ತಾಯಿ ಮಗುವಿನ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ತಜ್ಞರು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ, ಪ್ರಾಣ ಕಂಟಕ ಸ್ಥಿತಿಯಲ್ಲಿದ್ದ ಗರ್ಭಿಣಿ ಸ್ತ್ರೀ ಓರ್ವರ ಜೀವ ರಕ್ಷಣೆ ಮಾಡಿದ್ದಾರೆ.

ಮಂಗಳೂರು : ತಾಯಿ ಮಗುವಿನ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ತಜ್ಞರು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ, ಪ್ರಾಣ ಕಂಟಕ ಸ್ಥಿತಿಯಲ್ಲಿದ್ದ ಗರ್ಭಿಣಿ ಸ್ತ್ರೀ ಓರ್ವರ ಜೀವ ರಕ್ಷಣೆ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಏಳು ತಿಂಗಳ ಗರ್ಭಿಣಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಹಾಯ ಯಾಚಿಸಿದ್ದರು. ಅಸಹಜ ಮತ್ತು ಅಕಾಲಿಕ ವೇದನೆಯ ಗಂಭೀರತೆ ಅರಿತ ಖಾಸಗಿ ಆಸ್ಪತ್ರೆ ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಮಹಿಳೆಯನ್ನು ಕಳುಹಿಸಿದ್ದರು.

ಪರೀಕ್ಷೆ ವೇಳೆ ಉದರದಲ್ಲಿ ರಕ್ತಸ್ರಾವ ಆಗಿರುವುದು ಪತ್ತೆಯಾಗಿತ್ತು. ಇದೇ ವೇಳೆ ಮಹಿಳೆಯ ಹಿಮೋಗ್ಲೋಬಿನ್ ಅಂಶ ಕನಿಷ್ಠ 6 ಗ್ರಾಂಗಳಿಗೆ ಇಳಿದು, ರಕ್ತದಲ್ಲಿ ಆಮ್ಲಜನಕವೂ ಕೂಡಾ ಗಂಭೀರ ಸ್ಥಿತಿಯ ಕೆಳಮಟ್ಟಕ್ಕೆ ಇಳಿಯಲಾರಂಬಿಸಿತ್ತು. ಈ ವೇಳೆ ಲೇಡಿಗೋಶನ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರು ಅಂಬುಲೆನ್ಸ್‌ನಲ್ಲಿ ರೋಗಿಯ ಜೊತೆಗೂಡಿ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಸಂಬಂಧಿತ ಎಂಆರ್‌ಐ ಪರೀಕ್ಷೆ ಮಾಡಿಸಿ ಶಸ್ತ್ರಚಿಕಿತ್ಸೆಯ ಅಗತ್ಯ ಇರುತ್ತದೆ. ಶಸ್ತ್ರಚಿಕಿತ್ಸಾ ನಂತರ ಐಸಿಯು ಅವಶ್ಯಕತೆ ಇದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಲಭ್ಯತೆ ಇರಲಿಲ್ಲ. ಲೇಡಿಗೋಷನ್ ತಂಡ ಮಹಿಳೆಯನ್ನು ಲೇಡಿಗೋಷನ್ ಆಸ್ಪತ್ರೆಗೆ ಮರಳಿ ಕರೆತಂದು ಚಿಕಿತ್ಸೆ ಮುಂದುವರಿಸಿದರು.

ಶಸ್ತಚಿಕಿತ್ಸೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಅನಿಯಂತ್ರಿತ ರಕ್ತಸ್ರಾವದಿಂದಾಗಿ ನೂರಕ್ಕೆ ನೂರು ತಾಯಿ ಮರಣ ಸಂಭವಿಸಿದ ಸಂದರ್ಭಗಳೇ ಹೆಚ್ಚು. ಇಂತಹ ಸನ್ನಿವೇಶಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮಲ್ಟಿ ಡಿಸಿಪ್ಲಿನರಿ ಅಪ್ರೋಚ್ ಮಾದರಿಯನ್ನು ಕಳೆದ ಒಂದೂವರೆ ವರ್ಷದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪಾಲಿಸಲಾಗುತ್ತಿದೆ.

ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಪ್ರಾತಃಕಾಲ ಸುಮಾರು 5 ಗಂಟೆಗೆ ಪ್ರಾರಂಭವಾದ ಶಸ್ತ್ರಚಿಕಿತ್ಸೆ ಬೆಳಗ್ಗೆ 9 ಗಂಟೆಯವರೆಗೆ ನಡೆದು ಯಶಸ್ವಿಯಾಯಿತು.

ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಮೇಲುಸ್ತುವಾರಿಯಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್, ಹಿರಿಯ ಪ್ರಸೂತಿ ತಜ್ಞ ಡಾ.ದಯಾನಂದ್ ಸಹಕಾರದೊಂದಿಗೆ ಕೆ.ಎಂ.ಸಿ. ಪ್ರಸೂತಿ ತಜ್ಞರಾದ ಡಾ.ಭಾರತಿ, ಡಾ.ವಿನೀತಾ ಶೆಟ್ಟಿ, ಮೂತ್ರರೋಗ ತಜ್ಞ ಶಸ್ತ್ರ ಚಿಕಿತ್ಸಕರಾದ ಡಾ.ಸದಾನಂದ ಪೂಜಾರಿ, ಡಾ.ಪ್ರಮೋದ್, ಜನರಲ್ ಸರ್ಜನ್ ಡಾ.ಅಕ್ಷಿತ್, ಅರಿವಳಿಕೆ ತಜ್ಞರಾದ ಡಾ.ರಂಜನ್, ಡಾ.ರಕ್ಷಿತಾ, ಶುಶ್ರೂಷಕರಾದ ಜಲಜ, ಅಶ್ವಿನಿ, ವಿನೀತಾ, ರೇವತಿ, ಸಿಂಧು, ಅಡ್ವಾನ್ಸ್ಡ್ ಲೈಫ್ ಸೇವಿಂಗ್ ಅಂಬುಲೆನ್ಸ್ ಚಾಲಕ ಹರೀಶ್ ಚಿಕಿತ್ಸಾ ತಂಡದಲ್ಲಿದ್ದರು.