ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಕಳೆದ ಹಲವು ವರ್ಷಗಳ ಸಾರ್ವಜನಿಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳ ನಿಲುಗಡೆ ಮಾಡಲಾಗಿತ್ತು. ಆದರೆ ಕಳೆದ ಮೂರು ನಾಲ್ಕು ದಿನಗಳಿಂದ ಇಲಾಖೆಯವರು ಟಿಕೆಟ್ ಸಂಗ್ರಹದ ಹಣ ಕಡಿಮೆ ಆಯಿತು ಎಂಬ ಕಾರಣಕ್ಕೆ ರೈಲುಗಳ ನಿಲುಗಡೆಯನ್ನು ರದ್ದುಗೊಳಿಸಿದ್ದಾರೆ.ಹಲವಾರು ಗ್ರಾಮೀಣ ಭಾಗದ ರೈಲ್ವೆ ನಿಲ್ದಾಣಗಳಲ್ಲಿ ಮೆಸೆಂಜರ್ ರೈಲುಗಳ ನಿಲುಗಡೆ ಮಾಡುತ್ತಾ ಬಂದಿರುವ ರೈಲ್ವೆ ಇಲಾಖೆಯವರು ತಾಲೂಕು ಕೇಂದ್ರವಾದ ಆಲೂರು ರೈಲ್ವೆ ನಿಲ್ದಾಣದಲ್ಲಿ ಕುಂಟು ನೆಪ ಹೇಳಿ ನಿಲುಗಡೆಯನ್ನು ರದ್ದುಗೊಳಿಸಿರುವುದು ತಾಲೂಕಿನ ಜನತೆಗೆ ಮಾಡಿದ ಅನ್ಯಾಯವಾಗಿದೆ. ಅಷ್ಟೇ ಅಲ್ಲದೆ ಗುರುವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಆಲೂರಿಗೆ ದಂಪತಿಗಳಿಬ್ಬರಿಗೆ ಟಿಕೆಟ್ ನೀಡಿ ಇಲ್ಲಿ ರೈಲನ್ನು ನಿಲ್ಲಿಸದೆ ಸಕಲೇಶಪುರ ನಿಲ್ದಾಣದಲ್ಲಿ ಅವರನ್ನು ಇಳಿಸಲಾಗಿದೆ. ನಿಲುಗಡೆಯನ್ನು ರದ್ದುಗೊಳಿಸಿದ್ದರೆ ಯಶವಂತಪುರ ನಿಲ್ದಾಣದಲ್ಲಿ ಟಿಕೆಟ್ ಪಡೆದ ದಂಪತಿಗೆ ಆಲೂರಿಗೆ ಟಿಕೆಟ್ ನೀಡಿರುವುದಾದರೂ ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದರೆ ಆಲೂರಿನಲ್ಲಿ ನಿಲುಗಡೆ ರದ್ದುಗೊಳಿಸಿರುವುದು ರೈಲ್ವೆ ಇಲಾಖೆಯವರಿಗೆ ತಿಳಿದಿದೆಯೋ ಇಲ್ಲವೋ ಅಥವಾ ಇಲಾಖೆಯವರಲ್ಲಿಯೇ ಸಂವಹನ ಇಲ್ಲವೇ ಎಂಬುದು ತಿಳಿಯದಾಗಿದೆ. ರೈಲುಗಳ ಬರುವಿಕೆ ನಿಲುಗಡೆ ಕ್ರಾಸಿಂಗ್ ಪ್ರತಿಯೊಂದು ವಿಚಾರದ ಕ್ಷಣದ ಮಾಹಿತಿಯು ಸಹ ರೈಲ್ವೆ ಸಿಬ್ಬಂದಿಗೆ ರೈಲ್ವೆ ನೌಕರರಿಗೆ ಇರಬೇಕಲ್ಲವೇ. ನಿಲ್ದಾಣದಲ್ಲಿ ನಿಲುಗಡೆ ರದ್ದುಗೊಳಿಸಿರುವ ವಿಚಾರವೇ ತಿಳಿಯದೆ ಇದ್ದರೆ ಇನ್ನೂ ರೈಲಿನ ಬರುವಿಕೆ ನಿಲುಗಡೆ ಮತ್ತೊಂದರ ವಿಚಾರಗಳು ಇವರಿಗೆ ಹೇಗೆ ತಿಳಿಯುತ್ತದೆ.
