ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಕೃಷಿಕರಿಗೆ ತರಬೇತಿ ಕಾರ್ಯಕ್ರಮ

| Published : Jun 07 2025, 12:52 AM IST

ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಕೃಷಿಕರಿಗೆ ತರಬೇತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಕೃಷಿ ಅನುಸಂಧಾನ ಪರಿಷತ್, ಜಿಲ್ಲಾ ಆಡಳಿತ, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ಕೃಷಿ ಇಲಾಖೆ ಸೋಮವಾರಪೇಟೆ, ಪುಷ್ಪಗಿರಿ ರೈತ ಉತ್ಪಾದಕರ ಸಂಘ, ಸೋಮವಾರಪೇಟೆ, ಕಾಫಿ ಮಂಡಳಿ, ಸಂಬಾರ ಮಂಡಳಿ ವತಿಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಕೃಷಿಕರಿಗೆ ತರಬೇತಿ ಕಾರ್ಯಕ್ರಮ ಶುಕ್ರವಾರ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಭಾರತೀಯ ಕೃಷಿ ಅನುಸಂಧಾನ ಪರಿಷತ್, ಜಿಲ್ಲಾ ಆಡಳಿತ, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ಕೃಷಿ ಇಲಾಖೆ ಸೋಮವಾರಪೇಟೆ, ಪುಷ್ಪಗಿರಿ ರೈತ ಉತ್ಪಾದಕರ ಸಂಘ, ಸೋಮವಾರಪೇಟೆ, ಕಾಫಿ ಮಂಡಳಿ, ಸಂಬಾರ ಮಂಡಳಿ ವತಿಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಕೃಷಿಕರಿಗೆ ತರಬೇತಿ ಕಾರ್ಯಕ್ರಮ ಶುಕ್ರವಾರ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಕೆಯೊಂದಿಗೆ ಸುಧಾರಿತ ಬೇಸಾಯ ಮಾಡಿದರೆ ಉತ್ತಮ ಫಸಲು ಪಡೆಯಬಹುದು ಎಂದು ಹೇಳಿದರು.ಮೇನಲ್ಲಿ ಉತ್ತಮ ಮಳೆ ಬಿದ್ದಿರುವ ಕಾರಣ, ಕಾಳುಮೆಣಸು ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದ್ದು, ಕೃಷಿಕರು ಕಾಳುಮೆಣಸು ಬಳ್ಳಿಗಳ ರಕ್ಷಣೆಯತ್ತ ಗಮನಹರಿಸಬೇಕು. ಹಿರಿಯ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡು ಬಳ್ಳಿ ಔಷಧಿ ಮತ್ತು ಗೊಬ್ಬರವನ್ನು ಬಳಕೆ ಮಾಡಬೇಕು. ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಗೆ ದೂರವಾಣಿ ಕರೆ ಅಥವಾ ವಾಟ್ಸಾಪ್ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಕಾಫಿ ಗಿಡಗಳಿಗೆ ಮತ್ತು ಬಳ್ಳಿಗಳಿಗೆ ಪೂರಕ ಆಹಾರವನ್ನು ಪೂರೈಕೆ ಮಾಡಬೇಕು ಎಂದರು.ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಈ ಭಾಗದಲ್ಲಿ ಕಾಳುಮೆಣಸಿನ ತೇವಂ ಮತ್ತು ಕೂರ್ಗ್ ಎಕ್ಸಲ್ ತಳಿಯನ್ನು ಬೆಳೆಯಯುವುದು ಸೂಕ್ತ. ಕೂರ್ಗ್ ಎಕ್ಸಲ್ ತಳಿಯು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು ಪಡೆದುಕೊಳ್ಳಬಹುದು ಎಂದರು.

ಅಡಕೆ, ಕಾಫಿ, ಕಿತ್ತಳೆ ಬೆಳೆಯ ಬಗ್ಗೆ ಮಾಹಿತಿ ಕೂಡ ನೀಡಿದರು.

ಹುಣಸೂರು ತಂಬಾಕು ಸಂಶೋಧನ ಕೇಂದ್ರದ ವಿಷಯ ತಜ್ಞ ಕೆ.ಪಿ.ರಾಘವೇಂದ್ರ, ಮುಂಗಾರು ಹಂಗಾಮಿನ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕಾಳುಮೆಣಸು ಕೃಷಿಯ ಬಗ್ಗೆ ಮಡಿಕೇರಿ ಅಪ್ಪಂಗಳ ವಿಸ್ತರಣಾ ಸಂಸ್ಕರಣ ಘಟಕದ ದೇವರಾಜು, ಭತ್ತ ಕೃಷಿಯ ಬಗ್ಗೆ ಮಡಿಕೇರಿ ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಮಾಹಿತಿ ನೀಡಿದರು.

ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್, ಶಾಂತಳ್ಳಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶಾರದಾ, ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ. ಜಯರಾಮ್, ಸೋಮವಾರಪೇಟೆಯ ಪುಷ್ಪಗಿರಿ ರೈತ ಉತ್ಪಾದನಾ ಸಂಸ್ಥೆಯ ಅಧ್ಯಕ್ಷ ಬನ್ನಳ್ಳಿ ಸತೀಶ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕೆ.ಟಿ. ಪರಮೇಶ್, ತಾಲೂಕು ರೈತ ಸಂಘ ಅಧ್ಯಕ್ಷ ಕೆ.ಎಂ.ದಿನೇಶ್, ಪ್ರಮುಖರಾದ ನಾಪಂಡ ಪೂಣಚ್ಚ, ವಿದ್ಯಾ ಮಧುಕುಮಾರ್, ಶನಿವಾರಸಂತೆ ಕೃಷಿ ಇಲಾಖೆಯ ಸಹಾಯ ತಾಂತ್ರಿಕ ವ್ಯವಸ್ಥಾಪಕಿ ವೇದಪ್ರಿಯಾ, ಕುಶಾಲನಗರ ಕೃಷಿ ಇಲಾಖೆಯ ಸಹಾಯ ತಾಂತ್ರಿಕ ವ್ಯವಸ್ಥಾಪಕಿ ಅರ್ಪಿತಾ ಇದ್ದರು.