ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ ಆರಂಭವಾದ ದಿನದಿಂದಲೇ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಫುಟ್ಬಾಲ್, ಬ್ಯಾಡ್ಮಿಂಟನ್, ಕರಾಟೆ, ಕ್ರಿಕೆಟ್, ಚೆಸ್, ಖೋ ಖೋ, ಯೋಗಾಸನ, ಏರೋಬಿಕ್ಸ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಒಂದೆರಡು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಸ್ಪರ್ಧಾತ್ಮಕ ವಾತಾವರಣ ಕಲ್ಪಿಸಲಾಗುತ್ತಿದೆ. ಇದರ ಫಲವಾಗಿ ಅನೇಕ ಕ್ರೀಡಾಪಟುಗಳು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಕ್ಕಳ ಹಾಗೂ ಯುವಜನರ ಆಸಕ್ತಿ ಬೆಳೆಸಿ, ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬ್ಯಾಡ್ಮಿಂಟನ್ ಮತ್ತು ಫುಟ್ಬಾಲ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ ವ್ಯವಸ್ಥಾಪಕರಾದ ವೇಣುಗೋಪಾಲ್ ತಿಳಿಸಿದರು.

ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಸಂಗಮೇಶ್ವರ ಬಡಾವಣೆ ಕೆರೆ ಸಮೀಪ ಇರುವ ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿಯ ವತಿಯಿಂದ ಭಾನುವಾರದಂದು ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್ ಹಾಗೂ ಫುಟ್ಬಾಲ್ ಟೂರ್ನಮೆಂಟ್ ಕ್ರೀಡೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ ಆರಂಭವಾದ ದಿನದಿಂದಲೇ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಫುಟ್ಬಾಲ್, ಬ್ಯಾಡ್ಮಿಂಟನ್, ಕರಾಟೆ, ಕ್ರಿಕೆಟ್, ಚೆಸ್, ಖೋ ಖೋ, ಯೋಗಾಸನ, ಏರೋಬಿಕ್ಸ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಒಂದೆರಡು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಸ್ಪರ್ಧಾತ್ಮಕ ವಾತಾವರಣ ಕಲ್ಪಿಸಲಾಗುತ್ತಿದೆ. ಇದರ ಫಲವಾಗಿ ಅನೇಕ ಕ್ರೀಡಾಪಟುಗಳು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು. ಅಕಾಡೆಮಿಯಲ್ಲಿ ರಾಷ್ಟ್ರೀಯ ಮಟ್ಟದ ಅನುಭವ ಹೊಂದಿದ ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ತರಬೇತಿಯ ಮೂಲಕ ಕ್ರೀಡಾಪಟುಗಳ ಪ್ರತಿಭೆಯನ್ನು ಹೊರತರಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ಹಲವಾರು ಕ್ರೀಡಾಪಟುಗಳು ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವುದು ಅಕಾಡೆಮಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.ಸಂಕ್ರಾಂತಿ ಪ್ರಯುಕ್ತ ಆಯೋಜಿಸಿರುವ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮೂರು ವಿಭಾಗಗಳನ್ನು ರೂಪಿಸಲಾಗಿದೆ. ಓಪನ್ ಕ್ಯಾಟಗರಿ, ೪೦ ವರ್ಷ ಮೇಲ್ಪಟ್ಟವರ ವಿಭಾಗ ಹಾಗೂ ಸಿಂಗಲ್ಸ್ ವಿಭಾಗಗಳಲ್ಲಿ ಪಂದ್ಯಾವಳಿಗಳು ನಡೆದವು. ಬೆಳಗ್ಗಿನಿಂದಲೇ ಪಂದ್ಯಗಳು ಆರಂಭಗೊಂಡು ಸಂಜೆಯವರೆಗೆ ಉತ್ಸಾಹಭರಿತವಾಗಿ ನಡೆಯಿತು. ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಆಕರ್ಷಕ ಟ್ರೋಫಿಗಳು ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಇದೇ ವೇಳೆ ಬ್ಯಾಡ್ಮಿಂಟನ್ ಜೊತೆಗೆ ಫುಟ್ಬಾಲ್ ಪಂದ್ಯಾವಳಿಯನ್ನೂ ಅಕಾಡೆಮಿಯ ಆವರಣದಲ್ಲಿ ಆಯೋಜಿಸಲಾಗಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆದಿತು. ಚಿಕ್ಕಮಗಳೂರು, ಅರಸೀಕೆರೆ ಸೇರಿದಂತೆ ವಿವಿಧ ತಾಲೂಕುಗಳಿಂದ ನೂರಾರು ಕ್ರೀಡಾಪಟುಗಳು ಆಗಮಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು ಟೂರ್ನಮೆಂಟ್‌ಗೆ ವಿಶೇಷ ಕಳೆ ನೀಡಿತು. ಕ್ರೀಡೆಯಲ್ಲಿ ಆಸಕ್ತಿ ಇರುವ ಪೋಷಕರು ತಮ್ಮ ಮಕ್ಕಳನ್ನು ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿಗೆ ಸೇರಿಸಿದರೆ ಉತ್ತಮ ತರಬೇತಿ ನೀಡುವ ಜೊತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ತಯಾರಾಗುವ ಅವಕಾಶ ಕಲ್ಪಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದರು.ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ೪೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಹರೀಶ್ ಹಾಗೂ ಉಮೇಶ್ ಅವರ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ರಾಜು ಮತ್ತು ಮಂಜೇಗೌಡ ದ್ವಿತೀಯ ಸ್ಥಾನ ಪಡೆದರು. ಓಪನ್ ಕ್ಯಾಟಗರಿಯಲ್ಲಿ ಸಚಿನ್ ಮತ್ತು ಶ್ರೇಯಸ್ ಪ್ರಥಮ ಸ್ಥಾನ, ರಾಜು ಮತ್ತು ಆಯುಷ್ ದ್ವಿತೀಯ ಸ್ಥಾನ ಗಳಿಸಿದರು. ಸಿಂಗಲ್ಸ್ ವಿಭಾಗದಲ್ಲಿ ಆಯುಷ್ ಪ್ರಥಮ ಸ್ಥಾನ ಹಾಗೂ ಪುನೀತ್ ದ್ವಿತೀಯ ಸ್ಥಾನ ಪಡೆದರು. ಇವರಿಗೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಿದರು.ಬಹುಮಾನ ವಿತರಣೆ ಸಮಾರಂಭದಲ್ಲಿ ಹಾಸನ ಜಿಲ್ಲಾ ಬ್ಯಾಡ್ಮಿಂಟನ್ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ಮಹೇಂದ್ರ, ಹಾಸನ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೀವ್ ಮಿಸಲಾ, ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿಯ ಹಾಲುಗಾರರಾದ ವೇಣುಗೋಪಾಲ್, ಸುರೇಶ್ ಹಾಗೂ ಹೇಮಂತ್ ಇತರರು ಉಪಸ್ಥಿತರಿದ್ದರು.