ಕುಷ್ಠರೋಗದ ಗುಣಲಕ್ಷಣಗಳನ್ನು ಹೊಂದಿರುವವರು ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಹಾತ್ಮ ಗಾಂಧೀಜಿ ಅವರು ಕುಷ್ಠರೋಗ ನಿರ್ಮೂಲನೆಗಾಗಿ ಹೋರಾಡಿದವರು, ಅವರ ಪುಣ್ಯಸ್ಮರಣೆಯ ದಿನದಂದು ಕುಷ್ಠರೋಗ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕುಷ್ಠರೋಗಿಗಳನ್ನು ಸಾಮಾಜಿಕವಾಗಿ ತಾರತಮ್ಯದಿಂದ ಕಾಣದೆ ಘನತೆಯಿಂದ ಕಾಣಬೇಕು ಎಂಬ ಅರಿವು ಮೂಡಿಸಲು ಜಾಥಾ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ‘ತಾರತಮ್ಯವನ್ನು ಕೊನೆಗೊಳಿಸುವುದು ಘನತೆಯನ್ನು ಕಾಪಾಡುವುದು’ ಎಂಬ ಘೋಷವಾಕ್ಯದಡಿ ಆಯೋಜಿಸಲಾಗಿದ್ದ ಕುಷ್ಠರೋಗ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಕುಷ್ಠರೋಗದ ಗುಣಲಕ್ಷಣಗಳನ್ನು ಹೊಂದಿರುವವರು ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಹಾತ್ಮ ಗಾಂಧೀಜಿ ಅವರು ಕುಷ್ಠರೋಗ ನಿರ್ಮೂಲನೆಗಾಗಿ ಹೋರಾಡಿದವರು, ಅವರ ಪುಣ್ಯಸ್ಮರಣೆಯ ದಿನದಂದು ಕುಷ್ಠರೋಗ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಕುಷ್ಠರೋಗದ ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಇದರ ಮುಖ್ಯ ಉದ್ದೇಶ ಕುಷ್ಠರೋಗಿಗಳನ್ನು ಸಮಾಜದಲ್ಲಿ ಘನತೆಯಿಂದ ಕಾಣುವುದು ಹಾಗೂ ಗೌರವಯುತವಾಗಿ ನಡೆಸಿಕೊಳ್ಳುವುದಾಗಿದೆ. ಅದರಲ್ಲೂ ಮುಖ್ಯವಾಗಿ ಕುಟುಂಬದವರು ಕುಷ್ಠರೋಗಿಗಳನ್ನು ಉತ್ತಮವಾಗಿ ಕಂಡಾಗ ಮಾತ್ರ ಕುಷ್ಠರೋಗಿಗಳು ಮಾನಸಿಕವಾಗಿ ಕುಗ್ಗದೆ ಸಮಾಜದಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಂ.ಎನ್. ಆಶಾಲತಾ, ಆರ್.ಸಿ.ಎಚ್. ಅಧಿಕಾರಿ ಡಾ.ಕೆ.ಪಿ. ಅಶ್ವಥ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ಆರೋಗ್ಯ ನಿರೀಕ್ಷಣಾಧಿಕಾರಿ ವೇಣುಗೋಪಾಲ್, ಕಿತ್ತೂರು ರಾಣಿಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.ಇಂದು ನಟಿ ರಂಜನಿ ರಾಘವನ್ ಜೊತೆ ಆಪ್ತಸಂವಾದ
ಕನ್ನಡಪ್ರಭ ವಾರ್ತೆ ಮಂಡ್ಯಸಾಹಿತ್ಯ ಮತ್ತು ಸಂಸ್ಕೃತಿಯ ಸಂವೇದನಾಶೀಲತೆಯನ್ನು ಪಸರಿಸುವ ಉದ್ದೇಶದಿಂದ ಸ್ಥಾಪಿತಗೊಂಡಿರುವ ಕನ್ನಡ ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಹಯೋಗದಲ್ಲಿ ಫೆ.೧ರಂದು ಗಾಂಧಿ ಭವನದಲ್ಲಿ ಬೆಳಗ್ಗೆ ೧೦.೩೦ಕ್ಕೆ ನಟಿ, ಲೇಖಕಿ ರಂಜನಿ ರಾಘವನ್ ಅವರೊಂದಿಗೆ ಆಪ್ತ ಸಂವಾದ ಏರ್ಪಡಿಸಲಾಗಿದೆ. ರಂಜನಿ ರಾಘವನ್ ಅವರ ಜನಪ್ರಿಯ ಕೃತಿ ಕಥೆ ಡಬ್ಬಿ ಆಧಾರಿತವಾಗಿ ಈ ಸಂವಾದ ನಡೆಯಲಿದೆ. ಕೃತಿಯೊಂದಿಗೆ ಅವರ ಒಟ್ಟಾರೆ ಸಾಹಿತ್ಯ ಕೃಷಿ, ಸಮಕಾಲೀನ ಸಾಹಿತ್ಯದ ಸಂದರ್ಭದ ಕುರಿತು ಆಳವಾದ ಸಂವಾದ ನಡೆಸಲಾಗುವುದು. ಲೇಖಕ ಎಂ.ಜಿ.ವಿನಯ್ಕುಮಾರ್ ಅವರು ಸಂವಾದ ನಡೆಸಿಕೊಡಲಿದ್ದಾರೆ.