ಸಾರ್ವಜನಿಕ ಆರೋಗ್ಯಕ್ಕೆ ಹಾನಿಹಾರಕವಾಗಬಲ್ಲ ಅಕ್ರಮ ಆನ್ಲೈನ್ ಔಷಧಿಗಳ ಮಾರಾಟದ ಬಗ್ಗೆ ತಕ್ಷಣ ಹಸ್ತಕ್ಷೇಪ ಮಾಡಿ ಸಣ್ಣ ಔಷಧಿ ವ್ಯಾಪಾರಿಗಳ ರಕ್ಷಣೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಔಷಧಿ ವ್ಯಾಪಾರಿಗಳು ಬುಧವಾರ ನಗರದಲ್ಲಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಿ, ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಸಾರ್ವಜನಿಕ ಆರೋಗ್ಯಕ್ಕೆ ಹಾನಿಹಾರಕವಾಗಬಲ್ಲ ಅಕ್ರಮ ಆನ್ಲೈನ್ ಔಷಧಿಗಳ ಮಾರಾಟದ ಬಗ್ಗೆ ತಕ್ಷಣ ಹಸ್ತಕ್ಷೇಪ ಮಾಡಿ ಸಣ್ಣ ಔಷಧಿ ವ್ಯಾಪಾರಿಗಳ ರಕ್ಷಣೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಔಷಧಿ ವ್ಯಾಪಾರಿಗಳು ಬುಧವಾರ ನಗರದಲ್ಲಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಿ, ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಜಗಜ್ಯೋತಿ ಬಸವೇಶ್ವರ ಸರ್ಕಲ್ (ಕೋರ್ಟ್ ಸರ್ಕಲ್), ಪುನೀತ್ ರಾಜಕುಮಾರ ಸರ್ಕಲ್, ಪೋಸ್ಟ್ ಸರ್ಕಲ್, ಎಂ.ಜಿ. ರಸ್ತೆ, ಕುರುಬಗೇರಿ ಕ್ರಾಸ್, ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ಸಾಗಿ ಬಂದರು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಅಂತರ್ಜಾಲದಲ್ಲಿ ಔಷಧಿಗಳ ಮಾರಾಟ ಕಾನೂನುಬಾಹಿರವಾಗಿದ್ದು, ಅದರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ಮನವಿ ಮಾಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ವೈದ್ಯಕೀಯ ಸಮಾಲೋಚನೆ ಇಲ್ಲದೆ ಮನೆ ಬಾಗಿಲಿಗೆ ಔಷಧಿಗಳ ವಿತರಣೆ ಮತ್ತು ಅತಿಯಾದ ರಿಯಾಯಿತಿ ಪದ್ಧತಿಗಳು ಕೋಟ್ಯಂತರ ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮಾತ್ರವಲ್ಲದೆ ದೇಶಾದ್ಯಂತ ಲಕ್ಷಾಂತರ ಪರವಾನಗಿ ಪಡೆದ ಕೆಮಿಸ್ಟ್ ಮತ್ತು ಔಷಧಿಕಾರರ ಉಳಿವಿಗೂ ಗಂಭೀರ ಅಪಾಯ ಉಂಟು ಮಾಡುತ್ತಿದೆ. ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆ, 1940 ಮತ್ತು ನಿಯಮಗಳು, 1945ರ ಅಡಿಯಲ್ಲಿ ಆನ್ಲೈನ್ನಲ್ಲಿ ಔಷಧಿಗಳ ಮಾರಾಟಕ್ಕೆ ಸ್ಪಷ್ಟ ನಿಬಂಧನೆ ಇಲ್ಲದಿದ್ದರೂ, ವಿವಿಧ ಆನ್ಲೈನ್ ಕಂಪನಿಗಳು ಹಲವಾರು ವರ್ಷಗಳಿಂದ ಔಷಧಿಗಳನ್ನು ಮಾರಾಟ ಮಾಡುತ್ತಿವೆ. ಸಾರ್ವಜನಿಕ ಅಭಿಪ್ರಾಯಗಳಿಗಾಗಿ 2018ರಲ್ಲಿ ಹೊರಡಿಸಲಾದ ಅಧಿಸೂಚನೆ ಈಗ ಅನಗತ್ಯವಾಗಿದೆ.
ಕೋವಿಡ್ ಅವಧಿಯಲ್ಲಿ ಪರಿಚಯಿಸಲಾದ ಆನ್ಲೈನ್ ಪ್ಲಾಟ್ಫಾರ್ಮ್ಗಳನ್ನು ಈಗ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳಿಗೆ ಪದೇ ಪದೇ ಪುರಾವೆಗಳೊಂದಿಗೆ ತಿಳಿಸಲಾಗಿದೆ. ಕಾನೂನುಬಾಹಿರ ಕಾರ್ಯಾಚರಣೆಗಳನ್ನು ಒಪ್ಪಿಕೊಂಡಿದ್ದರೂ ಯಾವುದೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಸಾರ್ವಜನಿಕ ಆರೋಗ್ಯ ಮತ್ತು ಸಣ್ಣ ಚಿಲ್ಲರೆ ವ್ಯಾಪಾರಿಗಳು, ರಸಾಯನಶಾಸ್ತ್ರಜ್ಞರಿಗೆ ಸರಿಪಡಿಸಲಾಗದ ನಷ್ಟವನ್ನು ತಪ್ಪಿಸಬೇಕು. ಅಕ್ರಮ ಆನ್ಲೈನ್ ಔಷಧಿಗಳ ಮಾರಾಟದ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಮಾನ್ಯ ಮತ್ತು ಪರಿಶೀಲಿಸಿದ ಇ-ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಜಿಎಸ್ಆರ್ 817(ಇ), ಜಿಎಸ್ಆರ್ 220(ಇ)ಗಳನ್ನು ತಕ್ಷಣ ಹಿಂಪಡೆಯಬೇಕು. ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಆಳವಾದ ರಿಯಾಯಿತಿ ಪದ್ಧತಿಗಳ ಮೂಲಕ ಪರಭಕ್ಷಕ ಬೆಲೆ ನೀತಿಯನ್ನು ನಿಲ್ಲಿಸಬೇಕು. ದೇಶಾದ್ಯಂತ ಔಷಧಿ ವ್ಯಾಪಾರಸ್ಥರು ಯಾವಾಗಲೂ ಆರೋಗ್ಯ, ರಕ್ಷಣಾ ವಲಯ ಮತ್ತು ಔಷಧ ವ್ಯಾಪಾರಕ್ಕೆ ಬಲವಾದ ಬೆನ್ನೆಲುಬಾಗಿ ಉಳಿದಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಔಷಧಿಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ ಸಾರ್ವಜನಿಕ ಆರೋಗ್ಯ ಮತ್ತು ರೋಗಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಔಷಧಿ ವ್ಯಾಪಾರಸ್ಥರ ಜಿಲ್ಲಾ ಸಂಘದ ಅಧ್ಯಕ್ಷ ಸತ್ಯನಾರಾಯಣ ಕೇಲಗಾರ, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಇರಕಲ್, ತಾಲೂಕು ಅಧ್ಯಕ್ಷ ಷಣ್ಮುಖ ಕೊಟ್ಟೂರ, ಕಾರ್ಯದರ್ಶಿ ಕರಿಬಸಪ್ಪ ನೀಲಗುಂದ, ರಾಜೇಶ ಹಾದಿಮನಿ, ರಮೇಶ ದುರ್ಗದಶಿಮಿ, ಪ್ರೀತೇಶ ಜೈನ್, ಸಂದೀಪ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.