾದ ಲೇಖಕ ಗೆಬ್ರಿಯಲ್ ಗಾರ್ಸಿಯಾ ಕೂಡ ವಿಶ್ವದಲ್ಲಿ ರಾಜಕಾರಣ ಮಾತ್ರವಲ್ಲದೆ ಧರ್ಮವೂ ಕಲುಷಿತಗೊಂಡಿದೆ ಎಂದು ಹೇಳಿದ್ದಾರೆ. ರಾಜಕಾರಣವನ್ನು ಸರಿದಾರಿಗೆ ತರಲು, ತಪ್ಪು ಮಾಡುವವರ ಕಿವಿ ಹಿಂಡಲು ಕಾವ್ಯ ನೆರವಾಗುತ್ತದೆ ಎಂದರು.ವಾಮನ ರೂಪಿ ಕಾವ್ಯಕ್ಕೆ ತ್ರಿವಿಕ್ರಮ ಶಕ್ತಿ ಇದೆ. ಕಾವ್ಯ ಯಾವಾಗ ಪ್ರಾರಂಭವಾಯಿತೋ ಆಗಿನಿಂದಲೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಸರ್ಕಾರಿ ಪ್ರಾಯೋಜಿತ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಪ್ರತಿಭಾನ್ವಿತ ಕವಿಗಳಿಗೆ ವೇದಿಕೆ ಸಿಗುವುದಿಲ್ಲ. ಅದರಿಂದ ಮನನೊಂದ ಸಮಾನ ಮನಸ್ಕರೆಲ್ಲ ಒಟ್ಟಾಗಿ ಕಾವ್ಯ ಸಂಸ್ಕೃತಿ ಯಾನ ಸಂಘಟನೆ ರಚಿಸಿದ್ದು ಪ್ರತಿ ಜಿಲ್ಲೆಗೂ ಭೇಟಿ ನೀಡುತ್ತಿದ್ದೇವೆ. ಕವಿಗೋಷ್ಠಿ ಆಯೋಜನೆ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಾವ್ಯ ಸಾಮಾನ್ಯ ಜನರ ಸ್ವತ್ತು:ರಂಗಕರ್ಮಿ, ಕಾವ್ಯ ಸಂಸ್ಕೃತಿ ಯಾನ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಸಮಾಜದಲ್ಲಿ ಸುಧಾರಿಸುವುದು ಇದ್ರೆ ಅದು ಈ ಕಾವ್ಯ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಬದುಕೆ ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಚೈತನ್ಯ ತುಂಬಿರುವುದು ಈ ಕವಿತೆ. ಹೊಸ ಚೈತನ್ಯ. ಕಾವ್ಯ ಎಂಬುದು ಒಂದು ಸಮಾಜಕ್ಕೆ ಸರಳ ಬದುಕು ನೀಡಿತು. ಹೃಯದಕ್ಕೆ ತಟ್ಟಿತು. ಕಾವ್ಯ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ. ಸಾಮಾನ್ಯ ಜನರ ಸ್ವತ್ತು. ಕಾವ್ಯ ಬರೆಯುವಾಗ ಯಾವ ಶ್ರೀಮಂತಿಕೆ ಕಾಣುವುದಿಲ್ಲ. ಇಂದು ಇಡೀ ದೇಶದಲ್ಲಿ ಏನು ಕಾಡುತ್ತಿದೆ ಎಂಬ ಬಗ್ಗೆ ಯೋಚನೆ ಮಾಡಬೇಕು ಎಂದರು.
ನಾಟಕಕಾರ ಡಾ. ಚಂದ್ರು ಕಾಳೇನಹಳ್ಳಿ ಮಾತನಾಡಿ, ಸಮಾಜದಲ್ಲಿ ನಿತ್ಯ ನಡೆಯುವ ಅಧ್ವಾನ, ಅನಾಚಾರ, ಭ್ರಷ್ಟಾಚಾರಗಳನ್ನು ಸೂಕ್ಷ್ಮವಾಗಿ ಕುಟುಕುವ ಕೆಲಸವನ್ನು ಕಾವ್ಯ ಮಾಡುತ್ತದೆ. ಪಂಪನಿಂದ ಕುವೆಂಪುವರೆಗೆ ಹಲವು ಕವಿಗಳನ್ನು ಕನ್ನಡ ನಾಡು ಕಂಡಿದೆ. ಆದರೆ ಯಾರೂ ಕೂಡ ರಾಜ ಪ್ರಭುತ್ವಕ್ಕೆ ಗುಲಾಮರಾಗಲಿಲ್ಲ. ಕವಿಗಳು ನೊಂದವರ ದು:ಖ ದುಮ್ಮಾನಗಳನ್ನು ಬರವಣಿಗೆ ಮೂಲಕ ಸಮಾಜಕ್ಕೆ ಹೇಳಿದರು. ರಾಜಮನೆತನದ ಆಶ್ರಯ ಪಡೆದರೂ ಸಹ ಗುಲಾಮರಾಗಿರಲಿಲ್ಲ ಎಂದರು.ಕನ್ನಡ ಸಾಹಿತ್ಯ ಹಲವು ಮಜಲುಗಳನ್ನು ಕಂಡಿದೆ. ಕವಿಯಾಗಲು ಕೇವಲ ಕನಸು ಕಂಡರೆ ಸಾಲುವುದಿಲ್ಲ. ಆತ ಕವಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಾ. ಚಂದ್ರು ಕಾಳೇನಹಳ್ಳಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಹಿರಿಯ ಸಾಹಿತಿ ಭಾನುಮುಸ್ತಾಕ್, ಪ್ರೇಮಕಲಾ, ಚಂದ್ರಶೇಖರ್, ರಂಗಕರ್ಮಿ ಉಲಿವಾಳ್ ಮೋಹನ್, ರಂಗ ಕಲಾವಿದ ಗೋವಿಂದೇಗೌಡ, ಕಸಪಾ ಜಿಲ್ಲಾಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಸಾಹಿತಿ ಹಾಡ್ಳಳ್ಳಿ ನಾಗರಾಜು, ಗುಂಡಣ್ಣ, ಸಂಚಾಲಕ ಚಲಂ ಇತರರು ಉಪಸ್ಥಿತರಿದ್ದರು.