ಮುಸುಕಿನಜೋಳದ ಬೆಳೆಗೆ ಕೇದಿಗೆ ರೋಗದ ಹತೋಟಿ ತರಬೇತಿ

| Published : Jun 14 2025, 02:16 AM IST

ಸಾರಾಂಶ

ಮೈಸೂರು: ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರವು 2025-26ನೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕು ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ಹತ್ತಿ ಮತ್ತು ಮುಸುಕಿನಜೋಳದ ಬೆಳೆಯಲ್ಲಿ ಕೀಟ/ ರೋಗಗಳ ಹತೋಟಿ ಕ್ರಮಗಳು ಕುರಿತು ತರಬೇತಿ ಆಯೋಜಿಸಿದ್ದರು.

ಮೈಸೂರು: ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರವು 2025-26ನೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕು ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ಹತ್ತಿ ಮತ್ತು ಮುಸುಕಿನಜೋಳದ ಬೆಳೆಯಲ್ಲಿ ಕೀಟ/ ರೋಗಗಳ ಹತೋಟಿ ಕ್ರಮಗಳು ಕುರಿತು ತರಬೇತಿ ಆಯೋಜಿಸಿದ್ದರು.

ಕರ್ನಾಟಕ ರೈತ ಕಲ್ಯಾಣ ಸಂಘದ ಅಧ್ಯಕ್ಷ ಮಹದೇವನಾಯಕ, ಗೌರವಾಧಕ್ಷ ಮಂಚಯ್ಯ ಹಾಗೂ ರೈತ ಸಂಘದ ಪದಾಧಿಕಾರಿಗಳು ಮತ್ತು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ಉದ್ಘಾಟಿಸಿದರು.

ತರಬೇತಿ ಕೇಂದ್ರದಲ್ಲಿ ಆಯೋಜಿಸುತ್ತಿರುವ ವಿವಿಧ ಆನ್ ಲೈನ್ ಮತ್ತು ಸಾಂಸ್ಥಿಕ ತರಬೇತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಅದರ ಸದುಪಯೋಗ ಪಡೆಯುವಂತೆ ರೈತರಿಗೆ ತರಬೇತಿ ಸಂಯೋಜಕ ಎಚ್.ಆರ್. ರಾಜಶೇಖರ ಮನವಿ ಮಾಡಿದರು.

ನಿವೃತ್ತ ಮಣ್ಣು ವಿಜ್ಞಾನಿ ಜೆ.ಜಿ. ರಾಜಣ್ಣ ಅವರು ಮಣ್ಣು ಪರೀಕ್ಷೆ ಮಹತ್ವ, ಮಣ್ಣು ಮಾದರಿ ಸಂಗ್ರಹಿಸುವ ವಿಧಾನ ಹಾಗೂ ಶಿಫಾರಸ್ಸಿನಂತೆ ರಸಗೊಬ್ಬರ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.

ತರಬೇತಿ ಅಂಗವಾಗಿ ಈ ಭಾಗದ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಮುಸಕಿನ ಜೋಳ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಸಸ್ಯರೋಗ ಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪಾ ಮಾಹಿತಿ ನೀಡಿದರು.

ಬಳಿಕ ಮಾತನಾಡಿ, ಇತ್ತೀಚಿಗೆ ಬಿದ್ದ ಹೆಚ್ಚು ಮಳೆ ಹಾಗೂ ಹವಾಮಾನ ವೈಫರೀತ್ಯದಿಂದ ಮುಸುಕಿನಜೋಳದಲ್ಲಿ ಬೂಜು, ಕೇದಿಗೆ ರೋಗ ಉಲ್ವಣಗೊಳ್ಳುತ್ತಿದ್ದು ಇದರಿಂದ ಇಳುವರಿ ನಷ್ಟ ಸಾಧ್ಯತೆ ಇರುವುದರಿಂದ ರೈತರು ರೋಗ ಲಕ್ಷಣ ಕಂಡ ಕೂಡಲೆ ಮೆಟಲಾಕ್ಸಿಲ್ 8 ಡಬ್ಲುಪಿ ಮತ್ತು ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತೀ 1 ಲೀಟರ್ ನೀರಿಗೆ 2 ಗ್ರಾಂನಂತೆ (ಎಕರೆಗೆ 600 ಗ್ರಾಂ) ಮಿಶ್ರಣಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸಬೇಕು ಎಂದು ತಿಳಿಸಿದರು.

ಮುಸುಕಿನ ಜೋಳ ಬಿತ್ತನೆಗೆ ಮೊದಲು ಪ್ರತಿ 1 ಕೆಜಿ ಬಿತ್ತನೆ ಬೀಜಕ್ಕೆ 3 ಗ್ರಾಂ ಮೆಟಲಾಕ್ಸಿಲ್ 8 ಡಬ್ಲುಪಿ + ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶೇ. 30 ರಿಂದ 40 ರಷ್ಟು ರೋಗ ನಿಯಂತ್ರಣವಾಗುತ್ತದೆ. ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ಬೂಜು/ಕೇದಿಗೆ ರೋಗ ನಿರೋಧಕ ತಳಿಗಳಾದ ಹೇಮ, ನಿತ್ಯಶ್ರೀ ಯನ್ನು ಬೆಳೆಯುವುದು ಸೂಕ್ತ ಎಂದರು.

ಕೃಷಿ ಇಲಾಖೆಯಲ್ಲಿ ಅನುಷ್ಟಾನಗೊಳಿಸುವ ವಿವಿಧ ಯೋಜನೆಗಳಡಿ ದೊರೆಯುವ ಸಹಾಯಧನ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಎಚ್.ಡಿ.ಕೋಟೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ಮಾಹಿತಿ ನೀಡಿದರು.

ಸರಗೂರು ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಚೈತ್ರಾ ಅವರು ತೋಟಗಾರಿಕೆ ಇಲಾಖೆಯಲ್ಲಿ ಅನುಷ್ಟಾನಗೊಳಿಸುವ ವಿವಿಧ ಯೋಜನೆಗಳಡಿ ದೊರೆಯುವ ಸಹಾಯಧನ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಜಿ. ಸಿದ್ದಪ್ಪಸ್ವಾಮಿ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪಾ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಕ್ಷಿತಾ, ವಿನಯ್ ಅಸೋಡೆ ಮತ್ತು ಜಗನ್ನಾಥ್ ಇದ್ದರು. ತರಬೇತಿ ಸಂಯೋಜಕ ಎಚ್.ಆರ್. ರಾಜಶೇಖರ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.