ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬುಡಕಟ್ಟು ಜನಾಂಗದವರನ್ನು ಮುಖ್ಯ ವಾಹಿನಿಗೆ ತರಲೆಂದು ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಬುಡಕಟ್ಟು ಜನಾಂಗದವರು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಿ ಮುಖ್ಯವಾಹಿನಿಗೆ ಬರಲು ಮುಂದಾಗಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ನಗರದ ಕೇರ್ಗಳ್ಳಿಯ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀಬಿರ್ಸಾ ಮುಂಡಾ ಅವರ 150ನೇ ಜಯಂತಿ ಪ್ರಯುಕ್ತ ಜನಜಾತೀಯ ಗೌರವ ದಿವಸ ಸಮಾರಂಭದಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದವರಿಗಾಗಿ ಶ್ರೀಬಿರ್ಸಾ ಮುಂಡ ಅವರ ಹೆಸರಿನಲ್ಲಿ ಇಂದು ಸುಮಾರು 6.600 ಕೋಟಿ ರು.ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, ಶಿಕ್ಷಣಕ್ಕೆ ಏಕಲವ್ಯ ರೆಸಿಡೆನ್ಸಿಯಲ್ ಶಾಲೆಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಪಕ್ಕಾ ಮನೆ, ಸುಸರ್ಜಿತವಾದ ರಸ್ತೆಗಳ ನಿರ್ಮಾಣ, ಟೆಲಿಕಾಂ ಕನೆಕ್ಷನ್, ಸೋಲಾರ್ ಮೂಲಕ ವಿದ್ಯುತ್ ಸಂಪರ್ಕ, ಆಹಾರದಲ್ಲಿ ಇರುವ ಕೊರತೆ ನೀಗಿಸಲು ಪೌಷ್ಟಿಕ ಆಹಾರದ ಪೂರೈಕೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಮಗಳನ್ನು ಒಳಗೊಂಡಿರುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬುಡಕಟ್ಟು ಜನಾಂಗದವರ ಬಗ್ಗೆ, ಅವರು ದೇಶಕ್ಕಾಗಿ ನೀಡಿರುವ ಕೊಡುಗೆಗಳ ಬಗ್ಗೆ ತಿಳಿಸಲು ಪ್ರದರ್ಶನಾಲಯಗಳನ್ನು ಸ್ಥಾಪಿಸಿದ್ದು, ಯುವ ಜನರು ವೀಕ್ಷಿಸಿ ಅವರ ಕೊಡುಗೆಯನ್ನು ಅರಿತುಕೊಳ್ಳಬೇಕು. ಬುಡಕಟ್ಟು ಜನಾಂಗದವರನ್ನು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಿಸಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರವು ಅಗತ್ಯ ಎಂದರು.ಬಿರ್ಸಾ ಮುಂಡ ಅವರ ದಿನವನ್ನು ಜನಜಾತೀಯ ಗೌರವ ದಿನವನ್ನಾಗಿ ಆಚರಣೆ ಮಾಡಲು 2016ರ ಸ್ವತಂತ್ರ ದಿನಾಚರಣೆಯ ವೇಳೆ ತೀರ್ಮಾನಿಸಲಾಯಿತು. 1885ರಲ್ಲಿ ಬಿಹಾರದ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಬಿರ್ಸಾ ಮುಂಡ ಅವರು, ದೇಶದಲ್ಲಿ ಬ್ರಿಟಿಷರು ಆಡಳಿತ ಬಂದಾಗ ಅವರ ಕ್ರೂರ ಆಡಳಿತದ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಡಕ್ಕೆ ಹೋರಾಟ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಬಿಹಾರದಲ್ಲಿ ಬ್ರಿಟಿಷ್ ದೌರ್ಜನ್ಯದ ವಿರುದ್ಧ ಎಲ್ಲರನ್ನು ಒಟ್ಟುಗೂಡಿಸಿ ಹೋರಾಡಿದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಇಂದು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಸರಿ ಸಮಾನರಾಗಿ ಬದುಕಬೇಕು. ಬಡವ ಶ್ರೀಮಂತ ಎನ್ನುವ ಭೇದವಿಲ್ಲದೆ ಪ್ರತಿಯೊಬ್ಬರೂ ಆರ್ಥಿಕವಾಗಿ ಮುಂದೇಬರಬೇಕಾದರೆ, ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಕುಟುಂಬದ ಪ್ರತಿಯೊಬ್ಬರೂ ವಿದ್ಯೆ ಕಲಿಯಬೇಕು. ವಿದ್ಯೆ ಇಲ್ಲದಿದ್ದರೆ ಸ್ವಾವಲಂಬನೆಯಿಂದ ಬದುಕಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬ ಬುಡಕಟ್ಟು ಜನಾಂಗದವರು ಎಲ್ಲರಂತೆ ಮುಖ್ಯ ವಾಹಿನಿಗೆ ಬರಲು ವಿದ್ಯೆ ಕಲಿಯಬೇಕು ಎಂದು ಸಲಹೆ ನೀಡಿದರು.ಪ್ರಸ್ತುತ 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳು ಏಕಲವ್ಯ ವಸತಿ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿದೆ. ಅದನ್ನು ಬಳಸಿಕೊಂಡು ತಮ್ಮನ್ನು ತಾವು ನಂಬಿ ಛಲಬಿಡದೆ ಮುಂದೆ ಬರಬೇಕು ಎಂದರು.
