ಅನುವಾದ ಸಾಹಿತ್ಯ ಕಠಿಣವಾದ ಸಾಹಿತ್ಯ ಪ್ರಕಾರ: ಮುಳಿಯ ರಾಘವಯ್ಯ

| Published : Jun 04 2025, 12:52 AM IST

ಸಾರಾಂಶ

ಸಾಕಷ್ಟು ಸಾಹಿತ್ಯಧ್ಯಾಯನದ ಬಳಿಕವೇ ಉತ್ತಮ ಅನುವಾದ ಸಾಧ್ಯವಾಗುತ್ತದೆ ಎಂದು ನಿವೃತ್ತ ವಿಜ್ಞಾನಾಧಿಕಾರಿ ಮುಳಿಯ ರಾಘವಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅನುವಾದ ಸಾಹಿತ್ಯ ಕಠಿಣವಾದ ಸಾಹಿತ್ಯ ಪ್ರಕಾರವಾಗಿದ್ದು ಸಾಕಷ್ಟು ಸೂಕ್ಷತೆಯಿಂದ ತಜು೯ಮೆ ಮಾಡಬೇಕಾದ ಹೊಣೆಗಾರಿಕೆ ಅನುವಾದಕನ ಮೇಲಿರುತ್ತದೆ, ಸಾಕಷ್ಟು ಸಾಹಿತ್ಯಧ್ಯಾಯನದ ಬಳಿಕವೇ ಉತ್ತಮ ಅನುವಾದ ಸಾಧ್ಯವಾಗುತ್ತದೆ ಎಂದು ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಾಧಿಕಾರಿ ಮುಳಿಯ ರಾಘವಯ್ಯ ಹೇಳಿದ್ದಾರೆ.ಸುಂಟಿಕೊಪ್ಪ ಬಳಿಯ ಗುಂಡುಗುಟ್ಟಿ ಶ್ರೀ ರಾಮಮಂದಿರ ಸಭಾಂಗಣದಲ್ಲಿ ಆಯೋಜಿತ ಮಂಜನಾಥಯ್ಯ ಅವರ 121 ನೇ ಜನ್ಮಜಯಂತಿ ಸಮಾರಂಭದಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರ ಜೀವನ ಚರಿತ್ರೆಯ ಕ್ಷೇಮಬಂಧು ಕೊಡಗಿನ ಕಲ್ಪತರು ಹೆಸರಿನ ಕನ್ನಡ ಮತ್ತು ಇಂಗ್ಲೀಷ್ ಕೃತಿಗಳನ್ನು ಲೋಕಾರ್ಪಣೆ ಮಾಡಿ ರಾಘವಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರ ಕುರಿತು ಮಾತನಾಡಿದ ಹಿರಿಯ ಸಾಹಿತಿ ಸಿ.ಪಿ. ಬೆಳ್ಳಿಯಪ್ಪ, ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಮಂಜನಾಥಯ್ಯನವರು, ಗಾಂಧೀಜಿಯವರನ್ನೇ ತನ್ನ ಗುಂಡುಗುಟ್ಟಿ ಬಂಗಲೆಗೆ ಕರೆತಂದಿದ್ದರು. ಗುಂಡುಗುಟ್ಟಿಯಲ್ಲಿಯೇ ಇದ್ದ ಕಥೆಗಾರ್ತಿ ಕೊಡಗಿನ ಗೌರಮ್ಮ ಆ ಸಂದರ್ಭ ಗಾಂಧೀಜಿಯವರ ಮಾತಿನಿಂದ ಪ್ರೇರಿತರಾಗಿ ತನ್ನೆಲ್ಲಾ ಚಿನ್ನಾಭರಣಗಳನ್ನು ಸ್ವಾತಂತ್ರ್ಯ ಚಳವಳಿಯ ಹೋರಾಟಕ್ಕೆಂದು ಗಾಂಧೀಜಿಗೆ ನೀಡಿದ್ದರು. ಡಿವಿಜಿ, ಬೇಂದ್ರೆ, ಶಿವರಾಮಕಾರಂತ, ಪಂಜೆ ಮಂಗೇಶರಾಯ ಸೇರಿದಂತೆ ಕೊಡಗಿಗೆ ಬರುತ್ತಿದ್ದ ಅನೇಕ ಸಾಹಿತ್ಯ ದಿಗ್ಗಜರಿಗೆ ಗುಂಡುಗಟ್ಟಿ ಮಂಜನಾಥಯ್ಯ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದ್ದರು ಎಂದು ಸ್ಮರಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮಂಜನಾಥಯ್ಯ ಸ್ಥಾಪಕಾಧ್ಯಕ್ಷರಾಗಿದ್ದ ಕರ್ನಾಟಕ ಸಂಘದ ವತಿಯಿಂದ 1983 ರಲ್ಲಿ ಸುಧಾಶ್ರೀಧರ್ ಅಧ್ಯಕ್ಷತೆಯಲ್ಲಿ ಚಿರಂತನ ಅವರ ಲೇಖನಿಯಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಕುರಿತ ಪ್ರಥಮ ಕೃತಿ ಪ್ರಕಟವಾಗಿತ್ತು. ಇದೀಗ ಆ ಕೃತಿಯನ್ನು ಮರುಮುದ್ರಿಸಿ, ಇಂಗ್ಲೀಷ್ ಭಾಷೆಗೂ ಅನುವಾದಿಸಿದ್ದು ಶ್ಲಾಘನೀಯ ಪ್ರಯತ್ನ ಎಂದರು.

