ಹಲವು ವರ್ಷಗಳಿಂದ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೋಸ್ಕರ ತಯಾರಿ ನಡೆಸುತ್ತಿದ್ದ ಮಾರುತಿ (ಮರೆಪ್ಪ)ನ ಅಕಾಲಿಕ ಸಾವು ನೋವಿನ ಸಂಗತಿ. ಇವರಂತೆಯೇ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಮನೆ-ಊರು ಬಿಟ್ಟು ಸಾಲ ಮಾಡಿಯೋ, ಹೊಟ್ಟೆ ಕಟ್ಟಿಯೋ ಧಾರವಾಡದಲ್ಲಿ ಪ್ರತಿದಿನ ಕಷ್ಟಪಟ್ಟು ಓದುತ್ತಿದ್ದಾರೆ.
ಧಾರವಾಡ:
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ನಡೆಸುತ್ತಿದ್ದ ಸುರಪುರದ ಉದ್ಯೋಗಾಕಾಂಕ್ಷಿ ಮಾರುತಿ ಹೃದಯಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದು, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಮಿಚಗಿನ ಕಾಂಪೌಂಡ್ ಪಾರ್ಕ್ನಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾರುತಿ ಅವರ ಭಾವಚಿತ್ರಕ್ಕೆ ಎಲ್ಲ ಉದ್ಯೋಗಾಕಾಂಕ್ಷಿಗಳು ಪುಷ್ಪ ನಮನ ಸಲ್ಲಿಸಿದರು.ಸಮಿತಿಯ ರಾಜ್ಯ ಸಹ ಸಂಚಾಲಕ ಭವಾನಿಶಂಕರ್ ಗೌಡ ಮಾತನಾಡಿ, ಹಲವು ವರ್ಷಗಳಿಂದ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೋಸ್ಕರ ತಯಾರಿ ನಡೆಸುತ್ತಿದ್ದ ಮಾರುತಿ (ಮರೆಪ್ಪ)ನ ಅಕಾಲಿಕ ಸಾವು ನೋವಿನ ಸಂಗತಿ. ಇವರಂತೆಯೇ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಮನೆ-ಊರು ಬಿಟ್ಟು ಸಾಲ ಮಾಡಿಯೋ, ಹೊಟ್ಟೆ ಕಟ್ಟಿಯೋ ಧಾರವಾಡದಲ್ಲಿ ಪ್ರತಿದಿನ ಕಷ್ಟಪಟ್ಟು ಓದುತ್ತಿದ್ದಾರೆ. ಆದರೆ, ರಾಜ್ಯಸರ್ಕಾರ ಕಳೆದ ಮೂರು ವರ್ಷಗಳಿಂದ ಕೇವಲ ಭರವಸೆ ನೀಡುತ್ತಾ ಬಂದಿದೆಯೇ ಹೊರತು ನೇಮಕಾತಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕಾರಣಿಗಳ ಆಶ್ವಾಸನೆ ನಂಬಿ ಓದುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಅತ್ತ ನೇಮಕಾತಿ ಇಲ್ಲದೇ, ಇತ್ತ ಬದುಕು ಸ್ಥಿರವಿಲ್ಲದೇ ಮಾನಸಿಕವಾಗಿ ಕುಗ್ಗುವಂತಹ ಪರಿಸ್ಥಿತಿ ಎದುರಿಸುತ್ತಿದಾರೆ. ಗುಣಮಟ್ಟದ ಊಟದ ಕೊರತೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿವೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಜಯನಗರ, ಸಪ್ತಾಪುರ, ಶ್ರೀನಗರ, ಕಲ್ಯಾಣನಗರ ಭಾಗದಲ್ಲಿ ನಿಯಮಿತವಾಗಿ ಗುಣಮಟ್ಟದ ಆಹಾರ ದೊರಕುವಂತೆ ಪರಿಶೀಲಿಸಲು ಆಗ್ರಹಿಸಿದರು.ಸಮಿತಿಯ ಅಮೃತ್ ಜಿ. ಕೊಂಡಿಕೊಪ್ಪ, ಯಲ್ಲಪ್ಪ ದೊರೆ, ಮಲ್ಲೇಶ್ ಚೌಹಾಣ್ ಹಾಗೂ ಉದ್ಯೋಗಾಕಾಂಕ್ಷಿಗಳಿದ್ದರು.