ಸಾರಾಂಶ
ಸಂಚಾರಿ ಪೊಲೀಸರ ಈ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ಕುಡುಕನೊಬ್ಬನನ್ನು ಸಂಚಾರಿ ಪೊಲೀಸರೇ ಮೇಲಕ್ಕೆತ್ತಿ ಪ್ರಾಣಾಪಾಯದಿಂದ ರಕ್ಷಿಸಿದ ವಿದ್ಯಮಾನ ಶುಕ್ರವಾರ ನಗರದ ಪಂಪ್ವೆಲ್ ಬಳಿ ನಡೆದಿದೆ.ಬೆಳ್ಳಂಬೆಳಗ್ಗೆ ನಶೆಯ ಅಮಲಿನಲ್ಲಿದ್ದ ಕುಡುಕನೊಬ್ಬ ಪಂಪ್ವೆಲ್ ಬಳಿಯ ಆರೇಳು ಅಡಿ ಆಳವಿದ್ದ ಮೋರಿಗೆ ಬಿದ್ದಿದ್ದಾನೆ. ಮಳೆಯಿಂದಾಗಿ ಮೋರಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಇದನ್ನು ಅಲ್ಲಿದ್ದ ಸಂಚಾರಿ ಪೊಲೀಸರು ಗಮನಿಸಿದ್ದಾರೆ. ಕೂಡಲೇ ಅವರು ಮೋರಿಗೆ ಇಳಿದು ಕುಡುಕನನ್ನು ಮೇಲೆತ್ತಿ ಪ್ರಾಣ ರಕ್ಷಿಸಿ ಔದಾರ್ಯ ಮೆರೆದಿದ್ದಾರೆ. ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಸಿಬ್ಬಂದಿಗಳಾದ ತಿಪ್ಪೇ ಸ್ವಾಮಿ ಮತ್ತು ವಿಲ್ಸನ್ ಫರ್ನಾಂಡಿಸ್ ಕುಡುಕನ ಪ್ರಾಣ ರಕ್ಷಿಸಿದವರು. ಬಳಿಕ ಇವರಿಗೆ ಸಾರ್ವಜನಿಕರು ಸಾಥ್ ನೀಡಿದ್ದಾರೆ. ಸಂಚಾರಿ ಪೊಲೀಸರ ಈ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.