ಅನುವಾದಕರಿಗೆ ಕನಿಷ್ಠ ಎರಡು ಭಾಷೆಗಳಲ್ಲಿ ಪ್ರಭುತ್ವ ಹಾಗೂ ಪಾಂಡಿತ್ಯ ಇರಲೇಬೇಕು. ಅನುವಾದಕ್ಕೆ ತನ್ನದೇ ಆದ ಇತಿಮಿತಿಗಳಿರುತ್ತವೆ. ಪ್ರಾಚೀನ ಸಾಹಿತ್ಯವೆಲ್ಲ ಸಂಸ್ಕೃತ ಭಾಷೆಯಲ್ಲಿದ್ದದ್ದನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.
ಧಾರವಾಡ:
ಜಾಗತಿಕ ಜ್ಞಾನ ವಿನಿಮಯದಲ್ಲಿ ಅನುವಾದದ ಪಾತ್ರ ಮಹತ್ವದ್ದು. ಅದು ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ ಎಂದು ಎಮರಿಟಸ್ ಪ್ರಾಧ್ಯಾಪಕ ಪ್ರೊ. ಸಿ.ಆರ್. ಯರವಿನತೆಲಿಮಠ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಮಲ್ಲಿಕಾರ್ಜುನ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ `ಅನುವಾದ ಒಂದು ಕಲೆ’ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಅನುವಾದಕರಿಗೆ ಕನಿಷ್ಠ ಎರಡು ಭಾಷೆಗಳಲ್ಲಿ ಪ್ರಭುತ್ವ ಹಾಗೂ ಪಾಂಡಿತ್ಯ ಇರಲೇಬೇಕು. ಅನುವಾದಕ್ಕೆ ತನ್ನದೇ ಆದ ಇತಿಮಿತಿಗಳಿರುತ್ತವೆ. ಪ್ರಾಚೀನ ಸಾಹಿತ್ಯವೆಲ್ಲ ಸಂಸ್ಕೃತ ಭಾಷೆಯಲ್ಲಿದ್ದದ್ದನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಇಂದೂ ಅನುವಾದ ಕಾರ್ಯ ನಿಂತಿಲ್ಲ. ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಲ್ಲರ ಕೃತಿಗಳು ಸೇರಿದಂತೆ ವಚನ ಸಾಹಿತ್ಯದ ಮೇರು ಕೃತಿ ಶೂನ್ಯ ಸಂಪಾದನೆಯೂ ಆಂಗ್ಲ ಭಾಷೆಗೆ ಅನುವಾದಿಸಿದ್ದರಿಂದ ಬಸವಾದಿ ಶರಣರ ವಚನಗಳ ಸಾರ ವಿದೇಶಿಯರಿಗೂ ತಿಳಿಸುವ ಕಾರ್ಯ ಮಾಡಲಾಗಿದೆ ಎಂದರು.ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಅನುವಾದ ಒಂದು ಭಾಷೆ ಹಾಗೂ ಸಂಸ್ಕೃತಿಯನ್ನು ಇನ್ನೊಂದು ಭಾಷೆಗೆ ಬೆಸೆಯುವ ಪ್ರಮುಖ ಕಾರ್ಯ ಮಾಡುತ್ತದೆ. ಅನುವಾದ ಮಾಡುವವನಿಗೆ ಶಬ್ದಕೋಶದ ಜ್ಞಾನವಿರಬೇಕು. ನಾವು ಹಿಂದೆ ಕಳೆದುಕೊಂಡ ಜ್ಞಾನವನ್ನು ಅನುವಾದದಿಂದ ಮತ್ತೆ ಪಡೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ್ ಕಾಲೇಜಿನ ಪ್ರಾಚಾರ್ಯ ಎಂ.ಎ. ಸಿದ್ಧಾಂತಿ ಮಾತನಾಡಿ, ಅನುವಾದಕನಿಗೆ ಮೊದಲು ತನ್ನ ಮಾತೃಭಾಷೆಯ ಬಗ್ಗೆ ಪ್ರಭುತ್ವ ಬೇಕು. ಮೂಲ ಲೇಖಕನ ಆಲೋಚನೆ ಸಾಹಿತ್ಯ ಶೈಲಿ ಅನುವಾದಕ ಉಳಿಸಿಕೊಂಡು ಬರಬೇಕು. ಬಿ.ಎಂ. ಶ್ರೀ ಅವರ ಅನೇಕ ಕೃತಿಗಳು ಅನುವಾದ ಕ್ಷೇತ್ರಕ್ಕೆ ಅದ್ಭುತ ಕೊಡುಗೆಗಳು ಎಂದರು.ದತ್ತಿ ದಾನಿ ಡಾ. ನಂದಾ ಪಾಟೀಲ ಇದ್ದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಸಿದರು. ಗುರು ಹಿರೇಮಠ ನಿರ್ವಹಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.