ಶಿರಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವತಿಯಿಂದ ಗುರುವಾರ ಶಿರಸಿಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಕೀಲುಮೂಳೆ ವ್ಯಾಧಿಗಳು ವಯೋಮಿತ್ರ ಆಯುಷ್ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಶಿರಸಿ: ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ, ಮೆಕ್ಯಾನಿಕ್ಗಳು ದೀರ್ಘಾವಧಿ ಕರ್ತವ್ಯ ನಿರ್ವಹಿಸುವುದರಿಂದ ಆಹಾರ, ವಿಹಾರ, ವಿಚಾರದಲ್ಲಿ ವ್ಯತ್ಯಯವಾಗುವುದರಿಂದ ಶಾರೀರಿಕ, ಮಾನಸಿಕ ಒತ್ತಡಕ್ಕೆ ಸಿಲುಕುವುದರಿಂದ ಆರೋಗ್ಯದ ಕಾಳಜಿ ವಹಿಸಬೇಕು, ಪ್ರಾಣಾಯಾಮ, ಯೋಗಾಸನ, ಧ್ಯಾನ ಮಾಡುವುದು ಉತ್ತಮ, ಜತೆಗೆ ದಿನಚರ್ಯ, ಋತುಚರ್ಯ, ಹಿತಮಿತ ಆಹಾರ ವಿಧಾನ ಅನುಸರಿಸಬೇಕೆಂದು ಉತ್ತರ ಕನ್ನಡ ಆಯುಷ್ ಜಿಲ್ಲಾ ಪ್ರಭಾರ ಅಧಿಕಾರಿ ಡಾ. ಜಗದೀಶ ಯಾಜಿ ವಿ. ಹೇಳಿದರು.
ರಾಷ್ಟ್ರೀಯ ಆಯುಷ್ ಅಭಿಯಾನದಡಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆ ಹಾಗೂ ಶಿರಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವತಿಯಿಂದ ಗುರುವಾರ ಶಿರಸಿಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕೀಲುಮೂಳೆ ವ್ಯಾಧಿಗಳು ವಯೋಮಿತ್ರ ಆಯುಷ್ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸಾರಿಗೆ ಸಂಸ್ಥೆ ಮೆಕ್ಯಾನಿಕ್, ಡ್ರೈವರ್ಗಳಿಗೆಲ್ಲ ಕತ್ತಿನ ನೋವು, ಭುಜ, ಸೊಂಟ, ಮಂಡಿ ನೋವು ಹೆಚ್ಚಾಗಿ ಕಂಡು ಬರುತ್ತಿದೆ. ನಿರ್ವಾಹಕರಿಗೆ ವೆರಿಕೋಸ್, ಮಂಡಿ ನೋವು ಸರ್ವೇಸಾಮಾನ್ಯ. ಆರೋಗ್ಯ ರಕ್ಷಣೆಗೋಸ್ಕರ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದು, ಶಾರೀರಿಕ ಹಾಗೂ ಮಾನಸಿಕ ಒತ್ತಡದಿಂದ ಪಾರಾಗಲು ಯೋಗಾಸನ, ಪ್ರಾಣಾಯಾಮ, ಧ್ಯಾನ ಸಹಕಾರಿ.‘‘ಸ್ವಾಸ್ಥ್ಯಸ್ಯ ಸ್ವಾಸ್ಥ್ಯರಕ್ಷಣಮ್ ಆತುರಸ್ಯ ವಿಕಾರ ಪ್ರಶಮನಮ್’’ ಎನ್ನುವುದು ಆಯುರ್ವೇದದ ಧ್ಯೇಯ ವಾಕ್ಯ, ಅಂದರೆ ಆರೋಗ್ಯವಂತರಾಗಿ ಬಾಳಲು ದಿನಚರ್ಯ, ಋತುಚರ್ಯ, ಹಿತ, ಮಿತ ಆಹಾರ, ವಿಹಾರ ಅನುಸರಿಸಬೇಕು. ರೋಗ ಬಂದಾಗ ವೈದ್ಯರಲ್ಲಿ ಔಷಧೋಪಚಾರ, ಪಂಚಕರ್ಮ ಚಿಕಿತ್ಸೆ ಅತ್ಯಗತ್ಯ ಎಂದು ಡಾ. ಜಗದೀಶ ಯಾಜಿ ಹೇಳಿದರು.
