ಬೇಲೂರು: ಚನ್ನಕೇಶವನ ಜಾತ್ರೋತ್ಸವ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ಶ್ರಮಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕರನ್ನು ಅಭಿನಂದಿಸಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ ಚನ್ನಕೇಶವ ಜಾತ್ರಾ ಮಹೋತ್ಸವ ದೇಗುಲದ ಉತ್ಸವ ಸೇರಿದಂತೆ ಇತ್ಯಾದಿ ಪೂಜೆಗಳು 15 ದಿನಗಳಿಂದ ನಡೆದಿದ್ದು ಈ ಸಂದರ್ಭದಲ್ಲಿ ಸ್ವಚ್ಛತೆ ಕಾರ್ಯ ನಡೆಸಿಕೊಡುವಲ್ಲಿ ಪುರಸಭೆಯ ಪೌರಕಾರ್ಮಿಕರ ಶ್ರಮ ಅಪಾರವಾಗಿದೆ. ಹಗಲು-ರಾತ್ರಿ ಎಂಬುದಿಲ್ಲದೆ, ಮಳೆಯ ನಡುವೆಯೂ ಎಲ್ಲಾ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಂಡು ಯಾವುದೇ ಸಮಸ್ಯೆ ಉಂಟಾಗದಂತೆ ಶ್ರಮಿಸಿದ್ದಾರೆ. ಇವರ ಸೇವೆಗೆ ಸರಿಸಾಟಿಯೇ ಇಲ್ಲ. ಸಾಂಕೇತಿಕವಾಗಿ ಸನ್ಮಾನ ಮಾಡುತ್ತಿದ್ದರೂ, ಅವರ ಸೇವೆ ಅಮೂಲ್ಯ ಎಂದು ಹೇಳಿದರು.ಇದೇ ವೇಳೆ ಆರೋಗ್ಯ ನಿರೀಕ್ಷಕ ಲೋಹಿತ್, ಮುಖ್ಯಾಧಿಕಾರಿ ಬಸವರಾಜ್ ಶಿಗ್ಗಾವಿ ಹಾಗೂ ಅಧ್ಯಕ್ಷೆ ಉಷಾ ಸತೀಶ್ ಅವರ ಸಹಕಾರವನ್ನು ಅವರು ಪ್ರಶಂಸಿಸಿದರು.ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ ಜಾತ್ರೆ ಸಮಯದಲ್ಲಿ ಪೌರಕಾರ್ಮಿಕರು ಹಗಲು-ರಾತ್ರಿ ದುಡಿದು ಸ್ವಚ್ಛತೆ ಕಾಪಾಡಿದ್ದಾರೆ. ಕುಡಿಯುವ ನೀರಿನ ಸ್ವಚ್ಛತೆ, ಕಲ್ಯಾಣಿ ಸ್ವಚ್ಛತೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಸಮರ್ಪಕವಾಗಿ ಕೆಲಸ ಮಾಡಿದ್ದಾರೆ. ತಾಲೂಕು ಆಡಳಿತ, ದೇವಸ್ಥಾನ ಸಮಿತಿ ಮತ್ತು ಪುರಸಭೆ ಎಲ್ಲರೂ ಒಟ್ಟಾಗಿ ತಂಡ ಕಾರ್ಯದ ಮೂಲಕ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು.ದೇಗುಲದ ಇಒ ಯೋಗೇಶ್ ಮಾತನಾಡಿ, ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರೂ ಯಾವುದೇ ಲೋಪವಿಲ್ಲದೆ ಸ್ವಚ್ಛತೆಯನ್ನು ಕಾಪಾಡಿದ ಪೌರಕಾರ್ಮಿಕರಿಗೆ ದೇವಸ್ಥಾನದ ಪರವಾಗಿ ಕೃತಜ್ಞತೆ ಸಲ್ಲಿಸಿ ಮುಂದೆಯೂ ಇಂತಹ ಸೇವೆ ಸಲ್ಲಿಸಲು ದೇವರು ಅವರಿಗೆ ಶಕ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾಂವಿ, ಪುರಸಭೆ ಸದಸ್ಯರು, ಪೌರಕಾರ್ಮಿಕರು ಹಲವರು ಉಪಸ್ಥಿತರಿದ್ದರು.