ಸಾರಾಂಶ
ಸೆ.7ರಂದು ರಾತ್ರಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದ್ದು, ಅಪರೂಪದ ಈ ಕ್ಷಣವನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಗುರುಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸೆ.7ರಂದು ರಾತ್ರಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದ್ದು, ಅಪರೂಪದ ಈ ಕ್ಷಣವನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಗುರುಪ್ರಸಾದ್ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಂದ್ರಗ್ರಹಣವು ಭಾನುವಾರ ರಾತ್ರಿ 9.57 ರಿಂದ ಬೆಳಗಿನ ಜಾವ 2.25 ರವರೆಗೂ ಸಂಭವಿಸಲಿದ್ದು ಅಪರೂಪದ ಈ ಕ್ಷಣವನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಚಂದ್ರಗ್ರಹಣ ಕಣ್ತುಂಬಿಕೊಳ್ಳಲು ಜವಾಹರಲಾಲ್ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಗ್ರಹಣದಿಂದ ಜನ, ಪ್ರಾಣಿಗಳು, ಸಸ್ಯಗಳು ಅಥವಾ ಆಹಾರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸುವುದು ಸಂಪೂರ್ಣ ಸುರಕ್ಷಿತ. ಆದರೆ ದೂರದರ್ಶಕ ಅಥವಾ ದುರ್ಬೀನನ್ನು ಉಪಯೋಗಿಸಿದರೆ ವೀಕ್ಷಣೆಯ ಅನುಭವ ಇನ್ನಷ್ಟು ಸುಂದರವಾಗಿರುತ್ತದೆ. ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದರಿಂದಲೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಗ್ರಹಣವೆಂಬುದು ನೆರಳಿನ ಆಟ ಮಾತ್ರ. ಭಾರತದಲ್ಲಿ ಇದನ್ನು ಆರ್ಯಭಟನ ಕಾಲದಲ್ಲೇ ತಿಳಿದುಕೊಳ್ಳಲಾಗಿತ್ತು ಎಂದು ವಿವರಿಸಿದರು.