ಒಕ್ಕೂಟದ ಅಧ್ಯಕ್ಷ ಸರ್ವೇಶ ನಾಯ್ಕ ಸ್ವಾಗತಿಸಿ, ಶಿರಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಕುರಿತು ಶ್ಲಾಘಿಸಿದರು.ಸಾರಿಗೆ ಸಂಸ್ಥೆ ಡಿಪೋದ ತಾಂತ್ರಿಕ ಶಿಲ್ಪಿಗಳಾದ ಚಂದ್ರಶೇಖರ ಲೋಖಂಡೆ ಹಾಗೂ ಅಧಿಕಾರಿ ವೃಂದದವರು ಕಾರ್ಯಕ್ರಮಕ್ಕೆ ಶುಭ ಕೋರಿದರು.ಯೋಗ ತರಬೇತುದಾರರಾದ ವಾಣಿ ಭಟ್, ಕತ್ತು, ಬೆನ್ನಿನ ನೋವಿಗೆ ಅನುಕೂಲವಾದ ಯೋಗಾಸನಗಳನ್ನು ಸುಲಭವಾಗಿ ಮಾಡುವ ವಿಧಾನದ ಪ್ರಾತ್ಯಕ್ಷಿಕೆ ಮಾಡಿ ತೋರಿಸಿ. ಪ್ರಾಣಾಯಾಮದ ಮಹತ್ವ ತಿಳಿಸಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಯೋಗ, ಪ್ರಾಣಾಯಾಮ ಮಾಡಿಸಿದರು.ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಜಗದೀಶ ಯಾಜಿ ವಿ., ತಜ್ಞ ವೈದ್ಯರಾದ ಡಾ. ಭಾಗ್ಯಲಕ್ಷ್ಮೀ ಕೆ., ವೈದ್ಯರಾದ ಡಾ. ರಾಜೇಶ್ವರಿ ಗಾಂವಕಾರ ಅವರಿಂದ ಆರೋಗ್ಯ ತಪಾಸಣೆ ನಡೆಯಿತು. ಔಷಧಿ ಅಧಿಕಾರಿ ಜಿ.ಬಿ. ಕೃಷ್ಣಮೂರ್ತಿ ಹಾಗೂ ಔಷಧಿ ವಿತರಕರಾದ ಪ್ರತಿಮಾ ಔಷಧಿ ವಿತರಿಸಿದರು. ಆರ್.ಎಲ್. ಕುಮಾರಸ್ವಾಮಿ, ಜಯಪ್ಪ ಮಳಗಿ, ರವೀಂದ್ರ ಭಟ್, ಅರವಿಂದ ಪಿ. ನಾಯ್ಕ, ನವೀನ, ಮಂಜುನಾಥ ಎಲ್. ನಾಯ್ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಆಸ್ಪತ್ರೆಯ ಸಿಬ್ಬಂದಿ ರೇಣುಕಾ ವಿ. ನಾಯ್ಕ, ವಿಜಯಲಕ್ಷ್ಮೀ ಮಡಿವಾಳ, ಸಚಿನಯ ನಾಯ್ಕ ಹಾಗೂ ಆಶಾ ಕಾರ್ಯಕರ್ತರಾದ ಕಲ್ಪನಾ ರೇವಣಕರ ವಯೋಮಿತ್ರ ಶಿಬಿರ ಯಶಸ್ವಿಗೊಳಿಸಲು ಸಹಕರಿಸಿದರು.
ಶಿಬಿರದಲ್ಲಿ ಒಟ್ಟು 133 ಅಧಿಕಾರಿ ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿ ಔಷಧಿ ವಿತರಿಸಲಾಯಿತು. ಸತತವಾಗಿ ಕುತ್ತಿಗೆ, ಭುಜ, ಸೊಂಟ, ಮಂಡಿನೋವು ಅನುಭವಿಸುತ್ತಿರುವ ಸಿಬ್ಬಂದಿಗೆ ಶಿರಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದರು.