ಕಾಳೇನಹಳ್ಳಿಯಲ್ಲಿ ಭತ್ತ, ಮುಸುಕಿನಜೋಳ, ಶುಂಠಿ ಬೆಳೆ ಕುರಿತು ತರಬೇತಿ ಕಾರ್ಯಕ್ರಮ

| Published : Jun 18 2025, 11:49 PM IST

ಕಾಳೇನಹಳ್ಳಿಯಲ್ಲಿ ಭತ್ತ, ಮುಸುಕಿನಜೋಳ, ಶುಂಠಿ ಬೆಳೆ ಕುರಿತು ತರಬೇತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಾಳೇನಹಳ್ಳಿಯಲ್ಲಿ ಭತ್ತ, ಮುಸುಕಿನಜೋಳ ಮತ್ತು ಶುಂಠಿ ಬೆಳೆಯಲ್ಲಿ ಸಮಗ್ರ ಬೇಸಾಯ ಕ್ರಮಗಳ ಅಳವಡಿಕೆ ಕುರಿತು ಬುಧವಾರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಮೈಸೂರು

ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಾಳೇನಹಳ್ಳಿಯಲ್ಲಿ ಭತ್ತ, ಮುಸುಕಿನಜೋಳ ಮತ್ತು ಶುಂಠಿ ಬೆಳೆಯಲ್ಲಿ ಸಮಗ್ರ ಬೇಸಾಯ ಕ್ರಮಗಳ ಅಳವಡಿಕೆ ಕುರಿತು ಬುಧವಾರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ ನಡೆಯಿತು.

ತಂಬಾಕು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶುಂಠಿ ಮತ್ತು ಅರಿಶಿನ ಬೆಳಗಳಲ್ಲಿ ಉತ್ಪಾದನಾ ತಾಂತ್ರಿಕತೆಗಳು, ಪೋಷಕಾಂಶಗಳ ನಿರ್ವಹಣೆ, ಗೆಡ್ಡೆ ಕೊಳೆ ರೋಗದ ನಿರ್ವಹಣಾ ಕ್ರಮಗಳನ್ನು ಸವಿವರವಾಗಿ ತಿಳಿಸಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಮಾತನಾಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ ವತಿಯಿಂದ ರೈತರಿಗೆ ಗ್ರಾಮಮಟ್ಟದಲ್ಲಿ ತರಬೇತಿಗಳನ್ನು ಆಯೋಜಿಸುತ್ತಿದ್ದು, ರೈತರು ತಾಂತ್ರಿಕ ಮಾಹಿತಿಯನ್ನು ಪಡೆದು, ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಸುಸ್ಥಿರತೆ ಸಾಧಿಸಬೇಕೆಂದು ತಿಳಿಸಿದರು ಹಾಗೂ ಆನ್ ಲೈನ್ ತರಬೇತಿ ಮತ್ತು ಡಿಎಟಿಸಿ, ಮೈಸೂರು ಯುಟ್ಯೂಬ್‌ ಚಾನಲ್ ನಲ್ಲಿ ಸಿಗುವ ಮಾಹಿತಿ ಪಡೆಯುವಂತೆ ತಿಳಿಸಿದರು.

