ಕನ್ನಡಪ್ರಭ ವಾರ್ತೆ ಅರಸೀಕೆರೆ
ಶತಮಾನಗಳ ಇತಿಹಾಸ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿರುವ ತಾಲೂಕಿನ ಪ್ರಸಿದ್ಧ ಮಾಲೆಕಲ್ಲು ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸಂಪ್ರದಾಯಬದ್ಧವಾಗಿ ಚಾಲನೆ ದೊರೆಯಿತು. ಜಾತ್ರೆಯ ಪ್ರಮುಖ ಆಚರಣೆಯ ಭಾಗವಾಗಿ ದೇವರ ಒಡವೆ ಹಾಗೂ ಪವಿತ್ರ ವಸ್ತ್ರಗಳನ್ನು ತಾಲೂಕು ಆಡಳಿತದ ವಶದಿಂದ ವಿಶೇಷ ಪೂಜೆಯೊಂದಿಗೆ ದೇವಸ್ಥಾನಕ್ಕೆ ಕೊಂಡೊಯ್ಯುವ ಸಂಪ್ರದಾಯ ಭಕ್ತಿಭಾವದಿಂದ ನೆರವೇರಿತು.ಜಾತ್ರೆಯ ಅಂಗವಾಗಿ ಮಾಲೆಕಲ್ಲು ತಿರುಪತಿ ಗ್ರಾಮದ ಗ್ರಾಮಸ್ಥರು ಹಾಗೂ ದೇವಸ್ಥಾನದ ಅರ್ಚಕರ ಬಳಗ ಎತ್ತಿನಗಾಡಿಯಲ್ಲಿ ತಾಲೂಕು ಕಚೇರಿಗೆ ಆಗಮಿಸಿ, ಸಂಪ್ರದಾಯದಂತೆ ದೇವರ ಒಡವೆ ಮತ್ತು ವಸ್ತ್ರಗಳನ್ನು ಸ್ವೀಕರಿಸಿದರು. ಬಳಿಕ ತಾಲೂಕು ಕಚೇರಿ ಆವರಣದಲ್ಲಿ ವಿಶೇಷ ಪೂಜೆ ನೆರವೇರಿಸಿ, ಜಾತ್ರಾ ಮಹೋತ್ಸವವು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನಡೆಯಲೆಂದು ಪ್ರಾರ್ಥಿಸಲಾಯಿತು.ಗ್ರೇಡ್-2 ತಹಸೀಲ್ದಾರ್ ಪಾಲಾಕ್ಷ ಅವರು ದೇವರ ಒಡವೆ ಹಾಗೂ ವಸ್ತ್ರಗಳಿಗೆ ಪೂಜೆ ಸಲ್ಲಿಸಿ, ಧಾರ್ಮಿಕ ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಇಂತಹ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಪೂಜೆಯ ನಂತರ ಪೊಲೀಸ್ ಭದ್ರತೆಯೊಂದಿಗೆ ಎತ್ತಿನಗಾಡಿಯಲ್ಲಿ ದೇವರ ಒಡವೆ ಮತ್ತು ವಸ್ತ್ರಗಳನ್ನು ಮೆರವಣಿಗೆ ಮೂಲಕ ರಸ್ತೆ ಮಾರ್ಗವಾಗಿ ಮಾಲೆಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಮಾರ್ಗದುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಮೆರವಣಿಗೆಗೆ ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಶಿವಶಂಕರ್, ಸಿಬ್ಬಂದಿ ಚೇತನ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್, ಲೋಕಣ್ಣ, ಬೊಮ್ಮೇನಹಳ್ಳಿ ಪರಮಶಿವಯ್ಯ, ಪ್ರಧಾನ ಅರ್ಚಕರಾದ ರಾಮ್ ಪ್ರಸಾದ್ ವರದರಾಜು, ಅರ್ಚಕರಾದ ಗಿರಿ ಕೇಸರಿ, ಶ್ರೀನಿವಾಸ್ ಹಾಗೂ ಗ್ರಾಮದ ಮುಖಂಡರು, ಭಕ್ತಾದಿಗಳು ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.