ಒಂದೆಡೆ ರೈಲು ನಿಲುಗಡೆ ರದ್ದಾಗಿರುವ ಬೇಸರ ಇನ್ನೊಂದೆಡೆ ರೈಲ್ವೆ ಇಲಾಖೆಯವರ ಬೇಜವಬ್ದಾರಿತನದ ವರ್ತನೆ. ಇವೆರಡರಿಂದಾಗಿಯೂ ಅನುಭವಿಸುತ್ತಿರುವವರು ಆಲೂರಿನ ಜನತೆ. ಇಷ್ಟಾದರೂ ಸಹ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದೆ ಏನು ಮಾಡುತ್ತಿದ್ದಾರೆ, ಅವರಿಗೂ ಇದಕ್ಕೂ ಅವರಿಗೂ ಸಂಬಂಧವಿಲ್ಲವೇ ಎಂಬುದು ತಿಳಿಯದಾಗಿದ್ದು, ಸಂಬಂಧಪಟ್ಟವರು ಶೀಘ್ರ ಇತ್ತ ಗಮನ ಹರಿಸಿ ರೈಲು ನಿಲುಗಡೆಯನ್ನು ನೀಡದೆ ಹೋದರೆ ಪುನಃ ನಾಗರಿಕರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.ರಾಧಮ್ಮ ಜನಸ್ಪಂದನ ಸಂಸ್ಥೆಯ ಅಧ್ಯಕ್ಷ ಹೇಮಂತ್ ಮಾತನಾಡಿ, ಇದಕ್ಕೆಲ್ಲ ಇಲಾಖೆಯವರ ಬೇಜವಾಬ್ದಾರಿಯೇ ಕಾರಣ. ಈ ಸಂಬಂಧವಾಗಿ ಈಗಾಗಲೇ ರೈಲ್ವೆ ಸಚಿವರು ಹಾಗೂ ಸಂಸದರ ಗಮನಕ್ಕೆ ತರಲಾಗಿದ್ದು ಅವರುಗಳಿಗೆ ಇಲ್ಲಿ ರೈಲು ನಿಲುಗಡೆ ರದ್ದುಗೊಳಿಸಿರುವುದು ತಿಳಿದಿಲ್ಲ, ಶೀಘ್ರದಲ್ಲಿ ಇಲ್ಲಿ ಪುನಃ ನಿಲುಗಡೆ ನೀಡಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆಂದು ತಿಳಿಸಿದರು.
* ಹೇಳಿಕೆ 1ಹಲವಾರು ವರ್ಷಗಳ ಹೋರಾಟದ ಫಲವಾಗಿ ಈ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಲಾಗಿತ್ತು, ಆದರೆ ಇಲಾಖೆಯವರು ಏಕಾಏಕಿ ನಿಲುಗಡೆ ರದ್ದುಗೊಳಿಸಿರುವುದು ಖಂಡನೀಯ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಪುನಃ ಇಲ್ಲಿ ರೈಲು ನಿಲುಗಡೆ ನೀಡದೇ ಹೋದರೆ ರೈಲು ತಡೆ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು.
- ಸತೀಶ್ ಪಟೇಲ್, ಕರವೇ ಜಿಲ್ಲಾಧ್ಯಕ್ಷ* ಹೇಳಿಕೆ 2
ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ 75 ಮುಖಬೆಲೆಯ ಟಿಕೆಟ್ ಅನ್ನು ಆಲೂರಿಗೆ ನೀಡಿದ್ದಾರೆ. ಆಲೂರು ಸಮೀಪಿಸುತ್ತಿದ್ದಂತೆ ನಾವು ಇಳಿಯಲು ಸಿದ್ಧರಾಗುತ್ತಿದ್ದರೆ, ಆಲೂರು ನಿಲ್ದಾಣದಲ್ಲಿ ನಿಲುಗಡೆ ನೀಡದೆ ರೈಲನ್ನು ಸಕಲೇಶಪುರದಲ್ಲಿ ನಿಲ್ಲಿಸಲಾಯಿತು. ಅಲ್ಲಿಂದ ನಾವು ನಡೆದುಕೊಂಡು ಸಕಲೇಶಪುರ ಬಸ್ ನಿಲ್ದಾಣಕ್ಕೆ ಬಂದು, ಬಸ್ನಲ್ಲಿ ಆಲೂರಿಗೆ ಬರಬೇಕಾಯಿತು. ಬೇಜವಾಬ್ದಾರಿತನವೇ ಇದಕ್ಕೆಲ್ಲ ಕಾರಣ.- ಶ್ರೀಧರ್, ಪ್ರಯಾಣಿಕ =================================================
ಫೋಟೋ ಶಿರ್ಷಿಕೆ:ಯಶವಂತಪುರದಿಂದ ಆಲೂರಿಗೆ ನೀಡಿರುವ ರೈಲ್ವೆ ಟಿಕೆಟ್.
13ಎಚ್ಎಸ್ಎನ್4 : ವಿಧಿ ಇಲ್ಲದೆ ಸಕಲೇಶಪುರ ನಿಲ್ದಾಣದಲ್ಲಿ ಇಳಿದ ಶ್ರೀಧರ ದಂಪತಿ.