ಚಂದ್ರಶೇಖರ ಶಾರದಾಳ

ಕನ್ನಡಪ್ರಭ ವಾರ್ತೆ ಕಲಾದಗಿ

ಕೊಬ್ರಿ ಕ್ರಾಸ್ ರಸ್ತೆಯಿಂದ ಹಿರೇಶೆಲ್ಲಿಕೇರಿ ಕ್ರಾಸ್ ವರೆಗೆ ರಸ್ತೆ ಸಂಚಾರ ಸಂಪೂರ್ಣ ಹದಗೆಟ್ಟಿದ್ದು ಪ್ರಯಾಣಿಕರು ನಿತ್ಯ ಪ್ರಯಾಣಿಸಲು ಸಂದರ್ಭದಲ್ಲಿ ಹರಸಾಹಸ ಪಡುವಂತಾಗಿದೆ. ವಾಹನ ಸವಾರರು ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹೌದು, ಕಲಾದಗಿ ಗ್ರಾಮಸ್ಥರಿಗೆ ಬಾಗಲಕೋಟೆ ನಗರಕ್ಕೆ ತಲುಪಲು ಸನಿಹ ಸಂಪರ್ಕ ರಸ್ತೆಯ ದುಸ್ಥಿತಿ ಇದು. ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ರೈತರು ಜಮೀನುಗಳಿಗೆ ಹಿರೇಶೆಲ್ಲಿಕೇರಿ, ಚಿಕ್ಕಸಂಶಿ, ದೇವನಾಳ ಗ್ರಾಮದವರಿಗೂ ಕಲಾದಗಿಗೆ ಸನಿಹ ಸಂಪರ್ಕ ರಸ್ತೆ ಈ ರಸ್ತೆಯಲ್ಲಿ ತಗ್ಗು ದಿನ್ನೆಗಳನ್ನು ದಾಟಿಕೊಂಡೇ ಹೋಗಬೇಕು. ಮಳೆಗಾಲ ಆಯಿತೆಂದರೆ ಸಾಕು ರಸ್ತೆಯಲ್ಲಾ ಕೇಸರು ಗದ್ದೆಯಂತೆ ಮಾರ್ಪಡುತ್ತದೆ. ಆ ವೇಳೆ ಬಸ್ ವಾಹನಗಳು ಸಂಚರಿಸುವಾಗ ರಾಡಿ ನೀರು ಸೈಕಲ್ ಮೋಟಾರ್ ಲಘು ವಾಹನಗಳ ಮೇಲೆ ಸಿಡಿದು ವಾಹನಗಳು ಕೆಸರು ಮಯವಾಗುತ್ತಿವೆ. ತಗ್ಗು ದಿನ್ನೆಗಳನ್ನು ದಾಟಿಕೊಂಡು ಹೋಗಬೇಕಾದರೆ ಯಾವುದೋ ರಸ್ತೆ ಇರದ ಕುಗ್ರಾಮಕ್ಕೆ ಸಂಚರಿಸಿದ ಅಮುಭವ ಬಾರದೇ ಇರದು.

ಈ ಸನಿಹ ಸಂಪರ್ಕ ರಸ್ತೆಯಲ್ಲಿ ನಿತ್ಯ 163 ಬಸ್‌ ಗಳು ಸಂಚರಿಸುತ್ತವೆ, ನೂರಾರು ಮೋಟಾರ್ ಸೈಕಲಗಳು ಸಹ ಇದೇ ರಸ್ತೆಯನ್ನೇ ಅವಲಂಬಿಸಿವೆ. ಯಾವುದಾದರೂ ರೋಗಿಯನ್ನು ಈ ರಸ್ತೆಯಲ್ಲಿ ಬಾಗಲಕೋಟೆಗೆ ಕರೆದೋಯ್ದರೆ ರೋಗಿಗೆ ಮತ್ತಷ್ಟು ಬೆನೆಗಳು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ತುಂಬು ಗರ್ಭಿಣಿಯನ್ನು ಏನಾದರೂ ಈ ರಸ್ತೆಯಲ್ಲಿ ಕರೆದುಕೊಂಡು ಹೋದರೆ ಈ ರಸ್ತೆ ದಾಟುವುದರಲ್ಲೇ ಹೆರಿಗೆ ಆದರೂ ಆಗಬಹುದು ಎನ್ನುವಂತಹ ಸ್ಥಿತಿ ಇಲ್ಲಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಡಾಂಬರೀಕರಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.


ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಾಹಿತಿ ಇದೆ, ಈ ಮೊದಲು ಒಂದೆರಡು ಬಾರಿ ಗರಸು ಮಣ್ಣು ಸುರಿಸಿ ಸಮತಟ್ಟು ಮಾಡಲಾಗಿತ್ತು, ಬ್ರಿಜ್ ಬಳಿಯ ರಸ್ತೆ ಡಾಂಬರೀಕರಣ ಮಾಡಲು ಕೆ.ಬಿ.ಜೆ.ಎನ್.ಎಲ್ ಮೇಲಧಿಕಾರಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಹೆಸರು ಹೇಳಲಿಚ್ಚಸದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿ

ಕೊಬ್ರಿ ಕ್ರಾಸನಿಂದ ಹಿರೇಸಂಶಿ ಕ್ರಾಸ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರ ಸಂಚಾರಕ್ಕೆ ರಸ್ತೆ ಯೋಗ್ಯವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ರಸ್ತೆಯನ್ನು ತಕ್ಷಣ ಡಾಂಬರೀಕರಣಗೊಳಿಸಬೇಕು.

-ಭೀಮಶಿ ಪೂಜಾರಿ, ಕಲಾದಗಿ ಗ್ರಾಮಸ್ಥ