ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯದಲ್ಲಿ ಫೆ.24ರ ಶನಿವಾರ ಮಾಘ ಶುದ್ದ ಪೌರ್ಣಮೆಯ ಅಂಗವಾಗಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಒಂದು ಲಕ್ಷ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲಾ ರೀತಿಯ ಮೂಲ ಸೌಕರ್ಯಗಳ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ದೇವಾಲಯದ ಇಒ ಸಿ.ಜಿ.ಕೃಷ್ಣ ತಿಳಿಸಿದ್ದಾರೆ. ಫೆ.23ರ ಶುಕ್ರವಾರ ಮಧ್ಯ ರಾತ್ರಿಯಿಂದಲೇ ಭಕ್ತರು ಆಗಮಿಸಿ ಇಲ್ಲಿನ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ನಿಮಿಷಾಂಬ ದೇವಿ ದರ್ಶನ ಪಡೆಯಲಿದ್ದಾರೆ. ನಂತರ ಕಾವೇರಿ ನದಿಯಲ್ಲಿ ದೀಪಾರತಿ ಬೆಳಗಿ, ದೇವಿ ದರ್ಶನ ಪಡೆಯಲಿದ್ದಾರೆ. ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ, ಬಗೆ ಬಗೆಯ ಹೂವಿನಿಂದ ಅಲಂಕಾರಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೇಯಿಂದಲೇ ದೇವಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ, ಗಣ ಹೋಮ, ನಕ್ಷತ್ರ ಹೋಮ, ಪೂರ್ಣಹೋಮ ಮಾಡಿ ಹಾಲಿನ ಅಭಿಷೇಕ ಸೇರಿದಂತೆ ಇತ್ಯಾದಿ ಹೋಮ ಹವನದ ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು. ನಿಮಿಷಾಂಬ ದೇವಿ ಸೇರಿದಂತೆ ಶ್ರೀ ಮೌಕ್ತಿಕೇಶ್ವರಸ್ವಾಮಿ, ಶ್ರೀಲಕ್ಷ್ಮಿನಾರಾಯಣ, ಶ್ರೀಮೂಲ ಗಣಪತಿ, ಸೂರ್ಯದೇವ ಹಾಗೂ ಆಂಜನೇಯ ದೇವತೆಗಳಿಗೆ ಮಹಾ ಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 80 ಸಾವಿರದಿಂದ 1 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದ್ದಾರೆ.
70 ಸಾವಿರ ಲಾಡು:ಪ್ರತಿ ವರ್ಷದಂತೆ ಭಕ್ತರಿಗಾಗಿ ವಿಶೇಷವಾಗಿ ಲಾಡುಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಲೋಕ ಕಲ್ಯಾಣಾರ್ಥ ದೇವಾಲಯದಲ್ಲಿ ಸತ್ಯನಾರಾಯಣ ಪೂಜಾ ಕೈಂಕರ್ಯಗಳು ನೆರವೇರಿಸಿ ಭಕ್ತರಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆಯಿಂದ ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರಿಗೆ ಬೆಂಗಳೂರು, ಮಂಡ್ಯ ಮೈಸೂರಿನಿಂದ ವಿಶೇಷ ಬಸ್ ವ್ಯವಸ್ತೆ ಕೂಡ ಮಾಡಲಾಗಿದೆ.ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಲವು ಸ್ಥಳಗಗಳಲ್ಲಿ ಭಕ್ತರಿಗೆ ಯಾವುದೇ ಅಡೆ ತಡೆಯಾಗದಂತೆ ಬ್ಯಾರಿಕೇಡ್ ನಿರ್ಮಿಸಿ ಸುರಕ್ಷತೆಯಾಗಿ ಸಾಲಿನಲ್ಲಿ ಭಕ್ತರನ್ನು ದೇವಾಲಯಕ್ಕೆ ಬಿಡಲಾಗುತ್ತದೆ. ಬೆಂಗಳೂರಿನ ದಾನಿ ಶ್ರೀ ಸಾಯಿ ಅನ್ನ ಪೂರ್ಣೇಶ್ವರಿ ಟ್ರಸ್ಟ್ ವತಿಯಿಂದ ದೇವಾಲಯಕ್ಕೆ ಬರುವ ಒಂದು ಭಕ್ತರಿಗೆ ಎರಡು ದಿನಗಳು ಸಹ ಪ್ರಸಾದ ವಿನಿಯೋಗ ಮಾಡಲಾಗಿದೆ. ಪಾರ್ಕಿಂಗ್ವ್ಯವಸ್ಥೆ: ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಮೂರು ಕಡೆಗಳಲ್ಲಿ ಶ್ರೀರಂಗಪಟ್ಟಣದ ಗಂಜಾಂ ರಸ್ತೆಗೆ ಬರುವ ಶ್ರೀನಿಮಿಷಾಂಬ ದೇವಾಲಯದ ರಸ್ತೆ, ಕರೀಘಟ್ಟದ ಮಾರ್ಗದ ರಸ್ತೆ, ಗುಂಬಸ್ ಮಾರ್ಗವಾಗಿ ಬರುವ ವಾಹನಗಳಿಗೆ ದೇವಾಲಯದ 100, 200 ಮೀಟರ್ ಅಂತರದಲ್ಲಿ ನೆಲ ಸಮತಟ್ಟು ಮಾಡಿ ಬ್ಯಾರಿಕೇಡ್ಗಳ ಅಳವಡಿಸಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ತೆ ಕಲ್ಪಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಫೆ.23ರ ಶುಕ್ರವಾರದಂದೇ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ದೇವಾಲಯದ ಮುಂಭಾಗದ ಆವರಣದಲ್ಲಿ ವೇದಿಕೆ ನಿರ್ಮಿಸಿ, ದೇವರ ಭಕ್ತಿ ಗೀತೆ, ಜಾನಪದ ಗೀತೆ, ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತರ ಮನರಂಜನೆಗೆ 23ರ ರಾತ್ರಿಯಿಂದ 24ರಾತ್ರಿವರೆಗೂ ವಿವಿಧ ಕಲಾ ತಂಡಗಳ ಮೂಲಕ ನಡೆಸಿಕೊಡಲಾಗುವುದು.ಕಾವೇರಿ ನದಿಯಲ್ಲಿ ಪುಣ್ಯಸ್ನಾನಕ್ಕೆ ಬರುವ ಭಕ್ತರಿಗೆ ಬಟ್ಟೆ ಬದಲಾಯಿಸಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆ, ರಾತ್ರಿ ವೇಳೆ ನದಿ ತೀರದಲ್ಲಿ ಸ್ನಾನ ಮಾಡಲು ಭಕ್ತರಿಗೆ ವಿದ್ಯುತ್ ದೀಪಗಳ ವ್ಯವಸ್ಥೆ, ಕುಡಿಯಲು ಶುದ್ದ ನೀರು, ಮೂರು ಭಾಗಗಳಲ್ಲಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.