ಕನ್ನಡಪ್ರಭ ವಾರ್ತೆ ತುಮಕೂರುಪುಸ್ತಕಗಳನ್ನು ಸಗಟಾಗಿ ಖರೀದಿ ಮಾಡುವ ಗ್ರಂಥಾಲಯ ಇಲಾಖೆಯಲ್ಲಿ ಸಗಟು ಸಮಸ್ಯೆಗಳಿವೆ. ಈ ಇಲಾಖೆಗೆ ಚಿಕಿತ್ಸೆ ನೀಡಿ ಜೀವಂತಗೊಳಿಸುವ ಕೆಲಸವಾಗಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು. ನಗರದ ಅಮಾಜಿಕೆರೆ ಅಂಗಳದ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವೀರಲೋಕ ಪುಸ್ತಕ ಸಂತೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಂಥಾಲಯ ಇಲಾಖೆಯನ್ನು ಸತ್ವಯುತಗೊಳಿಸಿ ಲೇಖಕರನ್ನು ಉಳಿಸುವ, ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಸಾಧ್ಯವಿದೆ. ಆದರೆ ಯಾವ ಸರ್ಕಾರಗಳೂ, ಗ್ರಂಥಾಲಯ ಇಲಾಖೆ ಮಂತ್ರಿಗಳೂ ಅಂತಹ ಕಾಳಜಿ ತೋರಿಸಿಲ್ಲ. ಸಾಹಿತ್ಯ, ಪುಸ್ತಕ ಸಂಸ್ಕೃತಿಯನ್ನು ಮೆರೆಯಬಹುದಾಗಿದ್ದ ಗ್ರಂಥಾಲಯ ಇಲಾಖೆ ಯಾರಿಗೂ ಬೇಡವಾದ ನಿರ್ಲಕ್ಷಿತ ಇಲಾಖೆಯಾಗಿದೆ. ಸರ್ಕಾರ ಇನ್ನಾದರೂ ಇಲಾಖೆಯನ್ನು ಸತ್ವಯುತಗೊಳಸಬೇಕು ಎಂದು ಹೇಳಿದರು.

ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ವರ್ಷದಲ್ಲಿ ಸುಮಾರು ಏಳು ನೂರು ಹೊಸ ಪುಸ್ತಕಗಳ ಮುದ್ರಣವಾಗುತ್ತವೆ. ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಸಗಟಾಗಿ ಖರೀದಿ ಮಾಡುತ್ತದೆ ಎಂಬ ನಂಬಿಕೆಯಿಂದ ಹೊಸ ಪುಸ್ತಕಗಳು ಪ್ರಕಾಶನಗೊಳ್ಳುತ್ತಿವೆ. ಇಲಾಖೆಯಲ್ಲಿ ನಿರೀಕ್ಷಿಸಿದ ಸಹಕಾರ ಸಿಗುತ್ತಿಲ್ಲ. ಇಲಾಖೆಯಿಂದ ಆಗಬೇಕಾದ ಜವಾಬ್ದಾರಿಯುತ ಕೆಲಸಗಳೂ ಆಗುತ್ತಿಲ್ಲ ಎಂದರು.ತಂತ್ರಜ್ಞಾನದಿಂದ ಪುಸ್ತಕ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತಂತ್ರಜ್ಞಾನ ಯುಗಎಂಬುದು ಉದ್ಯಮಪತಿಗಳ ಸೃಸ್ಟಿ. ನಿಜವಾದ ಸಾಂಸ್ಕೃತಿಕ ಯುಗ ಜನ ಸಾಮಾನ್ಯರ ಬದುಕಿನಲ್ಲಿದೆ. ತಂತ್ರಜ್ಞಾನದಿಂದ ಹೊಸ ಆವಿಷ್ಕಾರ, ಹೊಸ ಸವಾಲುಗಳ ಸೃಷ್ಠಿಯಾಗಬಹುದು. ಅವುಗಳನ್ನು ಸವಾಲಾಗಿ ಸ್ವೀಕರಿಸಿ ಹೋಗಬೇಕು. ತಂತ್ರಜ್ಞಾನದ ಶಕ್ತಿ ಎದುರು ಮನುಷ್ಯ ಶಕ್ತಿ ಕೀಳು ಎಂದರೆ ಮಾನವನ ಶಕ್ತಿಗೆ ಮಾಡುವ ಅಪಮಾನ ಎಂದು ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಪುಸ್ತಕ ಸಂತೆ ಉದ್ಘಾಟಿಸಿದ ಹಿರಿಯ ಸಾಹಿತಿ, ನಾಡೋಜ ಹಂ.