ಸರ್ಕಾರದ ಸಾಲ ಸೌಲಭ್ಯ ಯೋಜನೆ ಬಳಸಿಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಿ, ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ, ನಾವು ಯಾರಿಗೂ ಕಡಿಮೆ ಇಲ್ಲ ಎಂಬoತೆ ಸಮಾಜದಲ್ಲಿ ಬದುಕಬೇಕು. ಇಲ್ಲವಾದರೆ ಸಮಾಜದ ಮುಖ್ಯ ವಾಹಿನಿ ಬರಲು, ಎಲ್ಲರಂತೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದರು.ಅಧಿಕಾರಿಗಳು ವಾರದಲ್ಲಿ ಒಂದು ಬಾರಿಯಾದರು ಬುಡಕಟ್ಟು ಜನರಿರುವ ಸ್ಥಳಗಳಿಗೆ ತೆರಳಿ ಅವರಿಗೆ ತರಬೇತಿಗಳನ್ನು ನೀಡಬೇಕು. ಇಲ್ಲಿನ ಆಗು-ಹೋಗುಗಳ ಬಗ್ಗೆ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ ಅವರನ್ನು ಮುಖ್ಯ ವಾಹಿನಿಗೆ ತರವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಣ್ಣ, ಅತಿ ಸಣ್ಣ ಮತ್ತು ಮದ್ಯಮ ಹಾಗೂ ಕಾರ್ಮಿಕ ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಅದಿವಾಸಿ ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ ಭಗವಾನ್ ಆಗಬಹುದೆಂದು ತೋರಿಸಿದ ವ್ಯಕ್ತಿ ಬಿರ್ಸಾ ಮುಂಡ ಅವರು. ವಿಶಾಲವಾದ ಸಾಮ್ರಾಜ್ಯದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿ. ಕಾಡಿನಲ್ಲಿ ಇರುವ ಗಿಡಮೂಲಿಕೆ ಔಷಧ, ಉತ್ಪನ್ನಗಳು ಆಹಾರವಾಗಿದೆ. ಜೇನುಕುರುಬ, ಕಾಡು ಕುರುಬ ಸೇರಿದಂತೆ ಹಲವಾರು ಸಮುದಾಯಗಳಿಗೆ ಆರೋಗ್ಯ ಶಿಕ್ಷಣ, ಆರ್ಥಿಕ, ಸಾಮಾಜಿಕ ಸೌಲಭ್ಯ ದೊರೆಯಬೇಕು. ವಸತಿ ಯೋಜನೆಯಡಿ ಮನೆ ಮಂಜೂರು ಆಗಿರುವ ಫಲಾನುಭವಿಗಳಿಗೆ ಜಾಗ ಸಿಗದ ಕಡೆಗಳಲ್ಲಿ ಕಂದಾಯ ಭೂಮಿಯನ್ನು ಕೊಡಿಸಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.ಒರಿಸ್ಸಾ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ಕೀಟನಾಶಕ ಬೆರೆಸದೆ ಹಲಸಿನ ಹಣ್ಣು, ಪೈನಾಪಲ್ ಬೆಳೆಯುವ ಕಾರಣ ಈ ಹಣ್ಣುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಬರಲಿದೆ. ಆರೋಗ್ಯಕ್ಕೆ ಒತ್ತು ನೀಡಿರುವ ಕಾರಣ ಸಿಕೆಲ್ ಸೆಲ್ ಅನಿಮೀಯಾ ಪತ್ತೆ ಮಾಡಲು ಪ್ರತಿಯೊಬ್ಬರ ತಪಾಸಣೆ ಮಾಡಿ ಆರೋಗ್ಯ ಸಮಸ್ಯೆ ಪತ್ತೆ ಹಚ್ಚುವ ಕೆಲಸ ಆರಂಭಿಸಲಾಗಿದೆ. ಸ್ವ- ಉದ್ಯೋಗಕ್ಕೆ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಸಾಲ ಕೊಡಿಸುವ ಜೊತೆಗೆ ಮಾರುಕಟ್ಟೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವರ್ಚುವಲ್ ಮೂಲಕ ಕಾರ್ಯಕ್ರಮದ ವೀಕ್ಷಣೆ ಹಾಗೂ ಪ್ರಧಾನ ಮಂತ್ರಿಗಳು ಬಿರ್ಸಾ ಮುಂಡ ಜಯಂತಿಯ ಅಂಗವಾಗಿ ಬುಡಕಟ್ಟು ಸಮುದಾಯದ ಫಲಾನುಭವಿಗಳಿಗೆ ಸಂದೇಶ ನೀಡಿದರು.ಎಚ್.ಡಿ.ಕೋಟೆ ತಾಲೂಕು ಸಿತಾರ, ನೇತ್ರಾವತಿ, ವರ್ಷ ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿರಿಯಾಪಟ್ಟಣ ತಾಲೂಕಿನ ಆಲನಕಟ್ಟೆ ಹಾಡಿಯ ಗೀತಾ, ಸಿದ್ದ ಅವರಿಗೆ ಮನೆ ಬೀಗದ ಕೀ ವಿತರಣೆ, ಜನ್ಧನ್ ಯೋಜನೆಯಡಿ ಬ್ಯಾಂಕ್ ಖಾತೆಯ ಪಾಸ್ ಪುಸ್ತಕವನ್ನು ವೀರಯ್ಯ, ನಾಗಯ್ಯ, ಕರಿಯಯ್ಯ ಅವರಿಗೆ ವಿತರಿಸಲಾಯಿತು.
ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ ಗಾಯತ್ರಿ, ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ, ಬೆಂಗಳೂರಿನ ಪ.ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕ ಟಿ. ಯೋಗೇಶ್, ಬುಡಕಟ್ಟು ಸಮುದಾಯದ ಮುಖಂಡರು ಸೇರಿದಂತೆ ಮೊದಲಾದವರು ಇದ್ದರು.