ಕಾಯಕ, ದಾಸೋಹ ಅರ್ಥೈಸಿಕೊಂಡು ಪರಿಪೂರ್ಣದೆಡೆಗೆ

| Published : May 12 2024, 01:21 AM IST

ಕಾಯಕ, ದಾಸೋಹ ಅರ್ಥೈಸಿಕೊಂಡು ಪರಿಪೂರ್ಣದೆಡೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಗಿರಿ ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಿಂದ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ೮೯೧ನೇ ಜಯಂತಿ ಕಾರ್ಯಕ್ರಮದಲ್ಲಿ ನಾಡೋಜ ಅನ್ನದಾನೀಶ್ವರ ಶಿವಯೋಗಿಗಳಿಗೆ ಸುವರ್ಣಗಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನಕಗಿರಿ: ಬಸವೇಶ್ವರ ತತ್ವ ಕಾಯಕ ಮತ್ತು ದಾಸೋಹದ ಮಹತ್ವ ಅರ್ಥೈಸಿಕೊಂಡರೆ ಮನುಷ್ಯ ಪರಿಪೂರ್ಣದೆಡೆಗೆ ಸಾಗುತ್ತಾನೆ ಎಂದು ನಾಡೋಜ ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಿಂದ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ೮೯೧ನೇ ಜಯಂತಿ ಹಾಗೂ ಸುವರ್ಣಗಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಸಮಾಜದಲ್ಲಿ ಕಾಯಕ, ದಾಸೋಹದ ಪರಿಕಲ್ಪನೆ ಕಣ್ಮರೆಯಾಗಿದ್ದು, ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರ ಕೊಡುಗೆ ಏನು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇಲ್ಲಿ ಎಲ್ಲರೂ ಒಂದೆ. ಅಹಂಕಾರ ಮನುಷ್ಯತ್ವವನ್ನು ಕೊಲ್ಲುತ್ತದೆ. ಮನುಷ್ಯ ಪೂರ್ಣತ್ವ ಹೊಂದಬೇಕಾದರೆ ದಾನ ಮಾಡಿ ಕೃತಾರ್ಥನಾಗಬೇಕು ಎಂದರು.

ಸುವರ್ಣಗಿರಿ ಸಂಸ್ಥಾನ ಮಠ ನೂರಾರು ವರ್ಷಗಳ ಇತಿಹಾಸವಿದೆ. ಹಲವು ಶಾಖಾ ಮಠಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದ್ದು, ಆರೋಗ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ಶ್ರೀಮಠ ಅಣಿಯಾಗಿದೆ. ಹೀಗೆ ಸುವರ್ಣಗಿರಿ ಮಠದ ಕೀರ್ತಿ ಸುವರ್ಣದಂತೆ ಉತ್ತರೋತ್ತರವಾಗಿ ಬೆಳೆಯಲಿ. ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜದ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

ಇದಕ್ಕೂ ಮೊದಲು ಹೈಕೋರ್ಟ್ ವಕೀಲ ಎಂ.ವಿ. ಹಿರೇಮಠ, ತಾಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಮಾತನಾಡಿದರು. ಶ್ರೀಮಠದಿಂದ ಅನ್ನದಾನೀಶ್ವರ ಶಿವಯೋಗಿಗಳಿಗೆ ಸುವರ್ಣಗಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೊಸಪೇಟೆಯ ಅಂಜಲಿ ಭರತನಾಟ್ಯ ಕಲಾ ಕೇಂದ್ರದ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಮಂಜುನಾಥ ತೇರದಾಳ ಅವರ ಸಂಗೀತಕ್ಕೆ ಸಿದ್ದೇಶಕುಮಾರ ತಬಲಾ ಸಾಥ್ ನೀಡಿದರು. ಸಿದ್ದಲಿಂಗಶಾಸ್ತಿ ಅವರು ಮಂಗಲ ನುಡಿಗಳನ್ನಾಡಿದರು.

ಈ ವೇಳೆ ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಯದ್ದಲದೊಡ್ಡಿಯ ಮಹಾಲಿಂಗಶ್ರೀ, ಕಡಕೊಳದ ರುದ್ರಮುನಿ ಶಿವಾಚಾರ್ಯರು, ನಗರಗಡ್ಡಿಯ ಶಾಂತಲಿಂಗಸ್ವಾಮಿಗಳು, ಘಟಪ್ರಭಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ನರಗುಂದ ಶಿವಕುಮಾರ ಮಹಾಸ್ವಾಮಿಗಳು, ಬಳಗಾನೂರಿನ ಶಿವಶಾಂತ ಶರಣರು, ಶಿವಾನಂದ ದೇವರು, ಗಂಗಾಧರ ದೇವರು, ಅಮರೇಶ್ವರ ದೇವರು, ನೀಲಕಂಠಯ್ಯಶ್ರೀ ಸೇರಿದಂತೆ ಇದ್ದರು.

ನೆರದಿದ್ದವರನ್ನು ರಂಜಿಸಿದ ಮಿಮಿಕ್ರಿ ಗೋಪಿ: ಬೆಂಗಳೂರಿನಿಂದ ಆಗಮಿಸಿದ್ದ ಕಲಾವಿದ ಮಿಮಿಕ್ರಿ ಗೋಪಿ ಅವರಿಂದ ಪ್ರಧಾನಿ ಮೋದಿ, ರಾಜ್ಯದ ಹಾಲಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಕಂಡ ಖ್ಯಾತ ನಟರು, ಹಾಸ್ಯ ಕಲಾವಿದರ ಧ್ವನಿಯಲ್ಲಿಯೇ ಮಾತನಾಡಿ ನೆರದಿದ್ದ ಜನರನ್ನು ರಂಜಿಸಿದರು.