ಪ. ನಾಗರಾಜಯ್ಯ ಮಾತನಾಡಿ, ಪುಸ್ತಕ ಸಂತೆ ಎಂಬ ಪರಿಕಲ್ಪನೆ ರೋಮಾಂಚನವಾದದ್ದು. ಪುಸ್ತಕವನ್ನುಓದುಗರ ಬಳಿಗೆ ತೆಗೆದುಕೊಂಡುಬರುವ ಪುಸ್ತಕ ಸಂತೆಯನ್ನು ವೀರಕಪುತ್ರ ಶ್ರೀನಿವಾಸ್ ಮಾಡುತ್ತಾಕನ್ನಡ ಪುಸ್ತಕ ಲೋಕಕ್ಕೆ ದೊಡ್ಡಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಸಾಮಾಜಿಕ ಜಾಲತಾಣಗಳ ಆಕರ್ಷಣೆಯ ಈ ಕಾಲದಲ್ಲಿ ಪುಸ್ತಕ ಓದುವ, ನೋಡುವ, ಮುಟ್ಟುವ, ಕೊಂಡು ಮನೆಗೆ ತರುವ ಹಳೆ ಪದ್ದತಿ ಮರೆಯಾಗುತ್ತಿದೆ. ಅದನ್ನು ಯುವಜನರಲ್ಲಿ ರೂಢಿ ಮಾಡಬೇಕು. ಪುಸ್ತಕ ಓದುವ ಸಂಸ್ಕೃತಿಯನ್ನು ಹೊಸ ತಲೆಮಾರಿಗೆ ಬೆಳೆಸಬೇಕು. ಯುವ ಮನಸ್ಸುಗಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದು ಹೇಳಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಪುಸ್ತಕ ಸಂಸ್ಕೃತಿ ನಮ್ಮ ದೈನಂದಿನ ಜೀವನದ ಪದ್ದತಿಯಾಗಬೇಕು. ಮನೆಯಲ್ಲಿ ಹಿರಿಯರು ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲೂ ಅದನ್ನು ಬೆಳೆಸಬೇಕು.ಪುಸ್ತಕ ಸಂತೆಗೆಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆತರಬೇಕುಎಂದು ಹೇಳಿದರು.ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಶಾಲೆಗಳ ಪ್ರಾರ್ಥನೆ ಅವಧಿಯಲ್ಲಿ ವಿದ್ಯಾರ್ಥಿಗಳು ದಿನಪತ್ರಿಕೆಗಳ ಹೆಡ್‌ಲೈನ್‌ಓದುವ ಪದ್ದತಿಯನ್ನು ಸರ್ಕಾರಕಡ್ಡಾಯ ಮಾಡಿದೆ. ಇದು ವಿದ್ಯಾರ್ಥಿಗಳಲ್ಲಿ ಪತ್ರಿಕೆ, ಪುಸ್ತಕ ಓದುವ ಆಸಕ್ತಿ ಬೆಳೆಸಲು ಸಹಕಾರಿಯಾಗಿದೆ. ಮಕ್ಕಳನ್ನು ಪುಸ್ತಕ ಓದಿನ ಕಡೆಗೆಆಕರ್ಷಿಸಬೇಕು.ಅಂತಹ ಪುಸ್ತಕಗಳೂ ಹೊರಬರಬೇಕು.ಪಠ್ಯಪುಸ್ತಕದಜೊತೆ ವಿವಿಧ ವಿಷಯಗಳ ಪುಸ್ತಕ ಓದುವ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಬಹುದುಎಂದು ಹೇಳಿದರು. ಪುಸ್ತಕ ಸಂತೆಯರೂವಾರಿ ವೀರಕಪುತ್ರ ಶ್ರೀನಿವಾಸ್, ಸಂಚಾಲಕ ಆರ್.ಕೆ.ಶ್ರೀನಿವಾಸ್, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷಕೆ.ಎಸ್. ಸಿದ್ಧಲಿಂಗಪ್ಪ, ಪತ್ರಕರ್ತ ಡಾ.ಎಸ್. ನಾಗಣ್ಣ, ಸ್ಫೂರ್ತಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕಎಸ್.ಪಿ.ಚಿದಾನಂದ್ ಮೊದಲಾದವರು ಭಾಗವಹಿಸಿದ್ದರು.ಮೂರು ದಿನಗಳ ಪುಸ್ತಕ ಸಂತೆಯಲ್ಲಿ 60 ಕ್ಕೂ ಹೆಚ್ಚು ಮಳಿಗೆಗೆಗಳನ್ನು ತೆರೆಯಲಾಗಿದೆ.150 ಕ್ಕೂ ಹೆಚ್ಚು ಲೇಖಕರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವರು.ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.