ಸಸ್ಯರೋಗ ಶಾಸ್ತ್ರಜ್ಞೆ ಡಾ. ಆರ್‌.ಎನ್. ಪುಷ್ಪಾ ಮಾತನಾಡಿ, ಇತ್ತೀಚಿನ ಹವಾಮಾನ ವೈಪರೀತ್ಯತೆಯಿಂದ ಮುಸುಕಿನ ಜೋಳದಲ್ಲಿ ವ್ಯಾಪಕವಾಗಿ ಹರಡಿರುವ ಮುಸುಕಿನಜೋಳದಲ್ಲಿ ಬೂಜು, ಕೇದಿಗೆ ರೋಗದ ಲಕ್ಷಣಗಳ ಬಗ್ಗೆ ವಿವರಿಸುತ್ತಾ ರೈತರು ನಿರ್ವಹಣೆಗೆ ಕೂಡಲೇ ಅಜಾಕ್ಸಿಸ್ಟ್ರೋಟಿನ್ + ಡೈಫೆನ್ ಕೊನಜೋಲ್ ಸಂಯುಕ್ತ ಶೀಲಿಂದ್ರ ನಾಶಕವನ್ನು ಪ್ರತಿ ಒಂದು ಲೀಟರ್ ನೀರಿಗೆ 1.5 ಮಿ.ಲೀ.ನಂತೆ (ಎಕರೆಗೆ 450 ಮಿ.ಲೀ) ಹಾಗು 15 ದಿನಗಳ ನಂತರ ಮೆಟಲಾಕ್ಸಿಲ್ 8 ಡಬ್ಲುಪಿ + ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತೀ ಒಂದು ಲೀಟರ್ ನೀರಿಗೆ 2 ಗ್ರಾಂನಂತೆ (ಎಕರೆಗೆ 600 ಗ್ರಾಂ) ಮಿಶ್ರಣಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸಬೇಕು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೇದಿಗೆ ರೋಗ ನಿರೋಧಕತೆ ತಳಿಗಳಾದ ಎಂಎಎಚ್‌ -14-5, ಎಂಎಎಚ್‌-1137 (ಹೇಮ), ಎಂಎಎಚ್‌-2049 (ನಿತ್ಯಶ್ರೀ), ಎಂಎಎಚ್‌-14-138, ಎಂಎಎಚ್‌-15-84 ತಳಿಗಳನ್ನು ಬೆಳೆಯಬೇಕಾಗಿ ಸೂಚಿಸಿದರು.

ತಂಬಾಕು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಕೆ.ಪಿ. ರಾಘವೇಂದ್ರ ಮಾತನಾಡಿ, ರೈತರಿಗೆ ಮಣ್ಣಿನ ಮಾದರಿ ಸಂಗ್ರಹಣೆ ವಿಧಾನ, ಮಣ್ಣು ಪರೀಕ್ಷೆ ಮಹತ್ವ ಹಾಗೂ ಹಸಿರೆಲೆಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವಂತೆ ಹಾಗೂ ಮಣ್ಣು ಆರೋಗ್ಯ ಚೀಟಿ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸುವಂತೆ ತಿಳಿಸಿದರು.

ಹುಣಸೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಕೆ.ಎಸ್‌. ಅನಿಲ್ ಕುಮಾರ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಹಾಗೂ ರೈತರು ಕೃಷಿ ಪರಿಕರಗಳನ್ನು ಖರೀದಿಸಿದಾಗ ರಶೀದಿಗಳನ್ನು ಕಡ್ಡಾಯವಾಗಿ ಪರಿಕರ ಮಾರಾಟಗಾರರಲ್ಲಿ ಕೇಳಿ ಪಡೆಯುವಂತೆ ತಿಳಿಸಿದರು.

ಹನಗೋಡು ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆರ್‌. ಜಯಕುಮಾರ್ ಮಾತನಾಡಿ, ರೈತರಿಗೆ ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾಗುತ್ತಿರುವ ಪರಿಕರಗಳ ಬಗ್ಗೆ ಮಾಹಿತಿ ನೀಡಿದರು. ಬೆಳೆವಿಮೆ ಪ್ರತಿನಿಧಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಪ್ರಗತಿಪರ ರೈತರಾದ ನಟೇಶ್, ರಾಜಣ್ಣ, ಕೃಷಿ ಸಖಿಯರು ಇದ್ದರು. ಬಿ.ಟಿ.ಎಂ. ಅಶ್ವಿನಿ ನಿರೂಪಿಸಿ, ಸ್ವಾಗತಿಸಿದರು. ಹನಗೋಡು ಹೋಬಳಿ, ಎ.ಟಿ.ಎಂ.ಶಶಿಕುಮಾರ್ ಹಾಗೂ 60ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದರು.