ಸಾರಾಂಶ
ಕೆಆರ್ಎಸ್ ಅಣೆಕಟ್ಟು ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಟ್ರಯಲ್ ಬ್ಲಾಸ್ಟ್ ಗೆ ನಮ್ಮ ಅಸಮಾಧಾನ ಇದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು ಎಂಬ ವರದಿ ಇದೆ. ಹಾಗಿದ್ದ ಮೇಲೆ ಟ್ರಯಲ್ ಬ್ಲಾಸ್ಟ್ ಮಾಡುವ ಅವಶ್ಯಕತೆ ಏನು. ಅಣೆಕಟ್ಟು ಒಡೆದುಹೋದರೆ ಯಾರು ಹೊಣೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಟ್ರಯಲ್ ಬ್ಲಾಸ್ಟ್ ನಡೆಸಬೇಕು ಎನ್ನುವವರಿಗೆ ಸಾಮಾನ್ಯಜ್ಞಾನವೇ ಇಲ್ಲ. ನ್ಯೂಕ್ಲಿಯರ್ ಬಾಂಬ್ನ್ನು ಬಾಂಬೆ ಮೇಲೆ ಹಾಕಿ ನೋಡೋಣ ಎಂಬಂತಾಯಿತು. ತೀವ್ರತೆ ಬಗ್ಗೆ ಗೊತ್ತಿದ್ದರೂ ಟ್ರಯಲ್ ಬ್ಲಾಸ್ಟ್ ನಡೆಸುವುದು ಅವೈಜ್ಞಾನಿಕ ಎಂದು ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ದೂರಿದರು.ಕೆಆರ್ಎಸ್ ಅಣೆಕಟ್ಟು ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಟ್ರಯಲ್ ಬ್ಲಾಸ್ಟ್ ಗೆ ನಮ್ಮ ಅಸಮಾಧಾನ ಇದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು ಎಂಬ ವರದಿ ಇದೆ. ಹಾಗಿದ್ದ ಮೇಲೆ ಟ್ರಯಲ್ ಬ್ಲಾಸ್ಟ್ ಮಾಡುವ ಅವಶ್ಯಕತೆ ಏನು. ಅಣೆಕಟ್ಟು ಒಡೆದುಹೋದರೆ ಯಾರು ಹೊಣೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.
ಕೆಆರ್ಎಸ್ ಅಣೆಕಟ್ಟೆ ಬಳಿಯೇ ಟ್ರಯಲ್ ಬ್ಲಾಸ್ಟ್ ಮಾಡಬೇಕೆಂಬ ಹಠ ಏಕೆ. ಗಣಿಗಾರಿಕೆ ನಡೆಸುವುದಕ್ಕೆ ಅದೇ ಜಾಗವೇ ಬೇಕಾ. ಬೇರೆ ಕಡೆ ಪ್ರಯೋಗ ಮಾಡಲಿ. ಟ್ರಯಲ್ ಬ್ಲಾಸ್ಟ್ ಮಾಡುವುದು ಸೂಕ್ತ ಅಲ್ಲ. ಕೈಗುಳಿಯಲ್ಲಿ ಬೇಕಾದರೆ ಗಣಿಗಾರಿಕೆ ನಡೆಸಿಕೊಂಡು ಹೋಗಲಿ. ಸ್ಫೋಟಕಗಳನ್ನು ಬಳಸದೆ ಗಣಿಗಾರಿಕೆ ನಡೆಸುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಟ್ರಯಲ್ ಬ್ಲಾಸ್ಟ್ ನಡೆಸುವುದು ಸರಿಯಲ್ಲ. ರೈತರ ಪ್ರತಿಭಟನೆಯಲ್ಲಿ ನಾನೂ ಭಾಗಿಯಾಗಿ ಬೆಂಬಲ ಕೊಡುತ್ತೇನೆ. ಟ್ರಯಲ್ ಬ್ಲಾಸ್ಟ್ ನ್ನು ನೂರಕ್ಕೆ ನೂರರಷ್ಟು ವಿರೋಧ ಮಾಡುತ್ತೇನೆ. ಕೇಂದ್ರ ಸಚಿವರ ಗಮನಕ್ಕೂ ತರುತ್ತೇನೆ ಎಂದರು.