ಸಾರಾಂಶ
ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ ಅವರನ್ನು ಅಭಿನಂದಿಸಲಾಯಿತು.
ಕನ್ನಡಪ್ರಭವಾರ್ತೆ ಸಾಗರ
ಆರ್ಥಿಕ ವಹಿವಾಟು ಇರುವ ಸಂಘಟನೆಗಳು ಪಾರದರ್ಶಕವಾಗಿ ಕೆಲಸ ಮಾಡಿದರೆ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ ಅಭಿಪ್ರಾಯಪಟ್ಟರು.ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅನೇಕ ಸಹಕಾರಿ ಸಂಸ್ಥೆಗಳಿಂದ ಜನರು ಮೋಸ ಹೋಗಿರುತ್ತಾರೆ. ಕೆಲವು ಸಂಘಗಳಲ್ಲಿ ಹಣ ತೊಡಗಿಸಿ ಕಳೆದುಕೊಳ್ಳುತ್ತಾರೆ. ಇಂತಹ ಅಪವಾದಗಳಿಂದ ಹೊರತಾಗಿ ಶಿಕ್ಷಕರ ಸಹಕಾರ ಸಂಘವು ಕೆಲಸ ಮಾಡಬೇಕು. ಹೆಚ್ಚು ಶಿಕ್ಷಕರು ಇದರೊಳಗೆ ಪಾಲ್ಗೊಳ್ಳುವಂತೆ ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಅನೇಕ ಸವಾಲು ಎದುರಿಸಿ ಶಿಕ್ಷಕರ ಸೌಹಾರ್ದ ಸಹಕಾರಿ ಸದೃಢವಾಗಿ ಬೆಳೆದು ನಿಂತಿದೆ. ತಾಲೂಕಿನ ಎಲ್ಲ ಶಿಕ್ಷಕರು ಷೇರು ಹಾಕುವ ಮೂಲಕ ಇನ್ನಷ್ಟು ಆರ್ಥಿಕ ಶಕ್ತಿ ತುಂಬಬೇಕು. ಶಿಕ್ಷಕರಲ್ಲಿ ಆರ್ಥಿಕ ಚೈತನ್ಯ ತುಂಬಲು ಇಂತಹ ಸಂಘಟನೆ ಅಗತ್ಯ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿ, ಆರ್ಥಿಕ ಶಿಸ್ತು ಕಾಪಾಡಿಕೊಂಡಷ್ಟು ಸಹಕಾರಿ ಸಂಘಗಳು ಹೆಚ್ಚು ಜನರನ್ನು ತಲುಪುತ್ತದೆ. ಯಾವುದೇ ಮುಲಾಜಿಗೆ ಒಳಗಾಗದೆ ಆಡಳಿತ ಮಂಡಳಿ ಕೆಲಸ ಮಾಡಬೇಕು ಎಂದು ಹೇಳಿದರು.ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರಪ್ಪ ಅಧ್ಯಕ್ಷತೆ ವಹಿಸಿದ್ದರು. ಚಂದ್ರಪ್ಪ ಈಳಿ, ಭೂಮೇಶ್, ರಮೇಶ್ ಎನ್.ಕೆ, ಜಗನ್ನಾಥ್ ಕೆ, ದಿನೇಶ್, ವಿಕ್ಟೋರಿಯಾ ಫುಟಾರ್ಡೋ, ಗವಿಯಪ್ಪ ಎಲ್.ಟಿ, ಹೂವಪ್ಪ, ಕವಿರಾಜ್, ಮಂಜುನಾಥ್, ಬಸವರಾಜ್ ಹಾಜರಿದ್ದರು. ಮಹೇಶ್ ಎಚ್.ಬಿ. ಸ್ವಾಗತಿಸಿ, ಮೂರ್ತಿ ಎಂ.ವೈ. ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ವಂದಿಸಿ, ಯಶೋಧರ ಮತ್ತು ನೇತ್ರಾವತಿ ನಿರೂಪಿಸಿದರು.