ಪುಸ್ತಕಗಳನ್ನು ಪ್ರಕಾಶನಗೊಳಿಸಿದ ಮಡಿಕೇರಿಯ ವಾತಾ೯ ಕಮ್ಯೂನಿಕೇಷನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಹೆಚ್.ಟಿ. ಮಾತನಾಡಿ, ಸಮಾಜಸೇವೆ, ರಾಜಕೀಯ, ಧಾರ್ಮಿಕ ಸೇವೆ, ಸ್ವಾತಂತ್ರ್ಯ ಹೋರಾಟ, ಕೃಷಿ, ಹೈನುಗಾರಿಕೆ, ಪುಪ್ಪ ವಹಿವಾಟು, ಹೀಗೆ ಮಂಜನಾಥಯ್ಯ ಹತ್ತು ಹಲವಾರು ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದರು. ಇಂಥ ಅಪರೂಪದ ಸಾಧಕನ ಕುರಿತು ಎರಡೂ ಕೃತಿಗಳು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡಲಿದೆ. ಮಂಜನಾಥಯ್ಯ ಅವರ ಆದರ್ಶ ಜೀವನ ಇತರರಿಗೆ ಮಾರ್ಗದರ್ಶನವಾಗಲು ಈ ಕೃತಿಗಳು ದಾರಿದೀಪದಂತಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭ ಕೃತಿಗಳನ್ನು ಮುದ್ರಿಸಿದ ಕಾನಬೈಲು ತೋಟಮಾಲೀಕ ಗುಂಡುಗುಟ್ಟಿ ರಾಜೇಂದ್ರಕುಮಾರ್ ಅವರು ಮುಳಿಯ ರಾಘವಯ್ಯ ಅವರನ್ನು ಸನ್ಮಾನಿಸಿದರು.

ಸ್ವಾತಿ ಮಂದಣ್ಣ ಸ್ವಾಗತಿಸಿ, ವಂದಿಸಿದ ಕಾರ್ಯಕ್ರಮದಲ್ಲಿ ಸಾಧನಾ ರಾಜೇಂದ್ರ, ಮಂಜನಾಥಯ್ಯ ಅವರ ಮೊಮ್ಮಕ್ಕಳಾದ ಶಾಂತಳ, ಮರಿಮಕ್ಕಳಾದ ಮನುಗೌತಮ್, ಮುಕುಲ್ ಮಹೇಂದ್ರ, ಅಕ್ಷಯ್ ಸೇರಿದಂತೆ ಜಿಲ್ಲೆಯಾದ್ಯಂತಲಿನ ಅನೇಕ ಗಣ್ಯರು ಹಾಜರಿದ್ದರು.