ಏಕಮುಖ ಸಂಚಾರ ವ್ಯವಸ್ಥೆಯಿಂದ ತಮ್ಮ ವ್ಯಾಪಾರ, ವಹಿವಾಟು ಕುಂಠಿತಗೊಂಡಿದೆ ಎಂದು ಆರೋಪಿಸಿ ರಾಣಿಬೆನ್ನೂರು ನಗರದ ಎಡಿಬಿ ರಸ್ತೆಯ ವರ್ತಕರು ಬುಧವಾರ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ರಾಣಿಬೆನ್ನೂರು: ಏಕಮುಖ ಸಂಚಾರ ವ್ಯವಸ್ಥೆಯಿಂದ ತಮ್ಮ ವ್ಯಾಪಾರ, ವಹಿವಾಟು ಕುಂಠಿತಗೊಂಡಿದೆ ಎಂದು ಆರೋಪಿಸಿ ನಗರದ ಎಡಿಬಿ ರಸ್ತೆಯ ವರ್ತಕರು ಬುಧವಾರ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಎಡಿಬಿ (ಅಗ್ರಿಕಲ್ಚರ್ ಡೆವ್ಲೆಪ್ಮೆಂಟ್ ಬ್ಯಾಂಕ್) ರಸ್ತೆಯು ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಇಲ್ಲಿ ವಿವಿಧ ಬಗೆಯ ಅಂಗಡಿಗಳಿವೆ. ನೂರಾರು ಕುಟುಂಬಗಳು ಜೀವನೋಪಾಯಕ್ಕೆ ಇದನ್ನೆ ಅವಲಂಬಿಸಿವೆ. ಇದೀಗ ಈ ರಸ್ತೆಯನ್ನು ಏಕಮುಖ ಸಂಚಾರವಾಗಿ ಮಾರ್ಪಾಟು ಮಾಡಲಾಗಿದೆ. ಇದರಿಂದ ಇಲ್ಲಿನ ಎಲ್ಲ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಸಾಕಷ್ಟು ಇಳಿಮುಖವಾಗಿದೆ. ಹೀಗಾಗಿ ನಾವೆಲ್ಲ ಅಂಗಡಿ ಬಾಡಿಗೆ, ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಸೇರಿದಂತೆ ದೈನಂದಿನ ವೆಚ್ಚಗಳನ್ನು ಭರಿಸುವುದು ತುಂಬಾ ಪ್ರಯಾಸಕರವಾಗಿದೆ. ಅನೇಕ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದ್ದು, ತಮ್ಮ ವ್ಯವಹಾರ ಮುನ್ನಡೆಸುವುದು ಸವಾಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಲವಾರು ವರ್ತಕರು ತಮ್ಮ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚುವ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಹಾಗಂತ ನಮ್ಮ ಉದ್ದೇಶ ಸಂಚಾರ ವ್ಯವಸ್ಥೆ ವಿರೋಧಿಸುವುದಿಲ್ಲ. ಸಾರ್ವಜನಿಕರ ಸುರಕ್ಷತೆ ನಮಗೂ ಮುಖ್ಯ. ಆದರೆ ಸಂಚಾರ ವ್ಯವಸ್ಥೆಯಿಂದ ವರ್ತಕರಿಗೆ ಆಗುತ್ತಿರುವ ತೊಂದರೆ ಪರಿಗಣಿಸಬೇಕು. ಜಿಲ್ಲಾಧಿಕಾರಿ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ಸಾರ್ವಜನಿಕರಿಗೂ ಹಾಗೂ ವರ್ತಕರಿಗೂ ಸರಿದೂಗುವಂತೆ ಏಕಮುಖ ಸಂಚಾರಿ ವ್ಯವಸ್ಥೆ ರದ್ದುಗೊಳಿಸಿ, ದ್ವಿಮುಖ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಹನುಮಂತಪ್ಪ ಚಳಗೇರಿ, ಜಗದೀಶ ಪ್ರಜಾಪತ್, ರಾಘವೇಂದ್ರ ರೇವಣಕರ್, ಕೈಲಾಸ್ ಭಾಟಿ, ಜಿಕ್ರಿಯಾ ಕುಲಕರ್ಣಿ, ಬಸವರಾಜ ಕರೇಭರಮಣ್ಣನವರ, ಬಸವರಾಜ ಕೆ., ಜಿತೇಂದ್ರ ರಾಜಪುರೋಹಿತ, ಮಂಜುನಾಥ ಕಾಟೋಕರ್, ಪರಮೇಶಪ್ಪ ಹಾವನೂರ ಪಾಲ್ಗೊಂಡಿದ್ದರು.